Friday, July 31, 2009

ಮಲ್ಯನ ಆತ್ಮಕ್ಕೆ ಶಾಂತಿ ಸಿಗಲಿ...!!



ದೇಶದಲ್ಲಿರೋ ಎಪ್ಪತೈದು ಪರ್ಸೆಂಟು ರೈತರು ನಾವು 6 ತಿಂಗಳೂ ಏನೂ ಬೆಳಿಯೋದಿಲ್ಲ, ವೀ ಆರ್ ಬ್ಲೀಡಿಂಗ್, ವಿ ಆರ್ ಡೈಯಿಂಗ್, ವಿ ಡೋಂಟ್ ಕಾಲಿಟ್ ಯಾಸ್ ಸ್ಟ್ರೈಕ್. ಇಟ್ ಈಸ್ ಜಸ್ಟ್ ಟು ಕಾಲ್ ದ ಅಟೆನ್ ಶನ್ ಆಪ್ ಗೌರ್ನಮೆಂಟ್ ಅಂಥ,
ವಿಶ್ವಕ್ಕೆ ಅರ್ಥ ಆಗೋ ಆಂಗ್ಲ ಭಾಷೆಯಲ್ಲಿ ಹೇಳಿದ್ರೆ ಏನಾಗಬಹುದು ಅಂತ ನಂಗೆ ಯೋಚನೆ ಬಂದಿದೆ.

ಯಾಕಂದ್ರೆ ನಿನ್ನೆ ಕಿಂಗ್ ಫಿಷರ್ ನ ವಿಜಯ್ ಮಲ್ಯ, ಜಟ್ ಏರ್ ವೇಸ್ ನ ನರೇಶ್ ಗೋಯಲ್ ಮುಂಬೈನ ಪತ್ರಿಕಾಗೋಷ್ಠಿಯಲ್ಲಿ ಅದನ್ನೇ ಹೇಳುತ್ತಿದ್ದರು.ಖಾಸಗಿ ವಿಮಾನ ಯಾನ ಸಂಕಷ್ಠದಲ್ಲಿದೆ, ನಾವು ಸಾಯ್ತಾ ಇದ್ದೇವೆ, ದಿನಾ ಕೋಟಿ,ಕೋಟಿ ನಷ್ಟ ಆಗ್ತಾ ಇದೆ .ವಿಮಾನಕ್ಕೆ ಪೆಟ್ರೋಲ್ ಹಾಕಿಸಕ್ಕೆ ಕಾಸಿಲ್ಲ, ಬ್ಯಾಂಕ್ ನಲ್ಲಿ ಸಾಲ ತಂದ್ರೆ ಮಾತ್ರ ವಿಮಾನ ಓಡಿಸೋಕೆ ಇಲ್ಲಾ ಅಂದ್ರೆ ಆಗಲ್ಲ. ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಆದ್ರೂ ಪ್ಯಾಕೇಜ್ ಕೊಡಬೇಕು ಇಲ್ಲಾ ಅಂದ್ರೆ. ಆಗಸ್ಟ್ 18 ಕ್ಕೆ ದೇಶದಾದ್ಯಂತ ವಿಮಾನಯಾನ ನಿಲ್ಲಿಸುತ್ತೇವೆ, ಅಂತ ಓಕ್ಕೊರಲಿನಿಂದ ಸರ್ಕಾರಕ್ಕೆ ಧಮಕಿ ಹಾಕಿದ್ದಾರೆ.

ಅವರೆಲ್ಲ ಧಮಕಿ ಹಾಕಿದಂತೆ ದೇಶದ ರೈತರೂ ಯಾವತ್ತಾದರೂ ಧಮಕಿ ಹಾಕಿದ್ದಾರಾ. ಹಾಕಿದ್ರೆ ಏನು ಆಗುತ್ತೆ ಅಂತ ಯೋಚನೆ ಮಾಡ್ತಾ ಇದ್ದೇನೆ.
ನಮ್ಮ ರೈತರದು ಬರೀ ಬ್ಲೀಡಿಂಗ್ ಅಲ್ಲ. ಹುಟ್ಟಿದಾಗಲಿಂದಲೇ ಡೈಯಿಂಗ್, ಸಾಲ ಮಾಡದೇ ನಮ್ಮ ರೈತರು ಎಲ್ಲಿ ಬೆಳೆಹಾಕಿದ್ದಾರೆ ಹೇಳಿ, ನಮ್ಮ ಜೀವನವೇ ಸಾಲ, ಅವ ಸತ್ತ ಮೇಲೆ ಮಕ್ಕಳ ಮೇಲೆ ಸಾಲ, ಸಾಲವೇ ನಮ್ಮ ಬದುಕು, ಸಾಲವೇ ಜೀವನ ಸಾಕ್ಷಾತ್ಕಾರ.

ಇಲ್ಲಿ ಡೆಲ್ಲಿಗೆ ಆಗಾಗ ರೈತರು ನಿಯೋಗ ಮಾಡಿಕೊಂಡು ಬರುತ್ತಾ ಇರುತ್ತಾರೆ, ನಮಗೆ ಪರಿಹಾರ ಕೊಡಿ. ಅಡಿಕೆ ಬೆಲೆ ಕುಸಿದಿದೆ ಬೇರೇ ದೇಶದಿಂದ ಆಮದು ಮಾಡಿಕೊಳ್ಳಬೇಡಿ. ಕೊಬ್ಬರಿಗೆ ಕನಿಷ್ಠ (ಧರ್ಮದ) ಬೆಲೆಕೊಡಿ, ನಮ್ಮ ಷುಗರ್ ಪ್ಯಾಕ್ಟರಿಗಳು ಸಾಯ್ತ ಇವೆ ಸಹಾಯಹಸ್ತಕೊಡಿ. ಕಾಫಿಯನ್ನ ಯಾರೂ ಕೇಳ್ತಾ ಇಲ್ಲ, ನೆರವುಕೊಡಿ ಅಂತ. ಬಂದವರು ತಮಗೆ ಗೊತ್ತಿರುವ ಮಂತ್ರಿಗಳನ್ನು ಹಿಡಿದುಕೊಂಡು, ಸಂಭಂದ ಪಟ್ಟ ಮಂತ್ರಿಗಳನ್ನ ಭೇಟಿಯಾಗಿ ಮನವಿ ಕೊಟ್ಟು ಬರುತ್ತಾರೆ.
ಮಂತ್ರಿಯನ್ನು ಭೇಟಿ ಮಾಡಿ ತಮ್ಮ ಸಂಕಷ್ಠ ಹೇಳಿಕೊಂಡಿದ್ದಕ್ಕೆ, ಆತ ಅದನ್ನು ಸಾವಾಕಾಶವಾಗಿ ಕೇಳಿದ್ದಕ್ಕೆ, ನಮ್ಮ ರೈತ ಮುಖಂಡರು ಅತೀವ ಸಂತೋಷದಿಂದ ಬೀಗುತ್ತಾರೆ. ಮಾದ್ಯಮದವರನ್ನ ಕರೆದು ಹೇಳುತ್ತಾರೆ, ನಮಗೆ ಭರವಸೆ ಸಿಕ್ಕಿದೆ, ಮಂತ್ರಿಗಳು ಇನ್ನೆರಡು ವಾರಗಳಲ್ಲಿ ಸಮಸ್ಯೆ ಪರಿಹರಿಸುತ್ತಾರಂತೆ, ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತಾರಂತೆ. ಅದು ಟಿ.ವಿ ಮತ್ತು ಪೇಪರಿನಲ್ಲಿ ಒಂದು ಸಣ್ಣ ಸುದ್ದಿಯಾಗಿ ಬರುತ್ತೆ.

ಕೆಲವು ತಿಂಗಳ ನಂತರ ಅದೇ ನಿಯೋಗದ ರೈತರು ಮತ್ತೆ ರೈಲು ಹತ್ತಿ ಮತ್ತೆ ಡೆಲ್ಲಿಗೆ ಬರುತ್ತಾರೆ, ಅದೇ ಸಮಸ್ಯೆ, ಅದೇ ಮಂತ್ರಿ, ಅದೇ ಭರವಸೆ, ಮತ್ತು ಅದೇ ಮಾದ್ಯಮ ಮಿತ್ರರಿಗೆ ಪೋನು ಬರುತ್ತೆ ಸಾರ್ ಕರ್ನಾಟಕ ಭವನದಲ್ಲಿ ಪ್ರೆಸ್ ಮೀಟ್ ಮಾಡ್ತೀವಿ ಅಂತ.ನಾವು ಹೋಗುತ್ತೇವೆ, ರೈತಮುಖಂಡರೂ ಹಳೇದನ್ನೇ ಹೆಳುತ್ತಾರೆ.
ಆದರೆ ಅವರು ಕೇಂದ್ರ ಮಂತ್ರಿಗೇ ಆಗಲಿ, ಸರ್ಕಾರಕ್ಕೆ ಆಗಲಿ ಧಮಕಿ ಹಾಕಿದ್ದೇವೆ ಸಾರ್ ವ್ಯವಸಾಯ ಮಾಡೋದನ್ನ ನಿಲ್ಲಿಸ್ತೇವೆ ಅಂತ ಹೇಳಲ್ಲ.

ಆದೇ ಸಂಘಟಿತವಾಗಿರುವ ಈ ವಿಮಾನ ಕಂಪನಿಗಳು, ತಮ್ಮ ತೆವಲಿಗಾಗಿ, ಲಾಭಕ್ಕಾಗಿ ಕಂಪನಿಗಳನ್ನು ತೆಗೆದಿವೆ. ಒಂದಲ್ಲಾ ಹತ್ತು ಬಿಜಿನೆಸ್ ನಲ್ಲಿ ಹಣ ತೊಡಗಿಸಿದ್ದಾರೆ. ಅಲ್ಲಿನ ನೌಕರರಿಗೆ ಲಕ್ಷಾಂತರ ರೂಪಾಯಿ ಸಂಭಳ ಕೊಡ್ತಾರೆ, ತಮ್ಮ ವಿಮಾನಗಳಲ್ಲಿ ಅತಿ ಸುಂದರಿಯರೇ ಬೇಕಂತ ಕಂಪನಿಯ ಒಡೆಯನೇ ಪರ್ಸನಲ್ ಆಗಿ ಏರ್ ಹೋಸ್ಟಸ್ ಆಯ್ಕೆ ಮಾಡಿಕೊಳ್ಳುತ್ತಾನೆ. ಕುದುರೆ ರೇಸು, ಕಾರ್ ರೇಸು, ಕ್ರಿಕೆಟ್ ಟೀಮು, ಕತ್ರೀನ ಕೈಪು, ಅಂತೆಲ್ಲ ಯಾವ್ಯಾವುದೋ ತಲೆಕೆಟ್ಟ ಐಡಿಯಾಗಳಲ್ಲೆ ಹಣ ತೊಡಗಿಸುತ್ತಾರೆ. ಲೋಕದ ಜನ ಇವರನ್ನ ಗ್ರೇಟು ಸಾರ್ ಗ್ರೇಟು ಅಂತಾರೆ, ಜೊತೆಗೆ ಇಂಟರ್ ನ್ಯಾಷನಲ್ ವಲಯದಲ್ಲಿ ಅವರ ಹೆಸರು ರಾರಾಜಿಸುತ್ತೆ.
ಅಲ್ಲಾ ರೀ, ಲಾಭ ಬಂದಾಗ ಯಾರಿಗಾದ್ರೂ ಈ ಜನ ಹಂಚಿದ್ದಾರಾ, ಅಥವಾ ದೇಶದ ಕೃಷಿ ಕ್ಷೇತ್ರ ಸಂಕಷ್ಠದಲ್ಲಿ ಇದೆಯಪ್ಪಾ ಅವರ ನೆರವಿಗೆ ದಾವಿಸೋಣ ಅಂದಿದ್ದಾರಾ...

ಆದರೆ ಈಗ ನಾವು ಕಟ್ಟಿದ ತೆರಿಗೆ ಹಣದಿಂದ ಇವರನ್ನು ರಕ್ಷಿಸಬೇಕಂತೆ, ಬ್ಲೀಡಿಂಗ್ ಆಗ್ತಾ ಇದೆಯಂತೆ, ಸರ್ಕಾರ ಅದನ್ನ ಒರೆಸಬೇಕಂತೆ, ಇದನ್ನೆಲ್ಲ ಕೇಳಿದ್ರೇನೆ ತಲೆಕೆಡುತ್ತೆ, ಲಾಸ್ ಆದ್ರೇ ಬಾಗಿಲು ಹಾಕಲಿ, ಅವರಪ್ಪನ ಹಣನಾ ಅಡ ಇಡಲಿ.
ಇಲ್ಲಾ, ನಮ್ಮ ರೈತರ ಕಡೇ ಅಸ್ತ್ರ ಇದೆಯಲ್ಲಾ 'ಆತ್ಮ ಹತ್ಯೆ' ಅದನ್ನ ಮಾಡಿಕೊಳ್ಳಲಿ ಅಲ್ವಾ...

ವ್ಯವಸಾಯದ ಹಿನ್ನೆಲೆಯಲ್ಲಿ ಬಂದ ನಮ್ಮತವರಿಗೆ ಅದೇ ವ್ಯವಸಾಯದಲ್ಲಿ ಲಾಭ ಇದ್ದಿದ್ದರೇ ಈ ಖಾಸಗೀ ಕಂಪನಿಗಳಲ್ಲಿ ಯಾಕಾಗಿ ಕೂಲಿ ಮಾಡ್ತಾ ಇದ್ದೆವು ಅಂತ ಅನ್ನಿಸುತ್ತೆ. ಯಾಕೋ ಇವರ ಹೇಳಿಕೆಗಳನ್ನೆಲ್ಲಾ ಕೇಳಿಕೆ ಮನಸು ರೋಸಿಹೊಗಿದ್ದಕ್ಕೆ ಇದನ್ನೆಲ್ಲಾ ಬರೀಬೇಕಾಯ್ತು.
ಸರ್ಕಾರ ಏನು ಮಾಡುತ್ತೋ ನೊಡೋಣ.

Sunday, July 26, 2009

ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!



ಆಗಿನ್ನೂ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.

ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.

ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.
ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು. ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.

ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.
'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .
ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!

ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.
ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!

ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.

ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .
.
ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...

ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.
ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.

ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.
ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.

ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.
ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ್ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.

ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.

ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...




Thursday, July 23, 2009

ಕಮಾನ್ ಮೋಹನ್ ಕುಮಾರ್ ಕಮಾನ್...


ಥ್ರೀ ಸೆವೆಂಟಿ ಸೆವೆನ್ ಎಂಬ ತಲೆ ಬರಹ ಇದ್ದ ಖಾಸಗಿ ಡೈರಿಯ ಬರಹಕ್ಕೆ ಬೇರೆ ಬೇರೆ ಮೂಲೆಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ, ಸಾಮಾನ್ಯವಾಗಿ ಬ್ಲಾಗ್ ಓದುವ ಮಂದಿ ಕಾಮೆಂಟ್ ಬರೆಯುವುದಿಲ್ಲ, ಬೇರೇನೋ ಕೆಲಸದ ಒತ್ತಡ, ಕನ್ನಡದಲ್ಲಿ ಬರೆಯುವ ಹಿಂಸೆ, ಸುಲಭವಾಗಿ ಸ್ಪಂದಿಸದ ಕಂಪ್ಯೂಟರ್ ಏನೇನೂ ಸಮಸ್ಯೆ ಇರ್ತವೇ, ಅದಕ್ಕೆ ಕಿರಿಕಿರಿ ಬೇಡ ಅಂತ ಕೆಲವರು ಮೇಸೆಜು ಕಳಿಸಿ ಇಲ್ಲಾ ಟೆಲಿಪೋನಿನಲ್ಲಿ ಅಭಿಪ್ರಾಯ ಹೇಳ್ತಾರೆ.

ಆದರೆ ಸಿರಿಯಸ್ಸಾಗಿ ಯೋಚಿಸುವ ಕೆಲವು ಮಂದಿ ಕಷ್ಟವಾದರೂ ಬಿಡದೇ ತಮ್ಮ ತಲೆಯನ್ನೆಲ್ಲಾ ಉಪಯೋಗಿಸಿ ಕಾಂಮೆಟಿಸುತ್ತಾರೆ, ಬ್ಲಾಗ್ ಬರೆಯೋರಿಗೆ ಇದು ತುಂಬಾ ಖುಷಿ ಕೊಡುತ್ತೆ, ಈ ಮದ್ಯೆ ಮೋಹನ್ ಕುಮಾರ್ ಎಂಬ ಹೆಸರಿನ ಗೆಳೆಯರೊಬ್ಬರು ಚಿಂತನೆಗೆ ಹಚ್ಚುವ ಕಾಮೆಂಟು ಕಳಿಸಿದ್ದಾರೆ ಓದಿ.

Anonymous ಮೋಹನ್ ಕುಮಾರ್ said...

ಗೌಡ್ರೆ! ನೀವು ಹೇಳೋದೆಲ್ಲ ಒಪ್ಕಂಡೆ. ಆದ್ರೆ ಅದು ಹಿಂದೂ ಇತ್ತು. ಇಮದೂ ಇದೆ. ಮುಂದೂ ಇರುತ್ತೆ ನಿಜ. ಆದ್ರೆ ನಿಸರ್ಗಕ್ಕೆ ವಿರುದ್ಧವಾಗಿರೋದಕ್ಕೆ ಕಾನೂನಿನ ಮುದ್ರೆ ಬೇಕೇ? ಫೌಂಡೇಷನ್ ಗೆ ಹೋಗಿ ಬಂದ ಬಗ್ಗೆ ಮನ ಕಲಕಿತು ಎಂದಿರಿ! ಆದ್ರೆ ಆ ಫೌಂಡೇಷನ್ ವಿದೇಶದ ಯಾವ ಯಾವ ೇಜೆನ್ಸಿಯಿಂದ ೆಷ್ಟೆಷ್ಟು ಪಂಡ್ ತರಿಸಿಕೊಳ್ತಿದೆ? ಈ ನಾಟಕ ೆಲ್ಲಾ ಏಕೆ ಮಾಡ್ತು ಎಂದು ನಿಜವಾದ ಗಂಡಸು ಪತ್ರಕತ್ತನಾಗಿದ್ರೆ ಮಾಡಿ.
ಹಾಗೆಯೇ ಹೆಣ್ಣು ಗಂಡಿನ ನಡುವೆ ಸೆಕ್ಸ್ ಸಾಮಾನ್ಯ. ಅದು ಸಹ ನೈಸರ್ಗಿಕ. ಹಾಗಂತ ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು! ಇಂಥಾ ಇನ್ಸೆಸ್ಟ್ ಗೆ ಕಾನೂನಿನ ಮಾನ್ಯತೆ ಬೇಕು ಎಂದು ಈ ಪವಂಡೇಷನ್, ದುಡ್ಡ ಮಾಡೋಕೆ ಕಾದಿರೋ ಎನ್ ಜಿ ಓ ದವರು ಪ್ರಯತ್ನಿಸಿದರೆ ಅದನ್ನು ಬೆಂಬಲಿಸ್ತೀರಾ? ಇಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಊಹಿಸಿಕೊಳ್ಳಲು ಸಿದ್ಧರಿದ್ದೀರಾ? ಯಾಕೆಂದರೆ ಅದೂ ಸಹಜ ತಾನೆ! ವೈ ಡೋಂಟ್ ಯೂ ಟ್ರೈ! ಈಗ ಕಾನೂನಿನ ಬಗ್ಗೆ ಮಾತನಾಡಿ ಗೌಡ್ರೆ! ಇದಕ್ಕೂ ಕಾನೂನಿನ ಮನ್ನಣೆ ಕೊಡೋಣವೇ?
ಅಂದಹಾಗೆ ಮತ್ತೊಂದು ಪ್ರಶ್ನೆ! ನಿಮ್ಮ ನಿಮ್ಮ ಅಮ್ಮ , ಅಕ್ಕ, ಸಿಸ್ಟರ್ ಗಳು ಲೆಸ್ಬಿಯನ್, ಅಪ್ಪ , ಅಣ್ಣ ಗೇ ಅಂತ ಗೊತ್ತಾದ್ರೆ ಆಗಲೂ ಇದೇ ರೀತಿ ಬರೀತೀರಾ? ಅಂತದ್ದನ್ನು ಅರಗಿಸಿಕೊಳ್ಳೋಕೆ ನೀವು ಸಿದ್ದರಿದ್ದೀರಾ? ನಿಮ್ಮ ಮನೆ, ಕುಟುಂಬ, ಸಂಸಾರ, ಪ್ರೀತಿ, ವಿಶ್ವಾಸ, ನಿಮ್ಮ ಅಪ್ಪ-ಅಮ್ಮನ ಸಂಬಂಧ ಇವೆಲ್ಲವುಗಳ ಪವಿತ್ರ ಸಂಬಂಧದ ಬಗ್ಗೆ ಮೊದಲು ಯೋಚಿಸಿ. ನಂತರ ಕಾನೂನಿನ ಬಗ್ಗೆ. ಜಿ.ಎನ್.ಮೋಹನ್ ಗೆ ಬಕೆಟ್ ಹಿಡಿಯುವ ನೀವು, ಬುದ್ದಿ ಜೀವಿಯಾಗುವ ಪೋಜ್ ಕೊಡಬೇಕಿಲ್ಲ.


ಪ್ರಿಯ ಮೋಹನ್ ಕುಮಾರ್.
ನಿಮ್ಮ ಕಾಮೆಂಟ್ ಗೆ ಸ್ವಾಗತ ಈ ಪೋಸ್ಟ್ ಅನ್ನು ಬರೆಯುವಾಗಲೇ ತುಂಬಾ ಟೀಕೆ ಬರಬಹುದು, ಚರ್ಚೆ ಆಗಬಹುದು ಅಂಥ ನಿರೀಕ್ಷೆ ಮಾಡಿದ್ದೆ, ಆದರೆ ತುಂಬಾ ಮಂದಿ ಚೆನ್ನಾಗಿದೆ ಅಂದ್ರು, ಕೆಲವರು ಚೆನ್ನಾಗಿ ಬರೀತೀರಿ ಅಂದ್ರು, ಕೆಲವ್ರೂ ನೋ ಕಾಂಮೆಂಟ್ಸ್ ಅಂದರು, ಆದರೆ ನಾನು ನಿರೀಕ್ಷೆ ಮಾಡಿದಂತೆ ನೀವು ಟೀಕೆ ಮಾಡಿದ್ದೀರಿ ಸ್ವಾಗತ.

ಅದರೆ ಕಾಮೆಂಟ್ ಬರೆಯುವಾಗ ಅಲ್ಲಲ್ಲಿ ಸಿಕ್ಕಾಪಟ್ಟೆ ಗಂಡಸುತನ ಪ್ರದರ್ಶನ ಮಾಡಿದ್ದೀರಿ, ಅಪ್ಪ, ಅಮ್ಮ, ತಂಗಿ, ಬಕ್ಕೆಟ್ಟು ಅಂತ ಅಸಂಭದ್ದ ವಾಕ್ಯಗಳನ್ನ ಸೇರಿಸಿ ನನ್ನನ್ನು ಉದ್ರೇಕಿಸುವ ಪ್ರಯತ್ನ ಮಾಡಿದ್ದೀರಿ ಅದ್ಯಾಕೆ ನಿಮಗೆ ನನ್ನ ಮೇಲೆ ಸಿಟ್ಟು ಬಂದ ಹಾಗಿದೆಯಲ್ಲಾ....
ಇದರ ಮದ್ಯ ನೀವು ಕೇಳಿರುವ ಪ್ರಶ್ನೆಗಳಿಗೆ ನನ್ನ ಸಮಾಜಾಯಿಸಿ ಏನು ಎಂಬಂತೆ ಪ್ರಶ್ನಾರ್ಥಕಗಳನ್ನು ಹಾಕಿ 'ಹೀರೋ' ಆಗಿದ್ದೀರಿ, ಅದಕ್ಕೆ ದನ್ಯವಾದ.

ಏಡ್ಸ್ ಪೀಡಿತ ಮಕ್ಕಳಿಗಾಗಿ ಅವರ ಬದುಕಿಗಾಗಿ ವಿದೇಶದ ಪಂಡು ತಗೊಂಡರೇ ನಿಮ್ಮ ಮೇಲೆ ಆಗೋ 'ವ್ಯತಿರಿಕ್ತ' ಪರಿಣಾಮ ಏನಂತ ನಂಗೆ ತಿಳಿಸಿ.
ನಾಜ್ ಪೌಂಡೇಶನ್ ಹಾಕಿರುವ ಕೇಸಲ್ಲಿ ಗೆದ್ದರೆ ಹೊಮೊಸೆಕ್ಸ್ ನಲ್ಲಿ ತೊಡಗೋ ಮಂದಿ ನಾಜ್ ಗೆ ಕಾಸು ಕಳಿಸಿಕೊಡ್ತಾರೇನ್ರಿ, ಏಡ್ಸ್ ಪೀಡಿತ ಮಕ್ಕಳಿಗಾಗಿ ಕೆಲಸ ಮಾಡೋ ಸಂಸ್ಥೆ ಅದು ಅಂಥ ಹೇಳಿದ್ದಿನಲ್ಲಾ...

ಎನ್ ಜಿ ಓ ಗಳಿಗೆ ಪಾರಿನ್ ಪಂಡು ಬರುತ್ತೆ ಅಂತ ಹೇಳುವ ಹಳೆೇ ತಗಡು ಪ್ರಶ್ನೆಯನ್ನ ಕೆಲವರು ಹಾಕ್ತಾರೆ ನೀವೂ ಹಾಕಿದ್ದೀರಿ, ಹಾಗಾದರೆ ಪಂಡನ್ನ ಎನ್ ಜಿ ಒ ಗಳೇ ಪ್ರಿಂಟು ಮಾಡಕೋಬೇಕಾ.

ಆಮೇಲೆ ನಾಜ್ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿರೋದು ಐಪಿಸಿ 337 ಕಾನೂನನ್ನ ಮರುಪಶೀಲನೆ ಮಾಡಿ ಅಂಥ, ತಿದ್ದಿ, ಅಂತ ಅಲ್ಲ. ಕೋರ್ಟ್ ಗೆ ಹಾಗೆ ಮಾಡೋಕೆ ಬರಲ್ಲ. ಡೆಲ್ಲಿ ಹೈಕೋರ್ಟ್ ಜಡ್ಜ್ ಗಳು ಏನೂ ಪೆದ್ದರೂ ಅಲ್ಲ ಅಥವಾ ಹೋಮೋಸೆಕ್ಸ್ ಳೂ ಅಲ್ಲ, ನಿಮ್ಮಂತರಿಗೆ ಹಾಗೆ ಅನ್ನಿಸಿದರೇ ಯಾರಾದರೂ ಪತ್ರಕರ್ತರಿಗೆ ತನಿಖೆ ಮಾಡಲು ಹೇಳಿ ಇಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿ ಪರೀಕ್ಷೆ ಮಾಡಿಸಿ. ನಿಮ್ಮಂತಾ ಕೆಲವರಿಗೆ ಹೀಗೂ ಯೋಚನೆ ಮಾಡುವ ಬ್ರಿಲಿಯನ್ಸಿ ಇರತ್ತೇ.

ನಾರ್ಮಲ್ಲಾಗಿರುವ ನಿಮ್ಮಂತವರೇ ಅನೈಸರ್ಗಿಕವಾದ ರೇಪು, ಅತ್ಯಾಚಾರ, ಕೊಲೆ, ಮಕ್ಕಳ ದುರುಪಯೋಗ ಮಾಡುತ್ತಿರುತ್ತಾರೆ ಅವರನ್ನು ಏನು ಮಾಡೋದು ಸ್ವಾಮಿ. ನಿಸರ್ಗ ಕೂಡ ತಪ್ಪು ಮಾಡಬಹುದಲ್ಲಾ ಹೋಮೋಗಳ ಕೇಸಲ್ಲೂ ಅದೇ ಅಲ್ಲವಾ ಆಗಿರೋದು, ನಿಸರ್ಗ ಮಾಡಿರೋ ಲೋಪವನ್ನ ಹೇಗಪ್ಪಾ ಸರಿಮಾಡೋದು.
ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು. ಅಂತ ನೀವು ಪ್ರಶ್ನೆ ಕೇಳಿದ್ದೀರಿ ಇಂತ ಪ್ರಶ್ನೆ ಹಾಕೋ ಮನಸು ವಿಷಯದ ಬಗ್ಗೆ ಗಂಭೀರ ಚರ್ಚೆ ಮಾಡದೆ ಯ್ಯಾಗಾದರೂ ಗೆದ್ದುಬಿಡಬೇಕು ಎಂಬ ಕಿರಾತಕ ಮನಸುಗಳಲ್ಲಿ ಹುಟ್ಟಲಿಕ್ಕೆ ಸಾದ್ಯ, ಅದಕ್ಕೆ ಉತ್ತರಕೊಡೋದಕ್ಕಿಂತ ಕೇಳಿದ್ದು ಸರಿಯಾ ತಪ್ಪಾ ಅಂತ ಮೋಹನ್ ಕುಮಾರ್ ಯೋಚಿಸಬೇಕು.

ಪ್ರಕೃತಿಗೆ ವಿರುದ್ದವಾದ ಕ್ರಿಯೆಗೆ ಕಾನೂನಿನನ ಮುದ್ರೆ ಯಾಕೆ ಸ್ವಾಮಿ ಅನ್ನೊ ಪ್ರಶ್ನೆ ಕೇಳಿದ್ದೀರಿ, ಅದೇ ಚರ್ಚೆ ಅಲ್ಲವಾ ಈಗ ನಡೀತೀರೋದು, ಕಮಾನ್ ಮಹೇಶ್ ಕುಮಾರ್ ಮತ್ತೊಮ್ಮೆ ಮಗದೊಮ್ಮೆ ಪ್ರಶ್ನೆಗಳನ್ನ ಹಾಕಿ.. ಸುಕಾಸುಮ್ಮನೆ ರಕ್ತ ಕಾರಿಕೊಳ್ಳಬೇಡಿ ಸೈಟಿಫಿಕ್ ಆಗಿ ಅದೂ ಕೂಡ ಆರೋಗ್ಯಕ್ಕೆ ಒಳ್ಳೇದಲ್ಲಾ...


ಕೇವಲ ಕಾಮೆಂಟಾಗಿರಬೇಕಿದ್ದ ಮೋಹನ್ ಕುಮಾರ್ ಬರಹವನ್ನು ಬ್ಲಾಗ್ ಗೆ ಹಾಕಿದ್ದೇನೆ, ಚರ್ಚೆ ಆರಂಭವಾದರೆ ಸಂತೋಷ. ಸಿಲ್ಲಿ ಪೈಟ್ಸ್ ಬೇಡ.

Monday, July 20, 2009

ಥ್ರೀ ಸೆವೆಂಟಿ ಸೆವೆನ್.......!!!


ಡೆಲ್ಲಿ ಹೈಕೋರ್ಟ್ ಹೋಮೋ ಸೆಕ್ಸುಯಲ್ ಗಳ ಬಗ್ಗೆ ತೀರ್ಪು ಕೊಟ್ಟಮೇಲೆ ಡಾ.ಲೀಲಾಸಂಪಿಗೆ ಮೇಂಡಂ ಮಾತನಾಡುತ್ತಾ , 'ರೀ ಶ್ರೀನಿವಾಸ್ ಈ ಕೇಸ್ ಬಗ್ಗೆ ಪಾಲೋ ಮಾಡ್ರಿ ಏನಂತೆ ಇವರ ಕತೆ' ಅಂತ ಕೇಳಿದ್ರೂ ಸಬ್ಜೆಕ್ಟ್ ಕುತೂಹಲ ಇದ್ದರಿಂದ ನಾನೂ ಇದೇನು ಅಂತ ತಿಳ್ಕೊಳ್ಳೇ ಬೇಕಲ್ಲಾ ಅಂತ ತೀರ್ಮಾನಿಸಿ ನಮ್ಮ ಚಾನಲ್ಲಿಗೊಂದು ಸ್ಟೋರಿ ಕೂಡಾ ಆಗುತ್ತೆ ಮಾಡೋಣಾ ಅಂತಾ ತೀರ್ಮಾನಿಸಿದೆ.

ದೆಹಲಿಯ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಯ ಸೈಕಾಲಜಿಸ್ಟ್ ಸಂದೀಪ್ ಓರಾ ಅವರನ್ನ ಭೇಟಿ ಮಾಡಬೇಕಾದರೆ ನಂಗೆ ಸಾಕು ಬೇಕಾಗಿತ್ತು. ಯಾಕಾದ್ರೂ ಈ ಹೋಮೋಸೆಕ್ಸುಯಲ್ ಗಳ ಹಿಂದೆ ಬಿದ್ದೆನಪ್ಪಾ ಅಂಥ ಅಂದುಕೊಂಡೆ. ಆ ಹೊತ್ತಿಗೆ ಸಂದೀಪ್ ಓರಾ ನನಗೆ ಬೈಟ್ ಕೊಡಲು ಒಪ್ಪಿಕೊಂಡರು. ಅಪೋಲೋ ಆಸ್ಪತ್ರೆ ಒಳ್ಳೇ ಪೈವ್ ಸ್ಟಾರ್ ಹೋಟೆಲ್ ಇದ್ದಂಗೆ ಇತ್ತು. ಈ ಪಾಪಿ ಟೆರರಿಸ್ಟ್ ಗಳ ಕಾಟದಿಂದ ಆ ಆಸ್ಪತ್ರೆಯಲ್ಲೂ ಎಕೆ 47 ಹಿಡಿದುಕೊಂಡಿದ್ದ ಭದ್ರತಾ ಪಡೆಯವರಿದ್ದರು. ಅವರಿಂದ ನಾವು ಕ್ಯಾಮರಾ ಸ್ಟಾಂಡ್ ಎಲ್ಲಾ ಚೆಕಪ್ ಮಾಡಿಸಿಕೊಂಡು ಡಾಕ್ಟರ್ ಚೇಂಬರಿಗೆ ತಪುಪಿದೆವು.

ಸಂದರ್ಶನ.


ಯಾರು ಸಾರ್ ಈ ಹೋಮೋಸೆಕ್ಸುಯಲ್ ಗಳು..?
ಡಾಕ್ಟರ್.
ಅವರೇನೂ ಬೇರೆಯವರಲ್ಲ ನಮ್ಮ ಮದ್ಯೆಯೇ ಇರ್ತಾರೆ. ನಮ್ಮಂತೆ ಇರ್ತಾರೆ. ಆದರೆ ಅವರ ಸೆಕ್ಸುಯಲ್ ಓರಿಯಂಟೇಷನ್ ಬೇರೆದಾಗಿರುತ್ತೇ ಈಗ ಒಬ್ಬ ಗಂಡಸು ಇನ್ನೊಬ್ಬ ಗಂಡಸನ್ನ ಇಷ್ಟ ಪಟ್ಟರೆ, ಅವರೊಂದಿಗೆ ಬೆರೆತರೆ 'ಗೇ 'ಅಂತ ಕರೀತೀವಿ. ಹೆಣ್ಣೊಬ್ಬಳಿಗೆ ನಂಗೆ ಹೆಣ್ಣೇ ಬೇಕು ಅಂತ ಅನಿಸಿದರೆ 'ಲೆಸ್ಬಿಯನ್ ' ಅಂತೀವಿ.
ಕೆಲವರಿಗೆ 'ಗಂಡಸೂ' ಬೇಕು 'ಹೆಂಗಸೂ' ಬೇಕು ಅಂತ ಅನ್ನಿಸುತ್ತೆ ಅವರನ್ನ "ಬೈಸೆಕ್ಸುಯಲ್ಸ್" ಅಂತೀವಿ. ನೋಡೋಕೆ 'ಹೆಣ್ಣಿನಂತೆ' ಇದ್ದರೂ ಮನಸು 'ಗಂಡಾಗಿಯೂ, 'ಗಂಡಿನಂತೆ 'ಕಂಡರೂ ಮನಸು 'ಹೆಣ್ಣಿನಂತೆ' ವರ್ತಿಸೋರನ್ನ, ಅದಕ್ಕೆ ತಕ್ಕಂತೆ ಬಯಕೆ ಆಗೋರನ್ನ 'ಟ್ರಾನ್ಸೆಕ್ಸುಯಲ್ಸ್' ಅಂಥ ಕರೀತೀವಿ . 'ಇಟ್ ಈಸ್ ಜಸ್ಚ್ ಎ ಮ್ಯಾಟರ್ ಆಪ್ ವಾಟ್ ಸೆಕ್ಸ್ ಓರಿಯಂಟೇಷನ್ ದೆ ಹ್ಯಾವ್'. ಅಂದರು.

ಸಾರ್ ಈ ಹಿಜಿಡಾ ಗಳು, ಚಕ್ಕಾಗಳು, ಡಬಲ್ ಡೆಕ್ಕರ್ ಗಳು ಅಂದರೇ ಇವರೇನಾ...?
ನೋಡಿ ಹಿಜಿಡಾಗಳಿಗೂ, ಚಕ್ಕಾಗಳು ಬೇರೆ ಇವರಿಗೂ ಹೋಮೋಗಳಿಗೂ ಸಂಭಂದವೇ ಇಲ್ಲ. ಹಿಜಿಡಾಗಳ ಅಂಗರಚನೆಯೇ ಬೇರೆ ತರನಾಗಿರುತ್ತೆ. ಅವ್ರಿಗೆ ಇಂಥದೇ ಅಂತ ಸ್ಪಷ್ಟವಾಗಿ ಹೇಳಕ್ಕೆ ಆಗದಂತ ಲಿಂಗರಚನೆಇರತ್ತೆ. ಅವರನ್ನ ಹೋಮೋಸೆಕ್ಸುಯಲ್ ಗಳ ಜೊತೆ ಸೇರಿಸಬಾರದು, ಜನಾ ಮಾಡೋ ತಪ್ಪೇ ಅದು ನೋಡಿ. ಈ ಹೋಮೋ ಸೆಕ್ಸುಯಲ್ ಗಳು ನಮ್ಮ ,ನಿಮ್ಮಂತೆ. ಹೆಣ್ಣು ಅಥವಾ ಗಂಡಿನಂತೆ ಕಾಣಿಸುತ್ತಾರೆ. ಗುರುತು ಮಾಡೋದು ಕಷ್ಟ.
ಯಾಕೆ ಸಾರ್ ಹೋಮೋ ಸೆಕ್ಸುಯಲ್ ಆಗ್ತಾರೆ.?
ಯಾಕೆ ಆಗ್ತಾರೆ ಅನ್ನೊದರ ಬಗ್ಗೆ ಸಾಕಷ್ಟು ಥಿಯರಿಗಳಿವೆ. ಹೆಚ್ಚಿನ ಪ್ರಕರಣಗಳಲ್ಲಿ ಅವರ ಜೀನ್ಸ್ ನಲ್ಲಿಯೇ ಅಂಥಾ ಸ್ವಭಾವ ಬಂದಿರುತ್ತೆ. ಹಾರ್ಮೋನುಗಳ ವ್ಯತ್ಯಾಸ ಕೂಡ ಈ ಸ್ವಭಾವಕ್ಕೆ ಕಾರಣ. ಜೊತೆಗೆ ಚಿಕ್ಕವರಿದ್ದಾಗ ಬೆಳೆಯುವ ಪರಿಸರ ಪ್ರಭಾವ ಬೀರಬಹುದು. ಕೆಲವು ಪ್ರಕರಣಗಳಲ್ಲಿ ಅನಿವಾರ್ಯವಾಗಿ ಮತ್ತೊಬ್ಬರ ಒತ್ತಡಕ್ಕೆ ಸಿಲುಕಿ ಹೋಮೋಗಳಾಗಿ ನಂತರ ಬದಲಾಗುವ ಸಾದ್ಯತೆ ಇದೆ.
ಇದು ಮೆಂಟಲ್ ಅಥವಾ ಪಿಸಿಕಲ್ ಡಿಸ್ ಆರ್ಡರ್ರಾ...?
ನೋ ನಾಟ್ ಅಟ್ ಆಲ್ . ಅದು ಮೆಂಟಲ್ ಡಿಸ್ ಆರ್ಡರ್ ಅಲ್ಲಾ ಅಥವಾ ಆರೋಗ್ಯದ ಸಮಸ್ಯೆಯೂ ಅಲ್ಲಾ.. ನ್ಯಾಚುರಲ್ ಆದ ಡೊಂಕು. ದೈವ ಮಾಡಿದ ಕಿತಾಪತಿ...

ಹೋಮೋಸೆಕ್ಸುಯಲ್ ಗಳನ್ನ ಚಿಕಿತ್ಸೆಯಿಂದ ಸರಿಮಾಡ ಬಹುದಾ?
ಯಾವುದೇ ಕಾರಣಕ್ಕೂ ಸಾದ್ಯವಿಲ್ಲಾ.
ಕಾಮನ್ ಮ್ಯಾನ್ ಹೋಮೋಸೆಕ್ಸುಯಲ್ ಆಗಿ ಬದಲಾಗಬಹುದಾ...?
ಇಲ್ಲವೇ ಇಲ್ಲಾ, ನಾರ್ಮಲ್ ಮನುಶ್ಯರಿಗೇ ಆಪೋಸಿಟ್ ಸೆಕ್ಸ್ ಬೇಕೆ ವಿನಾ ಸೇಮ್ ಸೆಕ್ಸ್ ಬೇಕಿಲ್ಲ, ಹಾಗೆ ಆಗೋಕೆ ಸಾದ್ಯವೇ ಇಲ್ಲ.
ಮುಂದೇ..
ನೋಡ್ರೀ, ಈ ಹೋಮೋಗಳು ಹಿಂದೇನೂ ಇದ್ರೂ, ಈಗಲೂ ಇದಾರೆ, ಮುಂದೇನೂ ಇರ್ತಾರೆ. ಪ್ರಶ್ನೆ ಏನಂದ್ರೆ ಕಾನೂನು ಪ್ರಕಾರ ಅವರು ಸೇರುವುದು ಕಾನೂನಿನ ಪ್ರಕಾಕ ಕೈಂ, ಅಥವಾ ಅಲ್ಲವಾ ಈಗ ಇರೋ ಕಾನೂನು ಅದನ್ನ ಕ್ರೈಂ ಅನ್ನುತ್ತೆ. ಮುಂದೆ ಬರೋ ಕಾನೂನು ತಪ್ಪಲ್ಲ ಅನ್ನಬಹುದು.
ಅದು ಕಾನೂನಿಗೆ ಸಂಭಂದಿಸಿದ ವಿಷಯ.

ಥ್ಯಾಂಕ್ಸು ಸಾರ್ ಅಂಥ ಹೇಳಿ ಪ್ಯಾಕಪ್ ಆದೆವು....

ಇದನ್ನೆಲ್ಲಾ ಕೇಳಿ ಆದಮೇಲೆ, ಹೋಮೋ ಸೆಕ್ಸುಯಲ್ ಗಳ ಬಗ್ಗೆ ಪಾಪ ಅನ್ನಿಸಿತು. ಪಾಪ ಅವರದೇನು ತಪ್ಪಿಲ್ಲಾ ಎಲ್ಲಾ ದೈವಾನುಗ್ರಹ. ಆಸೆ ಆಗಿದ್ದನ್ನ ಮಾಡಿದ್ರೆ ಕ್ರಿಮಿನಲ್ ಅಪರಾಧ ಆಗುತ್ತೆ .ಹತ್ತು ವರ್ಷ ಜೈಲಿಗೂ ಹೋಗಬೇಕಾಗುತ್ತೆ.
ಈಗಿರೋ ಕಾನೂನಿನ ಪ್ರಕಾರ ಇಬ್ಬರೂ ಹೋಮೋಸೆಕ್ಸುಯಲ್ ಸ್ವ ಇಚ್ಚೆಯಿಂದ ಒಪ್ಪಿ ಸೇರಿದ್ರೂ ದಂಢನೀಯ ಅಪರಾದ ಆಗುತ್ತೆ. ಇದೇ ಹೋಮೋಗಳು ಸಾಮಾನ್ಯನೊಬ್ಬನನ್ನ ಪೀಡಿಸಿ ದುರುಪಯೋಗ ಮಾಡಿದ್ರೆ, ಏನೂ ಅರಿಯದ ಮಕ್ಕಳನ್ನ ತಮ್ಮ ತೀಟೆಗೆ ಬಳಸಿಕೊಂಡ್ರೆ ಮರಣದಂಡನೆ ಬೇಕಾದ್ರೋ ಕೊಡಲಿ ಆದರೆ ನೇಚರ್ ಮಾಡಿದ ತಪ್ಪಿಗೆ, ಅದರಿಂದಾಗಿ ಅವರವರು ತೀರಿಸಿಕೊಳ್ಳೋ ತೀಟೆಗೆ ಶಿಕ್ಷೆ ಕೊಡೋದು ತಪ್ಪಾಗಬಹುದು ಅಂತ ಅನ್ನಿಸಿತು.

ದೆಹಲಿ ಹೈಕೋರ್ಟ್ ತೀರ್ಪು ಬಂದಾಗ ಅಹೋ ರಾತ್ರಿ ಫೇಮಸ್ಸಾಗಿದ್ದು ಸಂಸ್ಥೆ ದೆಹಲಿಯ ನಾಜ್ ಪೌಂಡೇಶನ್. ಕೋರ್ಟ್ ನಲ್ಲಿ ದಾವೆ ಹೂಡಿದ್ದೇ ಈ ನಾಜ್ ಪೌಂಡೇಶನ್. ಅಲ್ಲಿಗೆ ಹೋಗಬೇಕು ಅಂಥ ತೀರ್ಮಾನಿಸಿದಾಗ ನಂಗೂ ದಿಗಿಲಾಗಿತ್ತು. ಅಲ್ಲೆಲ್ಲಾ ಹೋಮೋಸೆಕ್ಸುಯಲ್ ಗಳೇ ಇರ್ತಾರೇ. ಪರಿಸ್ಥಿತಿ ಹೇಗೋ ಏನೋ ಅಂಥ ಅಂದುಕೊಂಡು ಅದರ ಅಧ್ಯಕ್ಷೆ ಅಂಜಲಿ ಗೋಪಾಲನ್ ಗೆ ಕರೆಮಾಡಿದಾಗ ಅವರು ದಕ್ಷಿಣಾ ಆಪ್ರೀಕಾದಲ್ಲಿದ್ದರು.
ಬಂದ ಮೇಲೆ ಸಿಕ್ತೇನೆ, ಅಂದರು. ಎರಡು ದಿನ ಕಳೆದ ಮೇಲೆ ಈಸ್ಟ್ ಕೈಲಾಶ್ ನಲ್ಲಿರುವ ನಾಜ್ ಪೌಂಡೇಶನ್ನಿಗೆ ಹೋದೆ. ಮೂರು ಅಂತಸ್ಥಿನ ಹಸಿರು ಹೊದಿಸಿದಂತೆ ಕಾಣಿಸುವ ಬಿಲ್ಜಿಂಗ್ ಅದು. ಮೂರು ನಾಲ್ಕು ಧಡೂತಿ ನಾಯಿಗಳು ಅಲ್ಲಿದ್ದವು. ಬಿಲ್ಡಿಂಗಿನ ತುಂಬಾ ಚಿಕ್ಕ, ಚಿಕ್ಕ ಮಕ್ಕಳೂ ಆಟ ಆಡುತ್ತಿದ್ದರು. ಅಲ್ಲೊಂತರಾ ಸ್ಕೂಲಿನ ವಾತಾವರಣ ಇತ್ತು.

ಕಂಪ್ಯೂಟರ್ ರೂಮಿನಲ್ಲಿ ಪಿಯುಸಿ, ಇಲ್ಲಾ ಡಿಗ್ರಿ ಓದುತ್ತಿರಬಹುದಾದ ನಾಲ್ಕಾರು ಹುಡುಗಿಯರಿದ್ದರು. ಯಾರೋ ಹುಡುಗನಿಗೆ ಸೋಶಿಯಲ್ ನೆಟ್ ವರ್ಕ್ ವೆಬ್ ಸೈಟ್ ಆರ್ಕುಟ್ ನಲ್ಲಿ
ಸ್ಕ್ಯ್ರಾಪ್ ಮಾಡಿ ನಗುತ್ತಾ ಕುಳಿತಿದ್ದರು, ಅಲ್ಲೇ ಹತ್ತಿರದಲ್ಲಿದ್ದ ಆಕರ್ಷಕವಾಗಿ ಡಿಸೈನ್ ಮಾಡಿದ ಡ್ರಾಯಿಂಗ್ ರೂಂ ನಲ್ಲಿ ಅಂಜಲಿ ಗೋಪಾಲನ್ ಇದ್ದರು. ಸಣ್ಣ ತಪ್ಪು ಮಾಡಿದ್ದ ಇಬ್ಬರು ಮಕ್ಕಳಿಗೆ ಹೆದರಿಸುತ್ತಾ ಇದ್ದರೂ.

ನಾವು ಕ್ಯಾಮೆರಾ ಆನ್ ಮಾಡಿ ಅವರನ್ನ ಮಾತಿಗೆಳೆದವು.
ನಾನು ಅವರನ್ನ ಸ್ಪಲ್ಪ ಖುಷಿ ಮಾಡೋದಕ್ಕೆ ಅಂತ ಒಂದು ಜಾಕ್ ಹಾಕಿದೆ. ಏನ್ ಮೇಡಂಮ್ ಓವರ್ ನೈಟ್ ಫೇಮಸ್ ಆಯಿತಲ್ಲಾ ನಿಮ್ಮ ನಾಜ್ ಪೌಂಡೇಶನ್ ಅಂದೆ ಅದಕ್ಕೆ ಅಂಜಲಿ ಅವರು 'ಆಲ್ ಪಾರ್ ದಿ ರಾಂಗ್ ರೀಸನ್.' ಅಂತ ಅನ್ನುತ್ತಾ, ತಮ್ಮ ಗೆಲುವನ್ನ ತಮ್ಮ ನಗುವಿನಲ್ಲಿ ತೋರಿಸಿದ್ರು.

ನೀವು 377 ವಿರುದ್ಧ ಪೈಟ್ ಮಾಡೋಕೆ ಕಾರಣ ಏನು ಮೇಡಂ.?
'ನೋಡಿ ಹೋಮೋ ಸೆಕ್ಸುಯಲ್ ಗಳು ಪಾಪಿಗಳಲ್ಲ ,ನೇಚರ್ ಪ್ರಾಬ್ಲಂಮ್ ನಿಂದ ಅವರು ಹಾಗೆ ಆಗಿದಾರೆ, ಅವರವರ ನಡುವೆ ನಡೆಯೋ ಸೆಕ್ಯ್ಸುಯಲ್ ಓರಿಯಂಟೇಶನ್ ಅನ್ನ ಕಾನೂನು ತಪ್ಪು ಅನ್ನುತ್ತೆ. ಅಲ್ಲದೆ, ಅವರವರು ಒಪ್ಪಿ ಬಾಗಿಯಾದ್ರೂ ಅದಕ್ಕೆ 10 ವರ್ಷ ಶಿಕ್ಷೆ, ಇಂದೆಂತಾ ನ್ಯಾಯ, ಇಂತಾ ಕರಾಳ ನ್ಯಾಯವನ್ನೇ ನಾಜ್ ಪ್ರಶ್ನಿಸಿದ್ದು, ಮುಖ್ಯ ವಿಷಯ ಗೊತ್ತಾ ನಾವು ಕಾನೂನನ್ನ ಬದಲಾಯಿಸಿ ಅಂಥ ಕೇಳಲಿಲ್ಲ ಕೇವಲ ಪರಿಶೀಲಿಸಿ ಅಂತ ಕೇಳಿದ್ದೆವು ಈಗ ತೀರ್ಪು ಬರ್ತಾ ಇದೆ.
ಅಲ್ಲಾ ಸುಮಾರು 10 ವರ್ಷದ ಹಿಂದೆ 2001 ರಲ್ಲೇ ನೀವು ಕೋರ್ಟ್ ನಲ್ಲಿ ಇದನ್ನಾ ಪ್ರಶ್ನೆ ಮಾಡಿದ್ದು ಯಾಕೆ.?

ನಾಜ್ ಪೌಂಡೇಶನ್ ಏಡ್ಸ್ ನಿಯಂತ್ರಣ ಮತ್ತು ಪೀಡಿತರ ಸಂಭಂದ ಕೆಲಸ ಮಾಡುತ್ತೆ. ಕೆಲವೊಮ್ಮೆ ನಮ್ಮ ಮೇಲೆ, ಕಾರ್ಯಕರ್ತರ ಮೇಲೆ ಆ ಕಾನೂನನ್ನ ಪೋಲೀಸರು ಬಳಸ್ತಾ ಇದ್ರೂ ಅದಕ್ಕೆ ಪ್ರಶ್ನೆ ಮಾಡಿದೆವು.
ನಿಮ್ಮದು ಹೋಮೋಸೆಕ್ಸುಯಲ್ ರೈಟ್ಸ್ ಸಂಸ್ಥೆ ಅಲ್ಲವಾ ಹಾಗಾದ್ರೆ..?
ಅಲ್ಲಾ, ನಮ್ಮದು ಎಚ್ಐವಿ ಪೀಡಿತರ ಕುರಿತು ಕೆಲಸ ಮಾಡೋ ಸಂಸ್ಥೆ,ಹೋಮೋ ರೈಟ್ಸ್ ಸಂಸ್ಥೆ ಅಲ್ಲ ಈಗೀಗ ಹಿಜಿಡಾಗಳಿಗೆ, ಹೋಮೋಸೆಕ್ಯ್ಸುಯಲ್ ಗಳಿಗೆ ವೈದ್ಯಕೀಯ ಸೇವೆ ತೆರೆದಿದ್ದೇವೆ.
ಯಾಕೆ ಮೇಡಂ ಇಂತಾ ಕಾನೂನು..?
ಇದು ಬ್ರೀಟೀಷರಿಂದ ಎರವಲು ಪಡೆದ ಕಾನೂನು, ಲಾರ್ಡ್ ಮೆಕಾಲೆ ಕಾಲದ್ದು. ಹಿಂದೂ ಸಂಸ್ಕೃತಿಯಲ್ಲಿ ಎಲ್ಲೂ ಇಂಥದಕ್ಕೆ ವಿರೋದ ಇಲ್ಲಾ. ಮಹಾಭಾರತದಲ್ಲಿ ಅರ್ಜುನ ಶಿಕಂಡಿ ಆಗಿದ್ದ, ಅಯ್ಯಪ್ಪ ಶಿವ ಮತ್ತು ವಿಷ್ಣು ಸೇರಿದ್ದರಿಂದ ಹುಟ್ಟಿದವ, ಕಾಮಸೂತ್ರದಲ್ಲಿ ಹೋಮೋಸೆಕ್ಸ್ ಪ್ರಸ್ತಾಪ ಇದೆ.
ಈ ತೀರ್ಪನ್ನ ನಮ್ಮ ದಾರ್ಮಿಕ ಲೀಡರ್ ಗಳು ವಿರೋಧಿಸಿದ್ದಾರಲ್ಲಾ..?
ಇದನ್ನ ನಾವೆಲ್ಲಾ ನಿರೀಕ್ಷಿಸಿದ್ದೆವು. ಅದರಿಂದ ಅಚ್ಚಿರಿ ಆಗುವಂತದ್ದು ಏನೂ ಇಲ್ಲ ಬಿಡಿ. ಈಗಿನ ಎಷ್ಟೋ ಮಂದಿ ಸಾದು, ಸಂತರು. ರೀಲೀಜಿಯಸ್ ಲೀಡರ್ ಗಳು ಹೋಮೋಗಳು ಅಂತಾರಲ್ಲಾ...ಅದಕ್ಕೇನಂತೀರಿ.
ಅದೆಲ್ಲಾ ಇದ್ದದ್ದೆ, ಹಿಂದೆ ಸರ್ಕಾರ ಕೋರ್ಟಿಗೆ 'ಧರ್ಮ' ಇದನ್ನ ವಿರೋಧಿಸುತ್ತೆ ಅಂತ ಹೇಳಿಕೆ ಕೊಟ್ಟಾಗ ಕೋರ್ಟ್ ಬೈದಿತ್ತು, ನಮ್ಮ ಸಂವಿಧಾನ ಧರ್ಮದ ಆಧಾರದ ಮೇಲೆ ರೂಪಿತವಾಗಿಲ್ಲ.
ನಿಮಗೆ ಕೋರ್ಟ್ ಕೊಟ್ಟ ತೀರ್ಪಿನಿಂದ ಸಂತೋಷಾ ನಾ..?
ಸಹಜವಾಗಿ ಸಂತೋಷ ಆಗಿದೆ, ಒಂದು ಐತಿಹಾಸಿಕ ಬೆಳವಣಿಗೆ ನಾಜ್ ಸಾಕ್ಷಿ ಆಯ್ತಲ್ಲಾ ಅಂತ. ಆದ್ರೂ ಕೇಂದ್ರ ಸರ್ಕಾರ, ಸುಪ್ರಿಂ ಕೋರ್ಟ್ ಏನಂತಾವೆ ನೋಡೋಣ.
ಹೇಗಿದೆ ರೆಸ್ಪಾನ್ಸ್.?

ತುಂಬಾ ಚೆನ್ನಾಗಿದೆ, ಗೇ ಕಮ್ಯುನಿಟಿ ಹ್ಯಾಪಿ ಆಗಿದೆ. ದೇವರ ಧಯದಿಂದ ನಮಗೂ ಬದುಕೋ ಹಕ್ಕು ಬಂತಲ್ಲಾ ಅಂತ ಅವರಿಗೆಲ್ಲಾ ಖುಷಿಯಾಗಿದ್ದಾರೆ,ಅವರಿಗೆಲ್ಲಾ ಈಗ ನಿಜವಾದ ಸ್ವಾತಂತ್ರ ಬಂಥಂತೆ ಅಂಥ ನಕ್ಕರು ಅಂಜಲಿ ಗೋಪಾಲನ್..
ಅವರಿಗೂ ಒಂದು ಥ್ಯಾಂಕ್ಸ್ ಹೇಳಿ ಹೊರಡೋಕೆ ಮುಂದಾದೆವು. ಹೊರಡುವ ಮುನ್ನ ನಮ್ಮ ಸಂಸ್ಥೆಯನ್ನ ನೋಡಿ ಹೋಗಿ ಅಂಥ ಹೇಳಿದರು. 'ನೋಡಿ ಇಲ್ಲಿರೋ ಮಕ್ಕಳೆಲ್ಲಾ ಹೆಚ್ ಐ ವಿ ಪೀಡಿತರು, ಟೀಚರ್ ಗಳು ಮತ್ತು ನನ್ನ ಹೊರತಾಗಿ ' ಅಂತ ಗಂಭೀರವಾಗಿ ಹೇಳಿದರು. ಅಲ್ಲಿ ಸ್ವಚ್ಚಂದವಾಗಿ ಆಡಿಕೊಂಡಿದ್ದ ದೇಶದ ವಿವಿಧ ಪ್ರದೇಶದ ಮಕ್ಕಳು ಇದ್ದರು. ಕಿಲಾಕಿಲಾ ಅಂತ ಆಡಿಕೊಂಡಿದ್ದರು. ನಮ್ಮನ್ನ ನೋಡಿ ಹಲೋ, ಹಲೋ ಅಂಕಲ್ ಅಂತ ಅಂತಿದ್ದರು. ನಾನೂ ಅವರನ್ನ ನೋಡಿ ಹಲೋ ಅಂತಿದ್ದೆ. ಯಾಕೋ ಅವರನ್ನ ನೋಡಿ ನೋವಾಗೋದು. ಒಂತರಾ ಕಸಿವಿಸಿ ಆಗೋದು.

ಕಾರು ಹತ್ತಿ ವಾಪಸ್ಸು ಬರುವಾಗ ನಮ್ಮ ಕ್ಯಾಮರಾ ಮನ್ ಪಪ್ಪು "ಆರ್ಕುಟ್ ನೋಡುತ್ತಿದ್ದ ಹುಡುಗಿಯರು ಬಹುತ್ ಅಚ್ಚಾ ತಾ ನಾ... ಅಂದ'. ನಾನು 'ಅಚ್ಚಾತ... ಆದ್ರೆ ಅವರಿಗೆಲ್ಲಾ ಎಚ್ ಐ ವಿ ಇದೆ ಅಂದೆ'. ಹಿಂದಿ ಬಾಷೆಯವನಾದ ಅವನಿಗೆ ನಾನು ಅಷ್ಟೊತ್ತು ಸಂಬಾಷಿಸಿದ್ದ
ಇಂಗ್ಲೀಷ್ ಅರ್ಥ ಆಗಿರಲಿಲ್ಲ. ಯಾವುದೋ ಸ್ಕೂಲ್ ಬಗ್ಗೆ ಸ್ಟೋರಿ ಮಾಡ್ತಾ ಇದ್ದೀವಿ ಅಂತ ತಿಳ್ಕಂಡಿದ್ದ. ಮಕ್ಕಳೆಲ್ಲ ಪೀಡಿತರು ಎಂಬ ವಿಷಯ ತಿಳಿದ ಮೇಲೆ ಗಾಭರಿಯಾದ.

ನಾನು ಏನು ಹೇಳಕ್ಕೆ ಹೊರಟೆ ಅಂತ ಈಗ ಗೊತ್ತಾಯ್ತಾ.. ಆಗಲಿಲ್ಲ ಅಂದ್ರೆ ನಮಗೆ ಅನ್ನಿಸಿದ್ದೇ ಸರಿ ಅಂಥ ತಿಳ್ಕೊಳ್ಳೋದು ತಪ್ಪು. ನಿಮಗೆ ಗೊತ್ತಿರುವ ಡಾಕ್ಟರ್ ಗಳು, ಇಲ್ಲಾ ವಿಷಯದ ಬಗ್ಗೆ ಅರಿತರ ಹತ್ತಿರ ವಿಷಯ ಏನಂತಾ ತಿಳಕೊಂಡು ನಿಮ್ಮದೇ ತೀರ್ಮಾನಕ್ಕೆ ಬನ್ನಿ ಯಾರೋ ಸ್ವಾಮಿ, ಪಾದ್ರಿ, ಮುಲ್ಲಾ ಹೇಳ್ತಾರೆ ಅಂತ ನಾವು ಕನ್ಲೂಕುಶನ್ನಿಗೆ ಬರೋದು ಸೈಂಟಿಫಿಕ್ ಆಗಿ ತಪ್ಪಾಗುತ್ತೇ... ಅಲ್ವಾ...!!



Thursday, July 16, 2009

ಧಿಮಾಕು... ಒಂದು ಟಿಪ್ಪಣಿ.

http://livingincourageonline.com/wp-content/uploads/2008/07/full.jpgಕೆಲವರು ಹಾಗೆ ಇರುತ್ತಾರೆ... ಜೀವನದ ಅಪ್ಸ್ ಅಂಡ್ ಡೌನ್ಸ್ ಗಳಿಗೆ ಕೇರೇ ಮಾಡುವುದಿಲ್ಲ. ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಗರ್ವ ಅನ್ನೊದು ಇರುವುದಿಲ್ಲ. "ನಾನು ನಿಮ್ಮಂತೆ ಮನುಷ್ಯ ಕಣಯ್ಯಾ" ಅನ್ನೊ ತರದವರು. ಸರಳವಾಗಿ ಎಲ್ಲರ ಜೊತೆಗೆ ಬೆರೆಯುವವರು, ನಮ್ಮ ನಿಮ್ಮಂತವರ ಕಷ್ಟ ಏನಂತ ತಿಳಿದವರು. ನನ್ನ ಅರಿವಿಗೆ ಬಂದಂತೆ ಯಾರಾದರೂ ನಿಜವಾದ ಅರ್ಥದಲ್ಲಿ ಬುದ್ದಿವಂತರೂ , ಜ್ಞಾನಿಗಳು, ಪಂಡಿತೋತ್ತಮರೂ ಆಗಿದ್ದರೆ ಅವರೆಲ್ಲರೂ ಸಿಕ್ಕಾಪಟ್ಟೆ ಸಿಂಪಲ್ಲಾಗಿರುತ್ತಾರೆ. ಸರಳವಾಗಿ ಮಾತಾಡ್ತಾರೆ. ಎಲ್ಲರೊಂದಿಗೆ ಬೆರೆಯಲು ಉತ್ಸುಕರಾಗಿರುತ್ತಾರೆ. ನಮ್ಮ ಅಬ್ದುಲ್ ಕಲಾಂ ಇದ್ದಾರಲ್ಲಾ ಹಾಗೆ..! ಮನುಷ್ಯನ ತಿಳಿವಳಿಕೆ ಹೆಚ್ಚು ಪಕ್ವವಾಗುತ್ತಿದ್ದಂತೆ ವಿನಯ ಹೆಚ್ಚಾಗುತ್ತದೆ ಅನ್ನೊಕೆ ಅವರೇ ಉದಾಹರಣೆ.
ಅದೇ ಅಲ್ಪ ಜ್ಞಾನಿಗಳು ಇಡೀ ಪ್ರಪಂಚಕ್ಕೆ ತಿಳಿಯದಿದ್ದದ್ದು ನನಗೆ ತಿಳಿದಿದೆ ಅನ್ನೋ ಗರ್ವದಿಂದ ಬೀಗ್ತಾ ಇರ್ತಾರೆ. ಯಾರಿಗೂ ಅರ್ಥವಾಗದ ಭಾಷೆಲಿ ಮಾತಾಡೋದು, ಜನರಿಂದ ದೂರ ಇರೋದು, ಮುಖ ಗಂಟಿಕ್ಕಿಕೊಂಡು ಮಾತೋಡೋದು - ಇಂಥವೇ ಹಲವು ಡಿಸ್ಆರ್ಡರ್ ಗಳು ಅಲ್ಪಮತಿಗಳಲ್ಲಿ ಕಾಣುತ್ತವೆ.
ನಮ್ಮ ರಾಜ್ಯದ ಕೆಲವು ರಾಜಕಾರಣಿಗಳು ಅಧಿಕಾರ ಇಲ್ಲದೇ ಇರೋವಾಗ ಅಣ್ಣಾ... ಅಪ್ಪಾ.. ಅಂತ ಮಾತಾಡಿಸ್ತಾ ಇರ್ತಾರೆ, ಬೆನ್ನುಬೀಳ್ತಾರೆ. ಅದೇ ಅಧಿಕಾರ ಬಂದಾಗ ಪರಿಚಯ ಇದ್ದರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಅಧಿಕಾರದ ಅಮಲು ನೆತ್ತಿಗೇರಿರುತ್ತದೆ. ಅಧಿಕಾರ ಇದ್ದಾಗ ಸಿಗೋ ತಾತ್ಕಾಲಿಕ ಗೌರವ, ಸಂಪಾದಿಸಬಹುದಾದ ಹಣ ಅವರ ತಲೆಯನ್ನ ಗಿರಗಿಟ್ಲೆ ಆಡಿಸ್ತಾ ಇರತ್ತೆ. ಎಲ್ಲಾ ಪಕ್ಷಗಳಲ್ಲೂ ಇಂಥವರು ಇದ್ದಾರೆ ಬಿಡಿ.

ಮೇಲಿನ ಟಿಪ್ಪಣಿಯೊಂದಿಗೆ ನಾನು ಹೇಳಬೇಕಾದ್ದನ್ನು ಈಗ ಹೇಳುತ್ತೆನೆ- ಈಗಿನ ಕೇಂದ್ರ ಸರ್ಕಾರದಲ್ಲಿ ತೀರಾ ಟಿಪಿಕಲ್ ಸ್ವಭಾವದ ಮಂತ್ರಿಗಳಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ಖುಷಿಯಾಗುತ್ತದೆ. ಇಂಥವರ ಕೈಯಲ್ಲಿ ದೇಶ ಇದ್ದರೆ, ದೇಶದ ಜನ ನಿರಾಳವಾಗಿರಬಹುದು ನೋಡಪ್ಪಾ ಅಂತ ಅನ್ನಿಸದೇ ಇರದು.
ಅಂಥವರಲ್ಲಿ ಮೊದಲಿಗ ಡಾ.ಮನಮೋಹನ್ ಸಿಂಗ್. ಹಿಂದೆ ಪ್ಲಾನಿಂಗ್ ಕಮಿಷನ್ನಿನ ಉಪಾಧ್ಯಕ್ಷರಾಗಿದ್ದಾಗ ದೇಶ ಸಂಕಷ್ಟದಲ್ಲಿದೆ ಅನ್ನೊ ಕಾರಣಕ್ಕೆ ಒಂದು ರೂಪಾಯಿ ಗೌರವಧನ ಪಡೆಯುತ್ತಿದ್ದರಂತೆ.
ನಿಜಕ್ಕೂ ವಿನಯವಂತರಾದ ಮನಮೋಹನ್ ಗಂಟಲು ಬಿಚ್ಚಿ ಮಾತಾಡಿದ್ದನ್ನು ಯಾರೂ ನೋಡಿರಲಾರರು. ಸಿಂಗ್ ರ ಇಂಟಗ್ರಿಟಿ, ದೂರದೃಷ್ಟಿಯನ್ನ ಪ್ರಶ್ನೆ ಮಾಡೋಕೆ ಸಾದ್ಯವಾಗೋಲ್ಲ. ಮನಮೋಹನ್ ಸ್ವಲ್ಪೇ ಸ್ವಲ್ಪ ಕೋಪದಿಂದ ಮಾತಾಡಿದ್ದನ್ನ ಜನ ನೋಡಿದ್ದು ಕಳೆದ ಚುನಾವಣೆಗಳ ಸಮಯದಲ್ಲಿ. ಅಡ್ವಾಣಿ ತನ್ನನ್ನ ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ ಅಂತ ದೂಷಿಸುತ್ತಾ ಇದ್ದರು. ಹೋದ ಕಡೆಯಲ್ಲಾ ಅದೇ ಭಾಷಣ ಮಾಡುತ್ತಿದ್ದರು. ಆಗ ಮನಮೋಹನ್ ಹೇಳಿದ್ದು, "ನಾನು ಅಡ್ವಾಣಿ ಅವರ ರಾಜಕೀಯ ಜೀವನ ಗಮನಿಸಿದ್ದೇನೆ, ರಾಮಮಂದಿರ ಕೆಡವಿದ್ದು, ದೇಶವ್ಯಾಪಿ ರಥಯಾತ್ರೆ ಮಾಡಿದ್ದೇ ಅವರ ಸಾಧನೆ; ಬೇರೇನಾದರು ಇದೆಯಾ..? ಅವರೇ ಹೇಳಲಿ " ಅಂದಿದ್ದರು. ಬಹುಶ ಮನಮೋಹನ್ ಮಾಡಿರಬಹುದಾದ ಉಗ್ರಾತಿಉಗ್ರ ರಾಜಕೀಯ ಭಾಷಣ ಇದೇ ಇರಬಹುದೇನೋ..! ಮನಮೊಹನ್ ಪ್ರಧಾನಮಂತ್ರಿಯಾದರೂ ತನ್ನ ನೆಂಟರಿಷ್ಟರನ್ನೆಲ್ಲಾ ಮನೆಯಲ್ಲಿ ತುಂಬಿಕೊಂಡಿಲ್ಲ. ಈಗಲೂ ಅವಕಾಶ ಸಿಕ್ಕ ಕಡೆಯೆಲ್ಲಾ ತಮ್ಮ ಹೆಂಡತಿ ಕಟ್ಟಿಕೊಟ್ಟ ಬುತ್ತಿಯನ್ನ ತೆಗೆದುಕೊಂಡು ಹೋಗ್ತಾರೆ ಪ್ರಧಾನಿ...

ಇನ್ನೊಬ್ಬ ಟಿಪಿಕಲ್ ಆಸಾಮಿ ರಕ್ಷಣಾ ಸಚಿವ ಎ.ಕೆ. ಆಂಟನಿ. ಇವರ ಬಗ್ಗೆ ಇವರ ರಾಜಕೀಯ ಜೀವಮಾನದ ಉದ್ದಕ್ಕೂ ಯಾರೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಮಾಡೋದು ಕಷ್ಟ ಅಗಬಹುದೇನೋ. ಯಾಕೆಂದರೆ, ಆಂಟನಿ ರಾಜೀನಾಮೆ ಪತ್ರವನ್ನ ತನ್ನ ಕಿಸೆಯಲ್ಲೇ ಇಟ್ಟುಕೊಂಡು ತಿರುಗುತ್ತಾರಂತೆ ಅನ್ನೊ ಲಘುವಾದ ಜೋಕೊಂದು ಜಾಲ್ತಿಯಲ್ಲಿದೆ. ಇದು ನಿಜವೇ ಇರಬೇಕೇನೋ. ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೇರಳದಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳ ಖರ್ಚಿಗೆ ಅಂತ ಅಲ್ಲಿನ ನಾಯಕ ಆಂಟನಿಯವರಿಗೆ ತಮ್ಮ ನಂಬಿಂಕಸ್ಥ ಮಂತ್ರಿಯೊಬ್ಬರ ಕೈಯಲ್ಲಿ ಸಾಕಷ್ಠು ಹಣ ಕಳಿಸಿದ್ದರಂತೆ. ಆ ಹಣವನ್ನು ಸ್ವೀಕರಿಸಲು ಆಂಟನಿ ನಿರಾಕರಿಸಿ, ನಂಗೆ ಹಣ ಬೇಡ, ನೀವೇ ಕ್ಷೇತ್ರದಲ್ಲೆಲ್ಲಾ ತಿರುಗಿ ಹಂಚಿ ಬಿಡಿ ಅಂತ ಹೇಳಿ ಕಳಿಸಿದ್ದರಂತೆ. ಇದನ್ನ ನಂಗೆ ಕಾಂಗ್ರೆಸ್ ಲೀಡರ್ ಒಬ್ಬರು ಹೇಳಿದ್ದರು.
ಕೇರಳದ ಪತ್ರಕರ್ತ ಸ್ನೇಹಿತನೊಬ್ಬ ಎ.ಕೆ. ಆಂಟನಿ ಎರಡನೇ ಬಾರಿ ರಕ್ಷಣಾ ಸಚಿವನಾದಾಗ ಹೇಳಿದ್ದು ನೆನಪಿದೆ. 'ಶ್ರೀನಿವಾಸ್, ಈ ಮನುಷ್ಯ ಅಧಿಕಾರ ಬೇಡ ಅಂತ ದೂರ ಹೋದಾಗಲೆಲ್ಲ ಈತನಿಗೆ ಅಧಿಕಾರ ಹುಡುಕಿಕೊಂಡು ಬರುತ್ತೆ ನೋಡು, ಅಂದಿದ್ದ. ಈತನ ಸರಳತೆಯೇ ಅವರ ಶಕ್ತಿ ಅಂದಿದ್ದ'.

ಈಗ ಕೇಂದ್ರದಲ್ಲಿ ರೈಲ್ವೇ ಮಂತ್ರಿ ಆಗಿರೋ ಮಮತಾ ಬ್ಯಾನರ್ಜಿ ಕೂಡಾ ಟಿಪಿಕಲ್ ಬೆಂಗಾಲಿ. ಆಕೆ ಅತಿದೊಡ್ಡ ರೈಲ್ವೇ ಇಲಾಖೆ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮೇಲೂ ಆಕೆ ಹಾಕಿಕೊಳ್ಳೊದು ಹವಾಯಿ ಚಪ್ಪಲಿ.
ಮೊನ್ನೆ ರೈಲು ಬಜೆಟ್ ಮಂಡಿಸಲು ಆಕೆ ಬಂದಿದ್ದು ತನ್ನ ಹಳೇ ಮಾರುತಿ ಜೆನ್ ಕಾರಿನಲ್ಲಿ. ಸೆಕ್ಯುರಿಟಿ ಕೂಡಾ ಬಳಸೋಲ್ಲ. ಕೊಲ್ಕಾತ್ತಾದಲ್ಲಿ ಆಕೆಯದು ಈಗಲೂ ಸಿಂಗಲ್ ಬೆಡ್ ರೂಂ ಹೌಸ್. ಅದರಲ್ಲೇ ತಾನು, ತನ್ನ ತಾಯಿ, ಸಹೋದರ ಎಲ್ಲಾರು ವಾಸಮಾಡುತ್ತಾರಂತೆ.

ತಮಿಳುನಾಡಿನ ಮತ್ತೊಬ್ಬ ಟಿಪಿಕಲ್ ತಮಿಳಣ್ಣನ್ ಚಿದಂಬರಂ. ಆತ ಚುನಾವಣೆಯಲ್ಲಿ ಗೆದ್ದ ರೀತಿಯ ಬಗ್ಗೆ ಈಗಲೂ ಅನುಮಾನಗಳಿವೆ. ಆದರೂ, ಮಂತ್ರಿಯಾಗಿ ಆತನ ಕಾರ್ಯವೈಖರಿ ಮೆಚ್ಚುವಂತದ್ದು. ದೇಶದ ಗೃಹ ಸಚಿವರಾಗಿ ಕೈಗೊಂದು ಕಾಲಿಗೊಂದ್ದು ಸೇವಕರನ್ನ ಇಟ್ಟುಕೊಳ್ಳಬಹುದು. ಆದರೆ ಚಿದಂಬರಂ ಮಾತ್ರ ತನ್ನೆಲ್ಲಾ ಫೈಲುಗಳನ್ನ ತಾನೇ ಕಂಕುಳಲ್ಲಿ ಹಿಡಕೊಂಡು ತಿರುಗೊದನ್ನ ನೀವು ನೋಡಿರಬಹುದು. ಅಷ್ಟೇ ಅಲ್ಲಾ ಚಿದಂಬರಂ ಓಡಾಡೋದು ಈಗಲೂ ಅವರ ಫೆೇವರಿಟ್ ಹಳೇ ಎಸ್ಟೀಮ್ ಕಾರಿನಲ್ಲಿ..! ದೆಹಲಿಯಲ್ಲಿ ಇದ್ದಾಗ ಯಾವುದೇ ಸೆಕ್ಯುರಿಟಿಯವರನ್ನ ಹಿಂದೆ ಮುಂದೆ ಇಟ್ಟುಕೊಳ್ಳೊದಿಲ್ಲ. ಟ್ರಾಪಿಕ್ ಸಿಗ್ನಲ್ಲುಗಳಲ್ಲಿ ಕಾರನ್ನು ನಿಲ್ಲಿಸುತ್ತಾ ಅಡ್ಡಾಡುವಸ್ಟು ಸರಳತೆ ಇದೆ. ಸೌತ್ ಬ್ಲಾಕ್ ನ ತಮ್ಮ ಕಚೇರಿಯ ನೌಕರೆಲ್ಲಾ ಮನೆಗೆ ಹೋದರೂ ಆಫೀಸಿನಲ್ಲೇ ಕುಳಿತು ಕೆಲಸ ಮಾಡುತ್ತಿರುತ್ತಾನೆ ಗೃಹಮಂತ್ರಿ.

ಹೀಗೆ, ಟಿಪಿಕಲ್ ತರದ ತುಂಬಾ ಮಂದಿ ಇದ್ದಾರೆ. ಎಲ್ಲಾರ ಬಗ್ಗೆ ಇಲ್ಲಿ ಬರೆಯೋಕೆ ಆಗಲ್ಲ. ಆದರೆ, ಇಂಥದೇ ಚುರುಕಿನ ಕನ್ನಡಿಗ ಒಬ್ಬ ಇದ್ದಾರೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಂತ್ರಿ ಜೈರಾಮ್ ರಮೇಶ್. ನೋಡಲಿಕ್ಕೆ ಒಳ್ಳೆ ಬ್ರಿಟೀಷರ ವಂಶದವನಂತೆ ಕಂಡರೂ ರಮೇಶ್ ಮೂಲತ ಚಿಕ್ಕಮಗಳೂರು ಕಡೆಯವರು. ವರ್ಕೋಹಾಲಿಕ್ ಅಂತಾರಲ್ಲ ಅಂಥವ. ತನ್ನ ಇಲಾಖೆಗೆ ಸಂಭಂದಿಸಿದ ಕೆಲಸ ಎಲ್ಲೇ ಇರಲಿ, ತಾನೇ ಖುದ್ದು ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಕೈಲೊಂದು ಚರ್ಮದ ಬ್ಯಾಗು ಹಿಡಕೊಂಡು ಕೆಲಸ ಆಗಬೇಕಾದ ಅಧಿಕಾರಿ ಹತ್ರ ತಾನೆ ತಿರುಗಿ ಸಹಿ ಹಾಕಿಸಿಕೊಂಡು ಬರುತ್ತಾರೆ. ಅರ್ಧ ವಯಸ್ಸು ಆಗಿದ್ದರು ಇಪ್ಪತ್ತರ ಯುವಕನಂತೆ ಚಂಗನೆ ಜಿಗಿಯುತ್ತಾ ಜೋಕ್ ಮಾಡುತ್ತಾ ಇರ್ತಾರೆ. ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಅನ್ನೋ ಬಿಗುಮಾನ, ಹಮ್ಮು ಆತನಿಗೆ ಇಲ್ಲ. 'ಈಗೋ' ಅಂತಾರಲ್ಲ ಅದು ನನಗಂತೂ ಕಂಡಿಲ್ಲ. ನಿಜಕ್ಕೂ ಲವಬಲ್ ಅಂತಾರಲ್ಲಾ ಅಂಥವನು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಆತ ಉತ್ತರಿಸೋ ವಿಧಾನ ನೋಡಿದರಂತೂ ಎಂಥಾ ತಲೆ ಈತನದು ಅನ್ನಿಸದೇ ಇರಲಾರದು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ವಾರ್ ರೂಮಿನ ಅಧ್ಯಕ್ಷ ಆಗಿದ್ದ ಜೈರಾಮ್ ಕಾಂಗ್ರೆಸ್ ನ ಪ್ರಮುಖ ಸ್ಟ್ರಾಟಜಿಸ್ಚ್ ಕೂಡ ಹೌದು.

ಸಂಪುಟದಲ್ಲಿ ಇರೋರೆಲ್ಲರೂ ಹಾಗೆ ಇದ್ದಾರೆ ಅನ್ನೊದು ನನ್ನ ವಾದ ಅಲ್ಲ. ಕಾಂಗ್ರೆಸ್ ನಲ್ಲಿ ಪ್ರಖಾಂಡ ಖದೀಮರೂ ಇದ್ದಾರೆ ಬಿಡಿ. ಆದರೆ ನಮ್ಮಲ್ಲಿನ ಕೆಲ ಮಂತ್ರಿಗಳು, ಎಂಎಲ್ಎ ಗಳು ಜನ ಅಧಿಕಾರ ಕೊಟ್ಟಾಗ ಐಶಾರಾಮದಿಂದ ಅಧಿಕಾರದ ಮದದಿಂದ ನಡಕೋತಾರೆ. ಅದೇ ರಾಜಕೀಯದಲ್ಲಿ ಒಳ್ಳೇ ಮಂದಿಯೂ ಇದ್ದಾರೆ. ಹೀಗಾಗಿ ಇಂಡಿಯಾದ ಡೆಮಾಕ್ರಸಿ ಬ್ಯಾಲೆನ್ಸ್ ಆಗ್ತಾ ಇರತ್ತೆ.
ಕೆಲವರು ಅಧಿಕಾರವನ್ನ ಹಣದಿಂದ, ದರ್ಪದಿಂದ ಪಡೆಯುತ್ತಾರೆ. ಕೆಲವರು ರಾಜಕೀಯ ಸಂಘರ್ಷದಿಂದ ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಗಳಿಸುತ್ತಾರೆ ಅಲ್ಲವಾ...?



Sunday, July 12, 2009

ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ....


ರಾಜಕೀಯ ಅನ್ನೋದು ನಿಜಕ್ಕೂ ರೋಚಕ ಸಂಗತಿಗಳ ಗಣಿ ಇದ್ದ ಹಾಗೆ, ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಅಂತ ರಾಜಕೀಯದ ಬಗ್ಗೆ ಜೋಕ್ ಮಾಡೋ ಮಂದಿಗೂ ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಇರತ್ತೆ, ಚಾನ್ಸ್ ಸಿಕ್ಕರೆ ನೋಡೇ ಬಿಡೋಣ ಅಂತ ಒಳಗೋಳಗೆ ಅಂದುಕೊಳ್ತಾ ಇರ್ತಾರೆ.
ಸಲೂನಿನಲ್ಲಿ ಕೆಲಸ ಮಾಡುವ ಕ್ಷೌರಿಕ ಕೂಡ ರಾಜಕೀಯ ವ್ಯಕ್ತಿಯೊಬ್ಬನಿಗೆ ಕ್ಷೌರ ಮಾಡುತ್ತಾ ತನ್ನ ಕುಳಿತ ಮನುಷ್ಯ ಎಂತಾ ದಡ್ಡನನ್ಮಗ ಇವನೂ ರಾಜಕಾರಣಿ ಆಗಿದ್ದಾನಲ್ಲಾ ಅಂತ ಮನಸೊಳಗೆ ಅಂದುಕೊಳ್ಳಲಿಕ್ಕೆ ಸಾಕು. ನನಗೂ ಮೂರ್ಖ ರಾಜಕಾರಣಿಗಳ ಜೊತೆ ಬೆರೆಯೋ ಅವಕಾಶ ಸಿಕ್ಕಾಗಲೆಲ್ಲ ಹಾಗೆ ಅನಿಸಿದೆ, ಯಾಕಂದರೆ ಇಂಡಿಯೂದ ಡೆಮಾಕ್ರಸಿಯಲ್ಲಿ ಎಂತೆಂತವರೋ ಪಾರ್ಲಿಮೆಂಟಿಗೆ ಬಂದು ಹೋಗಿದ್ದಾರೆ.

ರಾಜಕೀಯಕೀಯಕ್ಕೆ ಬರೋಕೆ ಇಂತದೇ ಕ್ವಾಲಿಪಿಕೇಶನ್ನು ಅಂತ ಇಲ್ಲವಲ್ಲಾ ಯಾರ್ಯಾರೋ ಇಲ್ಲಿ ಬಂದು ಹೋಗಿದ್ದಾರೆ. ಮೊನ್ನೆ ಕನ್ನಡಿಗ, ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಬರೆದಿರುವ 'what ails Indian parliament' ಅನ್ನೋ ಪುಸ್ತಕ ಓದ್ತಾ ಇದ್ದೆ, ಅದರಲ್ಲಿ 11 ನೇ ಲೋಕಸಬೆಯಲ್ಲಿ ಇದ್ದ ಕೆಲವು ಪೆಕ್ಯುಲಿಯರ್ ಎಂಪಿಗಳ ಬಗ್ಗೆ ಬರೆದಿದ್ದರು, ಅದರಲ್ಲಿ ಉತ್ತರಪ್ರದೇಶದ ಎಂಪಿ ಒಬ್ಬ ತನ್ನ ಒಲಿಸಿಕೊಳ್ಳೋಕ್ಕೆ ಹಿಡಿದಿದ್ದ ದಾರಿಯನ್ನ ವಿವರಿಸಿದ್ದರು, ಆ ಎಂಪಿಯ ಹೆಸರು ನನಗೆ ಮರೆತುಹೋಗಿದೆ, ಆ ಮಹಾಶಯನ ಪ್ರಮುಖ ಕೆಲಸ ಏನಪ್ಪಾ ಅಂದರೆ ತನ್ನ ಕ್ಷೇತ್ರದಲ್ಲಿ ಸತ್ತವರ ಬೂದಿಯನ್ನ ಪವಿತ್ರ ಗಂಗಾ ನದಿಯಲ್ಲಿ ಬಿಟ್ಟು ಬರೋದು. ಆತ ಈ ಕೆಲಸವನ್ನ ಎಷ್ಟು ಸಿರಿಯಸ್ಸಾಗಿ ಮಾಡುತ್ತಿದ್ದ ಅಂದರೆ ನಾನು ಡೆಲ್ಲಿಯಿಂದ ವಾಪಸ್ಸು ಬಂದಿದ್ದೆನೇ ಮುಂದಿನ ವಾರ ಕಾಶಿಗೆ ಹೋಗುತ್ತಿದ್ದೇನೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸತ್ತವರ ಮನೆಯವರು ಪಿಂಡದ ಮಡಿಕೆಯನ್ನ ಇಂತಾ ದಿನದ ಒಳಗೆ ನನಗೆ ತಲುಪಿಸಿ ಅಂತ ನ್ಯೂಸ್ ಪೇಪರಿನಲ್ಲಿ ಜಾಹಿರಾತು ಹೊರಡಿಸುತ್ತಿದ್ದನಂತೆ, ವಾಪಸ್ಸು ಬಂದಾಗ ಮತ್ತೆ ಜಾಹಿರಾತು ನೀಡಿ ಕಾಶಿಯಿಂದ ವಾಪ್ಪಸ್ಸು ಬಂದಿದ್ದೇನೆ ಗಂಗಾಜಲವನ್ನ ವಾಪಸ್ಸು ಒಯ್ಯಿರಿ ಅಂತ ಮಾಹಿತಿ ನೀಡುತ್ತಿದ್ದನಂತೆ.... ಆತನ ಈ ಪವಿತ್ರ ಕಾರ್ಯವನ್ನ ಮೆಚ್ಚಿ ಜನ ಅವನನ್ನ ಎರಡೆರಡು ಬಾರಿ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದರಂತೆ...

ಈಗ ನೆನಪಾಯಿತು ನೋಡಿ ಕಳೆದ ವರ್ಷ ಮೂಲೂರಿನ ಶಾಸಕ ಹಾಗು ಹಾಗಿನ ಮುಜರಾಯಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿಗೆಂದು ಗಂಗಾಜಲವನ್ನ ತರಿಸಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ನೀಡಿ ರಾಜ್ಯದ ಜನತೆಯ ಕೃಪೆಗೆ ಪಾತ್ರರಾಗಿದ್ದರಲ್ಲಾ. ಇದೆ ಶೆಟ್ಟಿ ಚುನಾವಣೆಗಳಲ್ಲಿ ಗೆಲ್ಲೂದು ಹೇಗಪ್ಪಾ ಅಂದರೆ ಕ್ಷೇತ್ರದ ಹಳ್ಳಿಯವರನ್ನ ತಂಡೋಪತಂಡವಾಗಿ ಪವಿತ್ರ ಕ್ಷೇತ್ರಗಳಿಗೆ ಪ್ರವಾಸಕ್ಕೆ ಸ್ವಂತ ಖರ್ಚಿನಲ್ಲಿ ಕಳೆಸುತ್ತಾರೆ. ಮತದಾರರಿಗೆ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿಸಿದ ಪುಣ್ಯಾತ್ಮನಿಗೆ ಪುಟಗೋಸಿ ಒಂದು ಓಟು ಕೊಡೋದು ಯಾವ ಲೆಕ್ಕದ ಮಾತು ಅಲ್ಲವಾ...
ಮನೆಗೆ ಬಂದವರಿಗೆಲ್ಲಾ ತಿರುಪತಿ ಲಾಡು ತಿನ್ನಿಸೋದೇ ಅಲ್ಲ ಆತನನ್ನ ಭೇಟಿ ಮಾಡೋಕೆ ಹೋದ ಪತ್ರಕರ್ತರಿಗೂ ತಿರುಪತಿ ಲಾಡು ತಿನ್ನಿಸುವುದನ್ನ ನಾನೇ ನೋಡಿದ್ದೇನೆ.

ಮದ್ದೂರು ಕ್ಷೇತ್ರದಲ್ಲಿ ಶಾಸಕರಾಗಿ ಕಳೆದು ವರ್ಷ ತೀರಿಕೊಂಡರಲ್ಲಾ ಸಿದ್ದರಾಜು, ಅವರ ಚುನಾವಣಾ ಟ್ರೇಡ್ ಸೀಕ್ರೇಟ್ ಏನಪ್ಪಾ ಅಂದರೆ ಅವರ ಕ್ಷೇತ್ರದಲ್ಲಿ ಯಾರಾದರೂ ತೀರಿಕೊಂಡರೆ ಸಾಕು, ದಿಡೀರ್ ಅಂತ ಹೋಗಿ ಕಣ್ಣೀರಾಕಿಬಿಡೋದು ಜೊತೆಗೆ ಸತ್ತವನನ್ನ ಧಪನ್ ಮಾಡುವರೆಗೆ ಜೊತೆಗಿದ್ದು ಶವಯಾತ್ರೆಯಲ್ಲಿ ಹೆಗಲು ಕೊಟ್ಟು ಬಿಡೋದು. ಸತ್ತಮನೆಯ ನೋವಿಗೆ ಮಿಡಿವ ಶಾಸಕನಿಗಿಂತಾ ಜನಪ್ರತಿನಿದಿ ಬೇಕಾ ನೀವೆ ಹೇಳಿ.

ಅದೇ ಮೊನ್ನೆ ತಾನೆ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾದರಲ್ಲಾ ಸೋಮಣ್ಣ ಅವರು ಮಂತ್ರಿಯಾದ ತಕ್ಷಣ 20,000 ಸಾವಿರ ಜನಕ್ಕೆ ಬಾಡೂಟ ಹಾಕಿಸಿದರಂತೆ ಯಾಕ್ರಪ್ಪಾ ಅಂತ ಸೋಮಣ್ಣನ ಅನುಯಾಯಿಯೊಬ್ಬನನ್ನ ವಿಚಾರಿಸಿದೆ, ಅದಕ್ಕೆ ಅವ ಹೇಳಿದ್ದೇನು ಗೊತ್ತೇ ನೋಡಿ ಸಾರ್ ಗೋವಿಂದರಾಜನಗರದಲ್ಲಿ ಇರೋದೆ ಕುರುಬ್ರೂ, ವಕ್ಕಲಿಗ್ರೂ ಅವರಿಗೆ ಬಾಡೂಟ ಹಾಕಿಸಿದ್ರೆ ಖುಷ್ ಆಗ್ತಾರೆ ಓಟೂ ಕೊಡ್ತಾರೆ, ನಂ ಸೋಮಣ್ಣನಿಗೆ ಜನನಾ ಹೆಂಗೆ ಇಟ್ಕಬೇಕು ಅಂತ ಗೊತ್ತೂ ಸಾರ್ ಮತ್ತೆ ಗೆಲ್ಲೇ ಗೆಲ್ತಿವಿ ಸಾರ್ ಅಂದ, ನಾನು ಬೆರಗಾದೆ...
ರಾಜಕಾರಣಿಗಳ ಗಿಮ್ಮಿಕ್ಕುಗಳೇ ಇಂತವು ಯಾರು ಮದುಗೆ ಕರೆದರೂ ಹೋಗೋದು, ನಾಮಕರಣ, ಹುಟ್ಟುಹಬ್ಬ, ತಿಥಿ, ಸಾವು, ಕಡೆಗೆ ಸೀಮಂತ, ಒಸಕೆ ಗಳಿಗೆಲ್ಲಾ ಹೋದರೆ ಜನ ಓಟ್ ಹಾಕ್ತಾರಂತೆ ಇಲ್ಲಾ ಅಂದರೆ ಜನ ಕೋಪಿಸಿಕೊಳ್ತಾರಂತೆ.. ಸದ್ಯ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ ದೊಡ್ಡ ಇಲಾಖೆಯ ಮಂತ್ರಿ ಯೊಬ್ಬರು ಬೇಕಾದರೆ ಪಾರ್ಲಿಮೆಂಟ್ ಸೆಷನ್ ಬೇಕಾದರೂ ತಪ್ಪಿಸಿಕೊಂಡಾರು, ಯಾರದಾದರೂ ಮದುವೆಗೆ ಕರೆದಿದ್ದರೆ ಬಿಲ್ ಕುಲ್ ತಪ್ಪಿಸಿಕೊಳ್ಳುವುದಿಲ್ಲ ಅಸ್ಟರ ಮಟ್ಟಿಗೆ ಅವರು ಕ್ಷೇತ್ರದ ಜನತೆಯೊಂದಿಗೆ ಬೆರೆತುಹೋಗಿದ್ದಾರೆ.

ಮೊನ್ನೆ ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಿರೋ ವರ್ತೂರು ಪ್ರಕಾಶ್ ದೆಹಲಿಗೆ ಬಂದಿದ್ದರು ಆ ಮನುಷ್ಯ ವಿಚಿತ್ರ ಅಂತ ಎಲ್ಲಾರಿಗೂ ಗೊತ್ತು, ಸುಮ್ಮನೆ ಕುತೂಹಲಕ್ಕೆ ಅಂತ ಮಾತಿಗೆ ಎಳೆದೆ . ದೆಹಲಿಯ ಕರ್ನಾಟಕ ಭವನದ ಕ್ಯಾಂಟೀನಿನಲ್ಲಿ ಭರ್ಜರಿ ಕುರಿಗಳ ತಲೆ ಮಾಂಸ ತಾನೇ ಆರ್ಡರ್ ಮಾಡಿಸಿಕೊಂಡು ಸಮಾ ತಿನ್ನುತ್ತಾ ಕುಳಿತಿದ್ದ , ನಮಸ್ಕಾರ ಸಾರ್ ಅಂತ ಪರಿಚಯ ಮಾಡಿಕೊಂಡೆ, ಏನ್ ಗುರು ನೀನು ಓದಿದ್ದು ಅಂತ ಕೇಳಿದ, ನಾನು ಮಾಸ್ಟರ್ ಡಿಗ್ರಿ ಮಾಡಿದ್ದೀನಿ ಸಾರ್, ಮಾಸ್ ಕಮ್ಯುನಿಕೇಷನ್ ಜರ್ನಲಿಸಂ ಸಾರ್ ಅಂದೆ. ಆತ ಹೌದಾ... ಅಂತ ಸುಮ್ಮನಿರದೇ 'ಬಿಎ ಗಿಯೇ' ಮಾಡಿಲ್ವಾ ಅಂದ. ನಂಗೆ ನಗು ಬಂದರೂ ತೋರಿಸಿಕೊಳ್ಳದೇ ಅದನ್ನೂ ಮಾಡಿದ್ದೀನಿ ಸಾರ್ ಅಂದೆ......ಹಾಗೆ ಮುಂದುವರೆದು ಕೆಆರ್ ಪುರಂ ಕಾಲೇಜಿನಲ್ಲಿ ನಿಮ್ಮಂತಾ ಜರ್ನಲಿಸ್ಟುಗಳನ್ನೆಲ್ಲಾ ಓದಿಸ್ತಾ ಇದ್ದೀನಿ, ಅದಕ್ಕೆ ಅಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನೆ, ಮುಂದಿನ ವರ್ಷದಿಂದ ಅವರೆಲ್ಲಾ ಟಿವಿ, ಪೇಪರಿನಲ್ಲಿ ಕೆಲಸಕ್ಕೆ ಸೇರ್ತಾರೆ ನನನ್ನ ಪುಲ್ ಟಿವಿಯಲ್ಲಿ ತೋರಿಸ್ತಾರೆ ಅಂದ.
ನಾನು ಯಾರಪ್ಪಾ ಅವರು ಜರ್ನಲಿಂಸಂ ವಿದ್ಯಾರ್ಥಿಗಳು ಇವರಿಂದ ಬೆಳಿಸ್ಕೋಳ್ತಿರೋದು ಅಂದುಕೊಂಡೆ.....

ನಮ್ಮ ರಾಜಕಾರಣಿಗಳೇ ಹಾಗೆ ವಿಚಿತ್ರವಾಗಿರ್ತಾರೆ ಅವರ ಹತ್ರ ಮಾತಾಡುತ್ತಿದ್ದರೆ ಇಂತವರನ್ನೆಲ್ಲಾ ಹೇಗೆ ಆಯ್ಕೆ ಮಾಡಿದರಪ್ಪಾ ಅಂತಾ ಅನ್ನಿಸುತ್ತಿರುತ್ತೆ, ಅವರ ಎಲೆಕ್ಷನ್ ಟೆಕ್ನಿಕ್ಕುಗಳೂ ಹಾಗೆ ವಿಚಿತ್ರ ಮತ್ತು ವೈಶಿಷ್ಠ್ಯ ಪೂರ್ಣ...

Friday, July 10, 2009

ಎನ್ಕೌಂಟರ್ ಇನ್ ಆಪ್ರೀಕಾ......!!!


ಎನ್ಕೌಂಟರ್ ವಿಥ್ ಎಲಿಫೆಂಟ್ ಅಂತ ನಾನು ಬರೆದ ಬ್ಲಾಗ್ ಪೋಸ್ಟ್ ಗೆ ನನ್ನ ಗೆಳೆಯ ಜಯಕುಮಾರ್ ರಿಯಾಕ್ಟ್ ಮಾಡಲು ನನಗೆ ಕರೆ ಮಾಡಿದ್ದರು ಆನೆಗಳ ಬಗ್ಗೆ ಮತ್ತಷ್ಟು ಬರೀರಿ ಗೌಡ್ರೆ ಅಂತ ಹೇಳಿದ್ರು... ಜೊತೆಗೆ ಶಿರಾಡಿ ಘಾಟಿಯಲ್ಲಿ ತಾನು ಪ್ರಯಾಣಿಸುತ್ತಿದ್ದಾಗ ದಿಡೀರನೆ ಕೆಎಸ್ಆರ್ ಟಿ ಸಿ ಬಸ್ಸಿಗೆ ಅಡ್ಡಬಂದ ಆನೆ ಮಾಡಿದ ಪಜೀತಿ ಬಗ್ಗೆ ಹೇಳಿದ್ರು , ಆನೆ ಕಂಡಾ ಕ್ಷಣ ಮೀಟರ್ ಅಪ್ ಆದ ಡೈವರ್ ಒಂದು ಕಿಲೋಮೇಟರ್ ವರೆಗೆ ಬಸ್ಸನ್ನ ಹಿಂದಕ್ಕೆ ಓಡಿಸಿಕೊಂಡೆು ಹೊದನಂತೆ, ಯಾವ ಯಾವ ಊರಿನಿಂದಲೋ ಬಂದಿದ್ದ ಪ್ರಯಾಣಿಕರು ಕೆಳಗೆ ಇಳಿದು ಓಡಿದರಂತೆ. ಹೀಗೆ ಆನೆ ಮಾಡಿದ ಪಜೀತಿ ಹೇಳುತ್ತಾ ಆನೆಗಳನ್ನು ಖೆಡ್ಡಾಗಳಿಗೆ ಕೆಡುವಲು ಸರ್ಕಾರದಿಂದ ಬರುವ ಹಣವನ್ನ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ಹೇಗೆ ಖೆಡ್ಡಾಕ್ಕೆ ಕೆಡವುತ್ತಿದ್ದಾರೆ ಅಂತ ವಿವರಿಸಿದರು. ಪಾಪ ಆನೆಗಳನ್ನು ರಕ್ಷಿಸಲು ಥಾಯ್ಲೆಂಡ್ ನಲ್ಲಿರುವಂತೆ ಆನೆದಾಮ ಮಾಡಿದ್ರೆ ಒಳ್ಳೇದು ಅಂತ ಹೇಳಿದ್ರು.....
ಅಮೇಲೆ ಸ್ಪಲ್ಪ ಹೊತ್ತಿಗೆ ಆನೆ ಕೈಗೆ ಸಿಕ್ಕಿಕೊಂಡರೆ ಹೇಗಿರುತ್ತೇ ಅಂತ ನನ್ನ ಪೋಸ್ಟಿಗೆ ಪೂರಕವಾಗಿ ಆಪ್ರೀಕಾ ಕಾಡಿನಲ್ಲಿ ತೆಗೆದ ಒಂದು ಪೋಟೋ ಕಳಿಸಿಕೊಟ್ಟರು ಹಳೇದನ್ನ ನೆನಿಸಿಕೊಂಡ ನನಗೆ ಮತ್ತೊಮ್ಮೆ ಮೈ ಜುಂ ಅಂತ್ತು....


ಪುಂಡಾನೆಗೆ ಕಾರಿನ ಮೇಲೆ ಕಾಲಿಡೋದು ಯಾವ ಲೆಕ್ಕ ನೀವೇ ಯೋಚಿಸಿ ಕಾಮೆಂಟ್ ಹಾಕಿ..

Tuesday, July 7, 2009

ಎನ್ಕೌಂಟರ್ ವಿಥ್ ಎಲಿಪೆಂಟ್....!!


ನನ್ನೂರು ಶುದ್ಧ ಬಯಲು ಸೀಮೆ ಪ್ರದೇಶವಾದ್ದರಿಂದ ನಮ್ಮ ಕಡೆ ಅರಣ್ಯ ಪ್ರದೇಶಗಳು ಕಮ್ಮಿ, ನಮ್ಮ ಕಡೆ ಮಕ್ಕಳು ನೀಲಗಿರಿ ತೋಪುಗಳನ್ನೇ ಕಾಡು ಅಂತ ತಿಳದುಕೊಳ್ಳುವಂತಾ ಪರಿಸ್ಥಿತಿ ಇದೆ, ನಮ್ಮ ಕಡೆಯ ನೀಲಗಿರಿ ಕಾದಿಟ್ಟ ಅರಣ್ಯಗಳಲ್ಲಿ ಕಾಣಿಸೋ ಕಾಡಿನ ಪ್ರಾಣಿಗಳಲ್ಲಿ ಹೆಚ್ಚೆಂದರೆ ನರಿ, ಮೊಲ, ಮುಳ್ಳಂದಿ, ನವಿಲು ಮುಂತಾದವು ಮಾತ್ರ. ನನಗಂತೂ ಕಾಡಿನ ಪ್ರಾಣಿಗಳೆಂದರೆ ಸಿಕ್ಕಾಪಟ್ಟೆ ಕುತೂಹಲ, ತೇಜಸ್ವಿ ಅವರ ಕಾಡಿನ ಕಥಾನಕಗಳನ್ನು ಓದಿಕೊಂಡ ಮೇಲಂತೂ ಕಾಡೆಂದರೆ ಹುಚ್ಟು, ಅಲ್ಲಿ ಕಾಡಲ್ಲಿ ಏನೋ ಇಂಟರಸ್ಚಿಂಗ್ ಆಗಿದ್ದು ನಡೀತಾ ಇದೆ ಅದನೆಲ್ಲಾ ತೇಜಸ್ವಿ ಕೂತೂಹಲದಿಂದ ನೋಡ್ತಾ ಇದಾರೆ, ಅದನ್ನೆಲ್ಲಾ ಮಂದಿನ ಬುಕ್ಕಲ್ಲಿ ನಮಗಾಗಿ ಬರೀತಾರೆ ಅಂತ ಇವಾಗಲೂ ಅನ್ನಿಸ್ತಾ ಇರತ್ತೆ. ಅವರು ಈಗ ಇಲ್ಲ ಅಂತ ನನಗೆ ನೆನಪಾಗೋದೆ ಕಮ್ಮಿ.
ಹಾಸನದಲ್ಲಿ ಇದ್ದ ಕಾರಣಕ್ಕೆ ನನಗೂ ಕಾಡಿನ ಅನುಭವಗಳನ್ನು ಅವರಿವರ ಹತ್ತಿರ ಕೇಳಕ್ಕೆ, ಕೆಲವು ಪ್ರಕರಣಗಳನ್ನ ವರದಿ ಮಾಡಕ್ಕೆ ಅವಕಾಶ ಸಿಕ್ಕಿತ್ತು.
ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಾಡು ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚು, ಕಾಡಿನಲ್ಲಿನ ಆಹಾರ ಸಿಕ್ಕದೆ ಹಸಿದು ಹೋಗುವ ಆನೆಗಳು ರೈತರ ತೋಟಗಳಿಗೆ ನುಗ್ಗುತ್ತವೆ, ಆನೆಗಳ ಉಪಟಳದಿಂದ ರೋಸಿ ಹೋಗಿರುವ ಇಲ್ಲಿನ ಜನಕ್ಕೆ ಆನೆ ಅಂದರೆ ರಾಕ್ಷಸ ಇದ್ದ ಹಾಗೆ, ಊರಿನ ಪಕ್ಕದ ಬೆಟ್ಟಕ್ಕೆ ಆನೆ ಬಂದವೆ ಅಂದ್ರೆ ರೈತರಿಗೆ ನಿದ್ದೆ ಹಾರಿ ಹೋಗಿಬಿಡುತ್ತೆ, ಆದರೆ ಟಿವಿಯಲ್ಲಿ ಆನೆ ನೋಡಿರುವ ನಮಗೆ ಆನೆ ಅಂದರೆ ಗಣೇಶ ಇದ್ದಂಗೆ ಶುದ್ಧ ಅಮಾಯಕ ಅಷ್ಠೇ. ಆದರೆ ಆನೆ ಎಷ್ಠು ಪ್ರಳಯಕಾರಿ ಅಂದರೆ ಗುಂಪು ಗುಂಪಾಗಿ ನುಗ್ಗಿದವು ಅಂದರೆ ಬೆಳೆದ ಬೆಳೆಯ ಕೊರಡು, ಕೊನರೂ ಉಳಿಯಲ್ಲಾ ಬೆಳೆಯನ್ನೆ ತಿಂದು, ತುಳಿದು ನಾಶಮಾಡಿ ಹೋಗುತ್ತವೆ.

ಎಲ್ಲಾ ಆನೆಗಳಿಗಿಂತ ಕಾಡಿನಲ್ಲಿ ಪುಂಡೆದ್ದು ಹೋಗಿರುವ ಪುಂಡಾನೆಗಳಂತೂ ಬಾರಿ ಅಪಾಯಕಾರಿ ಅಕಸ್ಮಾತಾಗಿ ಅವುಗಳ ಕೈಗೆ ಮನುಷ್ಯರೇನಾದರೂ ಸಿಕ್ಕಿದರೆ, ಗಿರ ಗಿರ ಅಂತ ಸುತ್ತಿಸಿ ಅಪ್ಪಚ್ಚಿ ಮಾಡಿ ಹಾಕುತ್ತವೆ, ನನ್ನ ಅನುಭವಕ್ಕೆ ಬಂದಂತೆ, ಕೂಲಿಗೆ ಹೋಗುವ ಕಾರ್ಮಿಕರು ವಾಪಸ್ಸು ಬರುವಾಗಲೋ, ಕಾಡಿಗೆ ಅಂತ ಹೋದವರನ್ನೋ, ಶೌಚಕ್ಕೆ ಅಂತ ಬಯಲಿಗೆ ಹೋದವರು ಆನೆ ದಾಳಿಗೆ ಸಿಕ್ಕಿ ಜನ ಸತ್ತಿದ್ದಾರೆ.. ಆದರೆ ಯಾವ ಪ್ರಾಣಿಗೆ ಸಿಕ್ಕಿ ಬದುಕಬಹುದೇನೋ ಆದರೆ ಆನೆ ತುಳಿತಕ್ಕೆ ಸಿಕ್ಕರೆ ಬದುಕುವುದು ಉಂಟಾ.

ಆನೆಗಳಿಗೆ ಸೇಂದಿ ಅಂದರೆ ಇಷ್ಠ ಅಂತ ಕೂಡ ನನಗೆ ಕೆಲವರು ಹೇಳಿದ್ದರು ಸಕಲೇಶಪುರದ, ಮತ್ತು ಕೊಡಗಿನ ಕಾಡುಗಳಲ್ಲಿ ಕಳ್ಳ ಬಡ್ಡಿ ತಯಾರಿಸುವ ಅಡ್ಡಾಗಳಿಗೆ ನುಗ್ಗಿ ಸಮಾ ಕಳ್ಳಬಟ್ಟಿ ಕುಡಿದು, ನಶೆ ಏರಿಸಿಕೊಂಡು ಆನೆಗಳು ರಾಜಾರೋಷವಾಗಿ ಹಳ್ಳಿಗಳಿಗೆ ನುಗ್ಗುವುದು ಉಂಟು.. ಕಳ್ಳಬಟ್ಟಿ ತಯಾರಿಸುವ ಕಳ್ಳ ಅಡ್ಡಾಗಳ ವಾಸನೆಯನ್ನ ಐವತ್ತೂ ಅರವತ್ತೋ ಕಿಲೋಮೀಟರ್ ದೂರದಿಂದಲೇ ಆಘ್ರಾಣಿಸುವ ಶಕ್ತಿ ಆನೆಗಳಿಗಳಿಗೆ ಇದೆಯಂತೆ, ಒಂದು ಸಾರಿ ಅರಕಲಗೂಡಿನ ಹಳ್ಳಿಯೊಂದಕ್ಕೆ ಕಳ್ಳಬಟ್ಟಿ ಕುಡಿದ ಆನೆಯೊಂದು ನುಗ್ಗಿ ದಾಂದಲೇ ಮಾಡಿದ್ದನ್ನ ಅರಕಲಗೂಡಿನ ನನ್ನ ಸ್ನೇಹಿತ ಜಯಕುಮಾರ್ ವರ್ಣಿಸಿದ್ದು ನನಗಿನ್ನೂ ನೆನಪಿದೆ.

ಸೀರಿಯಸ್ಸಾದ ವಿಷಯ ಏನೆಂದರೆ ಆನೆಗಳು ಇರಬೇಕಾದ ಅರಣ್ಯವನ್ನೆಲ್ಲಾ ಜನ ನಾಶ ಮಾಡಿದ್ದಾರೆ, ಇಲ್ಲಾ ಆನೆ ಇರಬೇಕಾದ ಜಾಗಕ್ಕೆ ಜನ ಹೋಗಿದ್ದಾರೆ ಈಗೀಗಂತೂ ಆನೆಗಳು ಇರಲಿಕ್ಕೆ ಅರಣ್ಯಗಳೇ ಇಲ್ಲದಂತೆ ಆಗಿಬಿಟ್ಟಿದೆ ಬಿಡಿ. ರೈತರು ತಮ್ಮ ಬೆಳೆ ಉಳಿಸಿಕೊಳ್ಳೋಕೆ ಅಂತ ವಿದ್ಯುತ್ ಬೇಲಿ ಹಾಕಿ ಹೈ ವೋಲ್ಟೇಜ್ ಕಂರೆಟು ಕೊಡೋದರಿಂದ ವರ್ಷಕ್ಕೆ ಏನಿಲ್ಲಾ ಅಂದರೂ ಇಪ್ಪತ್ತು ಆನೆಗಳು ಸಾಯ್ತಾ ಇವೆ, ಕೆಲವು ಪುಂಡರು ಆನೆಗಳಿಗೆ ಬಂದೂಕಿನಲ್ಲಿ ಸಣ್ಣ ಸಣ್ಣ ಗುಂ
ಡು ಗಳನ್ನ ಹಾಕಿ ಹೊಡೆಯುತ್ತಾಂತೆ ಗುಂಡು ತಗುಲಿದ ಆನೆಗಳು ಅತ್ತ ಸಾಯಲೂ ಆಗದೆ ಇತ್ತ ಬದುಗಲೂ ಆಗದೆ ವಿಪರೀತ ನೋವಿನಿಂದ ರೊಚ್ಚೆ ಹಿಡಿದು ಗಲಾಟೆ ಎಬ್ಬಿಸಿ ನಿದಾನಕ್ಕೆ ಸಾಯುತ್ತವಂತೆ. ಅರಣ್ಯ ಇಲಾಖೆ?ವರು ರೈತರಿಂದ ಒದೆ ಬೀಳುವ ಭಯದಿಂದ ಸರ್ಕಾರಕ್ಕೆ ನಿಜವಾದ ವರದಿ ಸಲ್ಲಿಸದೇ ತಪ್ಪು ವರದಿ ಮಾಡಿ, ಆಹಾರ ವ್ಯಾತ್ಯಾಸದಿಂದ ಆನೆ ಸತ್ತಿದೆ ಅಂತ ಬರೆಯುತ್ತಾರೆ. ಜನ ಆನೆ ಸತ್ತಾಗ ವಿಪರೀತ ಭಕ್ತಿಯಿಂದ, ಆನೆಯನ್ನ ಥೇಟು ಗಣೇಶನಂತೆ ಸಿಂಗರಿಸಿ, ಆನೆ ಹಣೆಗೆ ವಿಭೂತಿ ಬಳಿದು ದಪನ್ ಮಾಡುತ್ತಾರೆ.

ಆನೆ ಬಗ್ಗೆ ನೋಡಿ ಕೇಳಿ ತಿಳಿದಿರುವ ನಮಗೂ ಆನೆಗೂ ಒಮ್ಮೆ ಎನ್ಕೌಂಟರ್ ಆಗಿತ್ತು, ನಾನು, ಈಶ, ಗೋವಿಂದ ಒಮ್ಮೆ ಬೇಜಾರು ಕಳೆಯೂಕೆ ಅಂತ ಕೊಡಗಿಗೆ ಹೋಗಿದ್ದವರು ನಾಗರಹೋಳೆ ಕಾಡಿನಿಂದ ಹೆಗ್ಗಡದೇವನಕೋಟೆಗೆ ಹೋಗೋದು ಅಂತ ತೀರ್ಮಾನ ಮಾಡಿದೆವು ನಾವು ಕೊಡಗಿನ ಕಡೆಯಿಂದ ಕಾಡಿನ ಹಾದಿ ಹಿಡಿಯಲಿಕ್ಕೆ ಸಂಜೆ ಆಗಿಬಿಟ್ಚಿತ್ತು, ಅರಣ್ಯ ಇಲಾಖೆ ಗಾರ್ಡ್ ಒಬ್ಬ ಒಳಗೆ ಬಿಡಲ್ಲಾ ಅಂದರೂ ಬಿಡದ ನಾವು ಅವನ ಕೈಬಿಸಿ ಮಾಡಿ ಕಾಡಿನ ರಸ್ತೆಯಲ್ಲಿ ನಿಧಾನವಾಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದೆವು, ನಮ್ಮ ಪುಣ್ಯಕ್ಕೆ ಅಲ್ಲಲ್ಲಿ ಜಿಂಕೆಗಳು, ನವಿಲುಗಳು, ಕಾಡೆಮ್ಮೆಗಳು ಕಂಡವು. ಕಾಡೆಂಮ್ಮೆಗಳಂತೂ ತಿಂದು ಕೊಬ್ಬಿ ಭಯ ಹುಟ್ಚಿಸುವ ಆಕಾರದಲ್ಲಿದ್ದವು ನಾವೂ ಭಯ ಮಿಶ್ರತ ಕೂತೂಹಲದಲ್ಲಿ ಮಂದುವರೆದೆವು.. ಬಹುಶ ಕಾಡಿನ ಹಾದಿ ಅರ್ಧ ಸವೆದಿರಬೇಕು ತಟ್ಟನೆ ಸಿಕ್ಕ ಎರಡು ದಾರಿಗಳಲ್ಲಿ ಯಾವಕಡೆ ಹೋಗಬೇಕೋ ತಿಳಿಯದೆ ದಾರಿ ತಪ್ಪಿದೆವು.

ಹಾಗೆ ಮುಂದುವರೆಯುತ್ತಿದ್ದಾ ಹತ್ತಿಪ್ಪತ್ತು ಆನೆಗಳು ಅವುಗಳ ಮರಿಗಳು ಹಿಂಡಾಗಿ ಮೇಯುತ್ತಿದ್ದವು ಅವನ್ನು ಕಂಡ ನಾವು ನೋಡುತ್ತಾ ಮುಂದುವರೆಯುತ್ತಿದ್ದಾಗ ಗುಂಪಿನಲ್ಲಿದ್ದ ಬಾರೀ ಆನೆಯೊಂದು ಓ ಅಂತ ಘೀಳಿಟ್ಟು ನಮ್ನನ್ನ ದಿಟ್ಟಿಸಿತು ನಮಗೆ ಭಯ ಆಯಿತಾದರೂ ಕಾರಿನಲ್ಲಿ ಕುಳಿತಿದ್ದರಿಂದ ದೈರ್ಯದಿಂದ ಇದ್ದೆವು. ಹಾಗೆ ಸ್ಪಲ್ಪ ಮುಂದಕ್ಕೆ ಹೋದ ನಮಗೆ ಎದುರಾದ ಅರಣ್ಯ ಇಲಾಖೆ ಜೀಪಿನ ಡ್ರೈವರ್ ಹತ್ತಿರ ದಾರಿ ವಿಚಾರಿಸಿಕೊಂಡು ಬಂದ ರಸ್ತೆಯಲ್ಲೇ ವಾಪ್ಪಸ್ಸಾಗಬೇಕಾಯಿತು.
ಮತ್ತೆ ಆನೆಗಳ ಹಿಂಡು ಇದ್ದ ಜಾಗಕ್ಕೆ ಬಂದಿದ್ದೆ ತಡ ಮಾರಾಯರೇ, ಹಿಂದೆ ನಮ್ಮನ್ನು ನೋಡಿ ಘೀಳಿಟ್ಟಿದ್ದ ಆನೆ ಮತ್ತೆ ಘೀಳಿಡುತ್ತಾ ನಮ್ಮತ್ತ ನುಗ್ಗಿತು ನನಗೆ ಏನು ಮಾಡಬೇಕೂ ತಿಳಿಯದೇ ಕಾರಿನ ಅಷ್ಠೂ ಆಕ್ಸಿಲೇಟರ್ ಒತ್ತಿ ವಿಪರೀತ ವೇಗದಲ್ಲಿ ಮುನ್ನುಗ್ಗಿದೆ, ಮತ್ತೆ ಹಿಂದಕ್ಕೆ ತಿರುಗಿದರೇ ಆನೆ ನಮ್ಮನ್ನೇ ಅಟ್ಟಾಡಿಸಿಕೊಂಡು ಬರ್ತಾ ಇತ್ತು, ನನ್ನ ಮತ್ತು ನನ್ನ ಗೆಳಯರಿಗೆ ಮೀಟರ್ ಅಪ್ ಅಂತಾರಲ್ಲಾ ಅದಾಗಿತ್ತು...!!
ನಾಸ್ತಿಕರಾಗಿದ್ದ ನಮಗೆ ನಾವು ನಂಬದ ದೇವರುಗಳೆಲ್ಲಾ ನೆನಪಾದರು, ಗಾಭರಿಯಾಗಿದ್ದ ನಾವು ನಾಗಾಲೋಟದಲ್ಲಿ ಹೆಗ್ಗಡದೇವನ ಕೋಟೆ ಕಡೆಗೆ ಪರಾರಿಯಾದೆವು, ಈಗ ನೆನೆಸಿಕೊಂಡರೂ ಮೈ ಜುಂ ಅನ್ನಿಸುತ್ತೆ, ಅವತ್ತೇನಾದರೂ ಆತುರದಲ್ಲಿ ನನ್ನ ಕಾರು ಆಪ್ ಆಗಿತ್ತೋ ಏನಾಗುತ್ತಿತ್ತೋ ಗೊತ್ತಿಲ್ಲಾ.. ಆ ಆನೆಗೆ ಯಾವ ರೀತಿ ರೊಚ್ಚಿಗೆದ್ದಿತ್ತೊ ಗೊತ್ತಿಲ್ಲ, ನಾವೇನಾದರೂ ಸಿಕ್ಕಿಕೊಂಡಿದ್ದರೆ ಕತೆ 'ಕಲಾಸ್' ಆಗುತ್ತಿತ್ತು ಅಂತ ಊಹಿಸಬೇಕಷ್ಟೆೇ.