Sunday, April 26, 2009

ಅಣ್ಣ ಎದ್ದು ನಿಂತೊಡಂ ಎದುರಿಗಿದ್ದವರ್ ಗಡಗಡ...


ಅಣ್ಣಾ, ಬೋದಿಲೇರ್ ನ ಪದ್ಯ ಓದ್ತಾ ಇದ್ದೀನಿ. ಎಂತಾ ಕಿಕ್ಕು ಗೊತ್ತಾ... ನಾನೇ ಬೋದಿಲೇರಾ ಅನ್ನೋ ಫೀಲು ಶುರುವಾಗಿದೆ. ಆದ್ರೆ ಅಣ್ಣಾ ಇಲ್ಲೊಂದು ಪದ್ಯ ಇದೆ. ಅದು ಮಾತ್ರ ಹೇಗೆ ಓದಿದ್ರೂ ಅರ್ಥ ಆಗ್ತಾ ಇಲ್ಲಾ ಅಂತ ಮಹಾರಾಜ ಕಾಲೇಜಿನಲ್ಲಿ ಖ್ಯಾತಿವೆತ್ತಿದ್ದ ವಿಮರ್ಶಕ, ಚಿಂತಕ, ಬಸವಜ್ಞಾನಿ ನಂದೀಶ್ ಅಂಚೆಗೆ ನನ್ನ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದ ವಿಚಿತ್ರ ಅರ್ಥದ ಪದ್ಯವೊಂದನ್ನು ತೋರಿಸಿದ್ದೆ. ಆ ಪದ್ಯದ ಮೊದಲ ಸಾಲುಗಳು ಹೀಗಿದ್ದವು...

ಅವಳು ಕರ್ರಗಿರಬಹುದು
ಮೋಳೆ
ಚಕ್ಕಳಗಳ ಗೂಡಾಗಿರಬಹುದು
ಆದರೆ ಅವಳೆಷ್ಟು ಸುಖ ಕೊಡುತ್ತಾಳೆ...

ಮೈಥುನಕ್ಕೆ ಇಳಿದ ನಾಯಿಮರಿಗಳಂತೆ

ಕೊಚ್ಚೆಯಿಂದ ಎದ್ದು ಬರುತ್ತಿರುವ

ಹಂದಿಮರಿಗಳ ಹಿಂಡಿನಂತೆ...


ಈ ಹಾದಿಯಲ್ಲಿದ್ದ ಪದ್ಯವನ್ನು ದಿವ್ಯ ಧ್ಯಾನದಲ್ಲಿ ಓದಿದ ನಂದೀಶ್ ಎರಡು ಮೂರು ನಿಮಿಷ ತಡೆದು ಶುರುಮಾಡಿದ...
"ನೋಡು ಈ ಪದ್ಯವನ್ನು ನೋಡೋ ದೃಷ್ಠೀನೆ ಬೇರೆತರ. ವಿಮರ್ಶೆಯ ಪರಿಭಾಷೆಯಲ್ಲಿ ಹೇಳುವುದಾದರೆ ಇಲ್ಲಿ ಎರಡು ಆಯಾಮ ಇದೆ. ಜಗತ್ತಿನ ಶ್ರೇಷ್ಠ ಸಾಹಿತ್ಯವನ್ನು ಓದಿ ಗ್ರಹಿಸಿದ್ದೇ ಆದ್ರೆ, ಈ ಪದ್ಯದ ಗ್ರಹಿಕೆ ಸುಲಭ. ಈ ಪದ್ಯದ ಗತಿ ಇದೆಯಲ್ಲಾ, ಅದನ್ನು ಲಂಕೇಶರು ಮಾತ್ರ ಹೀಗೆ ಬರೆಯಬಲ್ಲರು. ಅವರೊಬ್ಬರೇ ಕನ್ನಡದ ಮೋದಿಲೇರ್. ಹೀಗೆ ಶುರುಮಾಡಿದ ನಂದೀಶ್ ನಾಲ್ಕೈದು ಸಾಲಿನ ಆ ಪದ್ಯವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ವಿಮರ್ಶೆ ಮಾಡಿದ್ಧೇ ಮಾಡಿದ್ದು... ನಾನು ಮತ್ತು ಅಭಿನಂದ ಒಳಗೊಳಗೇ ಕಳ್ಳ ನಗು ನಗುತ್ತಾ ಆಹಾ... ಆಹಾ... ಅಂತಾ ಕೇಳಿದ್ವಿ...

ಮಹಾರಾಜ ಕಾಲೇಜಿನ ಬಹುತೇಕ ಯುವ ಸಾಹಿತಿಗಳ ಆರಾಧ್ಯ ದೈವವಾಗಿದ್ದ ನಂದೀಶ್ ಅವರ ಬುದ್ಧಿಮತ್ತೆಗೆ ಸಾಟಿಯೇ ಇರ್ತಾ ಇರ್ಲಿಲ್ಲ. ಚರ್ಚೆಗೆ ನಿಂತರೆ ಸೂರ್ಯನ ಕೆಳಗೆ, ಸೂರ್ಯನ ಆಚೆಗೆ ನಡೆಯೋ ಸಂಗತಿಗಳನ್ನೆಲ್ಲಾ ನಂದೀಶ್ ವಿವರಿಸುತ್ತಿದ್ದ ರೀತಿಗೆ ತಲೆ ಬಾಗದವರೇ ಇರಲಿಲ್ಲ.

ಕಾಲೇಜು ಕ್ಯಾಂಟೀನಿನ ಮಗ್ಗುಲಲ್ಲಿ ದಿನವೂ ನಂದೀಶ್ ಅಂಚೆಯ ಚರ್ಚೆಗಳಲ್ಲಿ ಪಾಲ್ಗೊಂಡಿದ್ದ ನಮ್ಮ ಗೆಳೆಯರೆಲ್ಲಾ ಅವನಿಗಿದ್ದ ಅಪಾರ ಸಾಹಿತ್ಯ ಜ್ಞಾನ, ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಪಂಪ, ರನ್ನ, ಪೊನ್ನ, ಜನ್ನ, ಆದಿ ಪುರಾಣ, ಅಂತ್ಯ ಪುರಾಣ, ಯಾವ್ಯಾವುದೋ ಪುಠದ ಸಾಲುಗಳನ್ನೆಲ್ಲಾ ತನ್ನ ಚರ್ಚೆಯಲ್ಲಿ ಬಳಸುತ್ತಾ ಹರಳು ಉದುರಿದಂತೆ ಬಸವಣ್ಣನ ವಚನ ಹೇಳುತ್ತಾ ಎಂತೆಂತದೋ ಜಠಿಲ ಸಾಹಿತ್ಯ ಸಂಘರ್ಷಗಳನ್ನೆಲ್ಲಾ ವಿವರಿಸುತ್ತಿದ್ದ.

ನಾನೋ ಆವರೆಗೆ ಓದಿದ್ದು ಬರೀ ನಾಲ್ಕೈದು ಪುಸ್ತಕ ಮಾತ್ರ. ನಂದೀಶನ ಜ್ಞಾನ ಬಂಡಾರ ಕೇಳಿ ಸಾಹಿತ್ಯದ ಸಹವಾಸವೇ ಬೇಡ... ಸಮುದ್ರದಲ್ಲಿ ಈಜೋ ಉದ್ದೇಶ ನಮಗಿಲ್ಲಾ ಅಂದುಕೊಳ್ಳುತ್ತಾ ನಂದೀಶನ ಜೊತೆಗಿರ್ತಿದ್ವಿ. ಆ ಕಾಲಕ್ಕೆ ಬುದ್ದಿಜೀವಿ ಬಳಗದಲ್ಲಿ ಕುಖ್ಯಾತರಾಗಿದ್ದ ಸುನೀಲ್ ಬಾದ್ರಿ ಕೇಶವಾಚಾರ್ಯ ನಾವು ಹುಟ್ಟಿದಾಗಲಿಂದ ಯಾವತ್ತೂ ಕೇಳಿಯೇ ಇಲ್ಲದ ಇಂಗ್ಲೀಷ್ ಸಾಹಿತಿಗಳ ಹೆಸರನ್ನ ಹೇಳುತ್ತಾ ಅವರ ಪದ್ಯದ ಸಾಲುಗಳನ್ನ ಕೋಟ್ ಮಾಡುತ್ತಾ ವಾಸ್ತವದ ಘಟನೆಗಳಿಗೆ ರಿಲೇಟ್ ಮಾಡ್ತಿದ್ದ. ನಂದೀಶ್ ಅಂಚೆ, ಸುನೀಲ್ ಬಾದ್ರಿ ಕೇಶವಾಚಾರ್ಯ ನಾವು ಓದುತ್ತಿದ್ದ ಕಾಲಕ್ಕೆ ಮಹರಾಜಾ ಕಾಲೇಜಿನ ಉಪನ್ಯಾಸಕರಿಗಿಂತ ದೊಡ್ಡ ಹೀರೋಗಳೆಂಬುದು ನಮ್ಮಂತ ಹಲವು ಅಮಾಯಕರ ತೀರ್ಮಾನವಾಗಿತ್ತು.

ಯಾವ ಕ್ಷಣದಲ್ಲಿ ನನಗೆ ಅಂತಹ ಕುತಂತ್ರಿ ಯೋಚನೆ ಬಂತೋ ಗೊತ್ತಿಲ್ಲ. ಲಂಕೇಶರ ಪಾಪದ ಹೂಗಳು ಪುಸ್ತಕ ಓದುತ್ತಿದ್ದ ನಾನು ಅದರಲ್ಲಿದ್ದ ಬೋದಿಲೇರನ ದಾಟಿಯ ಪದ್ಯವೊಂದನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಗೀಚಿದ್ದೆ. ಅಚಾನಕ್ಕಾಗಿ ನಮ್ಮ ಹಾಸ್ಟೆಲ್ ರೂಮಿಗೆ ಬಂದ ವಿಮರ್ಶಕ ನಂದೀಶ್ ಅಂಚೆಗೆ ತೋರಿಸಿ ಇದು ಬೋದಿಲೇರನ ಪದ್ಯ. ನನಗ್ಯಾಕೋ ಅರ್ಥ ಆಗ್ತಾ ಇಲ್ಲಾ. ಸ್ವಲ್ಪ ಹೇಳು ಮಾರಾಯ ಅಂಥ ಕೇಳಿದೆ. ನಮ್ಮನ್ನು ಅಮಾಯಕರೆಂದು ಬಗೆದ ನಂದೀಶ್ ಹಿಂದೂ ಮುಂದೂ ನೋಡದೆ ಬಾರೀ ವಿಮರ್ಶೆಗೆ ಸಿದ್ಧವಾಗಿ ಅರ್ಧ ಗಂಟೆ ಭಾಷಣ ಬಿಗಿದ. ನಾನೇ ಬರೆದ ಪದ್ಯದ ಬಗ್ಗೆ ನನಗೇ ಅನುಮಾನ ಬರುವಷ್ಟು ಪ್ರಬುದ್ಧವಾಗಿತ್ತು ಅವನ ಭಾಷಣ.

ಕೆಲ ದಿನಗಳ ನಂತರ, ಕ್ಯಾಂಟೀನ್ ನಲ್ಲಿ ಬಾರೀ ಚರ್ಚೆ ನಡೆಯುತ್ತಿರುವಾಗ ನಾನು ಮತ್ತು ಅಭಿ ಮಾಡಿದ್ದ ಕುತಂತ್ರಿ ಘಟನೆಯನ್ನು ಹೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ವಿ. ನಮ್ಮಿಂದ ಇಂತದ್ದೊಂದು ಸಂದರ್ಭವನ್ನು ನಿರೀಕ್ಷಿಸದಿದ್ದ ನಂದೀಶ್ ನಾವು ಕಣ್ಣಿಗೆ ಬಿದ್ದಾಗಲೆಲ್ಲಾ, "ಮಕ್ಕಳಾ... ನನ್ನನ್ನೇ ಟ್ರ್ಯಾಪ್ ಮಾಡ್ತೀರಾ... ನೋಡ್ಕೋತೀನಿ... ನೋಡ್ಕೋತೀನೀ..." ಅಂತಾ ಹೇಳ್ತಿದ್ದ. ನಮಗೆ ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲಾ.

ಈಗಲೂ ನಮ್ಮ ಸ್ನೇಹಿತರ ಬಳಗದಲ್ಲೇ ಇರುವ ನಂದೀಶ್ ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕ. ಪ್ರಖಾಂಡ ಮಾತುಗಾರ, ಎದ್ದು ನಿಂತೊಡಂ, ಎದುರು ನಿಂತವರ್ ಗಡಗಡ!!!

6 comments:

  1. Nandish panditya nijakkoo antahude...namage vichitravoo vismayavoo agi kanuttiddudaralli samshayave ill...nijakkoo a ghatane nenesikondare egaloo nage ukki barutte...adare avru eshto bari nammannu oduvante madirodu kuda dita...e june 13 eke Sharanara vimarsha lekhana gala pustaka bidugade ide....

    ReplyDelete
  2. ಗೌಡ್ರೆ,

    ಬ್ಲಾಗ್ ಗೆ ಕಾಲಿಟ್ಟು ಇಂದು ಓದಿದೆ
    ಆಶ್ಚರ್ಯ ಆಯಿತು
    ನಿಮ್ಮ ಬರವಣಿಗೆಯ ಗಮ್ಮತ್ತು ಅಥವಾ ಸೊಗಡು ನನಗೆ ಇಷ್ಟು ದಿನ ಗೊತ್ತೇ ಇರಲಿಲ್ಲವಲ್ಲ ಅಂತ.
    ನೀವು ಮಾತಿನಲ್ಲಿ ಮಾತ್ರ ಮಲ್ಲರು ಅಂದುಕೊಂಡಿದ್ದೆ ಆದರೆ ಬರವಣಿಗೆಯಲ್ಲೂ...
    ನಿಮ್ಮೊಳಗೆ ಒಬ್ಬ ಕಥೆಗಾರನಿದ್ದಾನೆ
    ಅವನಿಗೆ ಸೂಕ್ಷ್ಮವಾಗಿ ಗಮನಿಸುವುದೂ ಗೊತ್ತು, ಅದನ್ನು ಚಂದವಾಗಿ ಬರೆಯುವುದೂ ಗೊತ್ತು
    ದೂರದ ದೆಹಲಿಯ ಮಾಯೆಗೆ ಸಿಕ್ಕಿ ಎಷ್ಟ್ಗೋ ಜನ ತಮ್ಮ ಅರಿವು ಹಾಗೂ ಇರವು ಎರಡನ್ನೂ ಕಳೆದುಕೊಂಡಿರುವಾಗ ನೀವು ಬರವಣಿಗೆಗೆ ಇಳಿದಿದ್ದೀರಲ್ಲ ಅದೇ ಸೋಜಿಗ ಹಾಗೂ ನಿಮ್ಮ ಬಗ್ಗೆ ಇನ್ನಷ್ಟು ವಿಶ್ವಾಸ ಬೆಳೆಯಲು ಕಾರಣ

    ಹಾಳಾಗಿ ಹೋಗ್ಲಿ
    ಬೆಂಗಳೂರಿನಲ್ಲಿ ಆಗಲೇ ಮಳೆ ಇಣುಕಿದೆ
    ಬಿರು ಬೇಸಿಗೆಯ ಸಂಜೆ ನಿಮ್ಮ ನೀಲುವಿನಂತ ಕವನಗಳನ್ನು ಕೇಳುತ್ತಾ, ಅಸಡ್ಡಾಳ ಮಾತಿಗೆ ಕಿವಿಯಾಗುತ್ತಾ ತಣ್ಣನೆ ಬಿಯರ್ ಹೀರುವ ಕನಸನ್ನೂ ಹಾಳು ಮಾದುತ್ತಿದ್ದೀರಲಾ ಎನ್ನುವುದೇ ಅಂಚೆಮನೆ ರಘುವಿನ ನೋವು
    ಬೇಗ ಬನ್ನಿ

    ReplyDelete
  3. ಗೌಡ ನಿನ್ನ ನೆನಪುಗಳು ಕಾಲೇಜಿನ ದಿನಗಳನ್ನ ಮರುಕಳಿಸುತ್ತದೆ... ಆದರೆ ನಮ್ಮ ಆ ದಿನಗಳು ಮತ್ತೆ ಬರಲ್ಲ...
    ಒಂದೊಂದು ಸರಿ ನಮ್ಮ ಅಣ್ಣ ನಿಮ್ಮೆಲ್ಲರನ್ನ ನೋಡಿ.... ನಾನು Engineering ಓದದೆ ನಿಮ್ಮ ಜೊತೇನೆ ಇರಬೇಕಿತ್ತು ಅಂತ ಅನ್ನಿಸುತ್ತದೆ. After Enginneering we became mechanics our friendship became machine. Keep in touch with everyone without contact... ಎಲ್ಲ ಫ್ರೆಂಡ್ಸ್ ಹೇಳೋದು ಒಂದೇ ಮಾತು ಸ್ವಲ್ಪ ಬ್ಯುಸಿ ಇದೀನಿ ಮಗ ಅಮೆಲೇ ನಾನೆ call ಮಾಡ್ತಿನಿ.

    ReplyDelete
  4. ನಂದೀಶ ಅಂದಿಗೆನೆ ನಮ್ಮ ನಡುವಿನ ಬುದ್ದಿಜೀವಿ,ವಿಚಾರ ಶೀಲ ವಿಮರ್ಶಕ,ಇವ ಏನೇನು ಓದಿದ್ದಾನೆ ಮಾರಾಯ ಅನ್ನಿಸಿತ್ತಿತ್ತು ಅವನ ಮಾತಿನ ದಾಟಿಗೆ ಮೊಡಿಯಾಗದವರೆ ಇಲ್ಲ ಎನುವಂತೆ, ಗೌಡನ ಕುತಂತ್ರ ಅವನನ್ನ ಕೆಲದಿನ ತಬಿಬ್ಬು ಗೊಳಿಸಿತ್ತು ಮಹಾರಾಜ ಕಾಲೇಜಿನ ನಮ್ಮ ಬಳಗ ಮರೆಯಲಾಗದ ನೆನಪುಗಳಲಿ ಇದು ಒಂದು ನಮ್ಮ ಗುಂಡು ಗೋಷ್ಠಿ ಗಲ್ಲಿ ಇಂದಿಗೂ ಆ ಘಟನೆಯ ನೆನೆದು ನಗುತ್ತೇವೆ.....ಪಾಪ ನಂದೀಶ ಎನುವಂತೆ

    ReplyDelete
  5. ನಂದೀಶ ಅಂದಿಗೆನೆ ನಮ್ಮ ನಡುವಿನ ಬುದ್ದಿಜೀವಿ,ವಿಚಾರ ಶೀಲ ವಿಮರ್ಶಕ,ಇವ ಏನೇನು ಓದಿದ್ದಾನೆ ಮಾರಾಯ ಅನ್ನಿಸಿತ್ತಿತ್ತು ಅವನ ಮಾತಿನ ದಾಟಿಗೆ ಮೊಡಿಯಾಗದವರೆ ಇಲ್ಲ ಎನುವಂತೆ, ಗೌಡನ ಕುತಂತ್ರ ಅವನನ್ನ ಕೆಲದಿನ ತಬಿಬ್ಬು ಗೊಳಿಸಿತ್ತು ಮಹಾರಾಜ ಕಾಲೇಜಿನ ನಮ್ಮ ಬಳಗ ಮರೆಯಲಾಗದ ನೆನಪುಗಳಲಿ ಇದು ಒಂದು ನಮ್ಮ ಗುಂಡು ಗೋಷ್ಠಿ ಗಲ್ಲಿ ಇಂದಿಗೂ ಆ ಘಟನೆಯ ನೆನೆದು ನಗುತ್ತೇವೆ.....ಪಾಪ ನಂದೀಶ ಎನುವಂತೆ

    ReplyDelete
  6. ಎಲ್ಲೊ ಕಳೆದು ಹೋದ ದಿನಗಳು, ಬದುಕಿನ ಅನುಭವಗಳು ಈ ಮಾಯಾ ಕಿಟಕಿಯಲ್ಲಿ ಸುಂಧರ ದ್ರುಶ್ಯವಾಗಿದ್ದು ನನಗೊಂತು ಖುಷಿ ತಂದಿದೆ. ಬರಹಗಳನು ಓದುವಾಗ ಎಲ್ಲೆಲ್ಲೊ ಗೌಡ ನಿಂತು ಬಾಷಣ ಮಾಡ್ತ್ಹಿದನೇನೋ ಅನಿಸುಥೆ.
    ಈ ಕಸಗಿ ಕಥೆ ಸಾರ್ವಜನಿಕ ಆಗ್ತಿರೋದು ಖುಷಿ, ಎಲ್ಲೊ ಸ್ವಲ್ಪ ಭಯ ಆಗ್ತಿದೆ. ಸ್ವಲ್ಪ ನೋಡಿ ಮಾಡಿ ಬರಿ ಮಹರಾಯ.
    ಎಲ್ಲ ಬರದು ಹರಾಜು ಮಾಡಿಯ. "ಯಾರ ಅನುಬವಗಳು ಸ್ವಂತ ಅವನ ಬದುಕೇ ಶ್ರೀಮಂತ"
    ಅಭಿನಂದ ಭಾನಂಕಿ

    ReplyDelete