Showing posts with label kannada blogs. Show all posts
Showing posts with label kannada blogs. Show all posts

Thursday, July 16, 2009

ಧಿಮಾಕು... ಒಂದು ಟಿಪ್ಪಣಿ.

http://livingincourageonline.com/wp-content/uploads/2008/07/full.jpgಕೆಲವರು ಹಾಗೆ ಇರುತ್ತಾರೆ... ಜೀವನದ ಅಪ್ಸ್ ಅಂಡ್ ಡೌನ್ಸ್ ಗಳಿಗೆ ಕೇರೇ ಮಾಡುವುದಿಲ್ಲ. ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಗರ್ವ ಅನ್ನೊದು ಇರುವುದಿಲ್ಲ. "ನಾನು ನಿಮ್ಮಂತೆ ಮನುಷ್ಯ ಕಣಯ್ಯಾ" ಅನ್ನೊ ತರದವರು. ಸರಳವಾಗಿ ಎಲ್ಲರ ಜೊತೆಗೆ ಬೆರೆಯುವವರು, ನಮ್ಮ ನಿಮ್ಮಂತವರ ಕಷ್ಟ ಏನಂತ ತಿಳಿದವರು. ನನ್ನ ಅರಿವಿಗೆ ಬಂದಂತೆ ಯಾರಾದರೂ ನಿಜವಾದ ಅರ್ಥದಲ್ಲಿ ಬುದ್ದಿವಂತರೂ , ಜ್ಞಾನಿಗಳು, ಪಂಡಿತೋತ್ತಮರೂ ಆಗಿದ್ದರೆ ಅವರೆಲ್ಲರೂ ಸಿಕ್ಕಾಪಟ್ಟೆ ಸಿಂಪಲ್ಲಾಗಿರುತ್ತಾರೆ. ಸರಳವಾಗಿ ಮಾತಾಡ್ತಾರೆ. ಎಲ್ಲರೊಂದಿಗೆ ಬೆರೆಯಲು ಉತ್ಸುಕರಾಗಿರುತ್ತಾರೆ. ನಮ್ಮ ಅಬ್ದುಲ್ ಕಲಾಂ ಇದ್ದಾರಲ್ಲಾ ಹಾಗೆ..! ಮನುಷ್ಯನ ತಿಳಿವಳಿಕೆ ಹೆಚ್ಚು ಪಕ್ವವಾಗುತ್ತಿದ್ದಂತೆ ವಿನಯ ಹೆಚ್ಚಾಗುತ್ತದೆ ಅನ್ನೊಕೆ ಅವರೇ ಉದಾಹರಣೆ.
ಅದೇ ಅಲ್ಪ ಜ್ಞಾನಿಗಳು ಇಡೀ ಪ್ರಪಂಚಕ್ಕೆ ತಿಳಿಯದಿದ್ದದ್ದು ನನಗೆ ತಿಳಿದಿದೆ ಅನ್ನೋ ಗರ್ವದಿಂದ ಬೀಗ್ತಾ ಇರ್ತಾರೆ. ಯಾರಿಗೂ ಅರ್ಥವಾಗದ ಭಾಷೆಲಿ ಮಾತಾಡೋದು, ಜನರಿಂದ ದೂರ ಇರೋದು, ಮುಖ ಗಂಟಿಕ್ಕಿಕೊಂಡು ಮಾತೋಡೋದು - ಇಂಥವೇ ಹಲವು ಡಿಸ್ಆರ್ಡರ್ ಗಳು ಅಲ್ಪಮತಿಗಳಲ್ಲಿ ಕಾಣುತ್ತವೆ.
ನಮ್ಮ ರಾಜ್ಯದ ಕೆಲವು ರಾಜಕಾರಣಿಗಳು ಅಧಿಕಾರ ಇಲ್ಲದೇ ಇರೋವಾಗ ಅಣ್ಣಾ... ಅಪ್ಪಾ.. ಅಂತ ಮಾತಾಡಿಸ್ತಾ ಇರ್ತಾರೆ, ಬೆನ್ನುಬೀಳ್ತಾರೆ. ಅದೇ ಅಧಿಕಾರ ಬಂದಾಗ ಪರಿಚಯ ಇದ್ದರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಅಧಿಕಾರದ ಅಮಲು ನೆತ್ತಿಗೇರಿರುತ್ತದೆ. ಅಧಿಕಾರ ಇದ್ದಾಗ ಸಿಗೋ ತಾತ್ಕಾಲಿಕ ಗೌರವ, ಸಂಪಾದಿಸಬಹುದಾದ ಹಣ ಅವರ ತಲೆಯನ್ನ ಗಿರಗಿಟ್ಲೆ ಆಡಿಸ್ತಾ ಇರತ್ತೆ. ಎಲ್ಲಾ ಪಕ್ಷಗಳಲ್ಲೂ ಇಂಥವರು ಇದ್ದಾರೆ ಬಿಡಿ.

ಮೇಲಿನ ಟಿಪ್ಪಣಿಯೊಂದಿಗೆ ನಾನು ಹೇಳಬೇಕಾದ್ದನ್ನು ಈಗ ಹೇಳುತ್ತೆನೆ- ಈಗಿನ ಕೇಂದ್ರ ಸರ್ಕಾರದಲ್ಲಿ ತೀರಾ ಟಿಪಿಕಲ್ ಸ್ವಭಾವದ ಮಂತ್ರಿಗಳಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ಖುಷಿಯಾಗುತ್ತದೆ. ಇಂಥವರ ಕೈಯಲ್ಲಿ ದೇಶ ಇದ್ದರೆ, ದೇಶದ ಜನ ನಿರಾಳವಾಗಿರಬಹುದು ನೋಡಪ್ಪಾ ಅಂತ ಅನ್ನಿಸದೇ ಇರದು.
ಅಂಥವರಲ್ಲಿ ಮೊದಲಿಗ ಡಾ.ಮನಮೋಹನ್ ಸಿಂಗ್. ಹಿಂದೆ ಪ್ಲಾನಿಂಗ್ ಕಮಿಷನ್ನಿನ ಉಪಾಧ್ಯಕ್ಷರಾಗಿದ್ದಾಗ ದೇಶ ಸಂಕಷ್ಟದಲ್ಲಿದೆ ಅನ್ನೊ ಕಾರಣಕ್ಕೆ ಒಂದು ರೂಪಾಯಿ ಗೌರವಧನ ಪಡೆಯುತ್ತಿದ್ದರಂತೆ.
ನಿಜಕ್ಕೂ ವಿನಯವಂತರಾದ ಮನಮೋಹನ್ ಗಂಟಲು ಬಿಚ್ಚಿ ಮಾತಾಡಿದ್ದನ್ನು ಯಾರೂ ನೋಡಿರಲಾರರು. ಸಿಂಗ್ ರ ಇಂಟಗ್ರಿಟಿ, ದೂರದೃಷ್ಟಿಯನ್ನ ಪ್ರಶ್ನೆ ಮಾಡೋಕೆ ಸಾದ್ಯವಾಗೋಲ್ಲ. ಮನಮೋಹನ್ ಸ್ವಲ್ಪೇ ಸ್ವಲ್ಪ ಕೋಪದಿಂದ ಮಾತಾಡಿದ್ದನ್ನ ಜನ ನೋಡಿದ್ದು ಕಳೆದ ಚುನಾವಣೆಗಳ ಸಮಯದಲ್ಲಿ. ಅಡ್ವಾಣಿ ತನ್ನನ್ನ ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ ಅಂತ ದೂಷಿಸುತ್ತಾ ಇದ್ದರು. ಹೋದ ಕಡೆಯಲ್ಲಾ ಅದೇ ಭಾಷಣ ಮಾಡುತ್ತಿದ್ದರು. ಆಗ ಮನಮೋಹನ್ ಹೇಳಿದ್ದು, "ನಾನು ಅಡ್ವಾಣಿ ಅವರ ರಾಜಕೀಯ ಜೀವನ ಗಮನಿಸಿದ್ದೇನೆ, ರಾಮಮಂದಿರ ಕೆಡವಿದ್ದು, ದೇಶವ್ಯಾಪಿ ರಥಯಾತ್ರೆ ಮಾಡಿದ್ದೇ ಅವರ ಸಾಧನೆ; ಬೇರೇನಾದರು ಇದೆಯಾ..? ಅವರೇ ಹೇಳಲಿ " ಅಂದಿದ್ದರು. ಬಹುಶ ಮನಮೋಹನ್ ಮಾಡಿರಬಹುದಾದ ಉಗ್ರಾತಿಉಗ್ರ ರಾಜಕೀಯ ಭಾಷಣ ಇದೇ ಇರಬಹುದೇನೋ..! ಮನಮೊಹನ್ ಪ್ರಧಾನಮಂತ್ರಿಯಾದರೂ ತನ್ನ ನೆಂಟರಿಷ್ಟರನ್ನೆಲ್ಲಾ ಮನೆಯಲ್ಲಿ ತುಂಬಿಕೊಂಡಿಲ್ಲ. ಈಗಲೂ ಅವಕಾಶ ಸಿಕ್ಕ ಕಡೆಯೆಲ್ಲಾ ತಮ್ಮ ಹೆಂಡತಿ ಕಟ್ಟಿಕೊಟ್ಟ ಬುತ್ತಿಯನ್ನ ತೆಗೆದುಕೊಂಡು ಹೋಗ್ತಾರೆ ಪ್ರಧಾನಿ...

ಇನ್ನೊಬ್ಬ ಟಿಪಿಕಲ್ ಆಸಾಮಿ ರಕ್ಷಣಾ ಸಚಿವ ಎ.ಕೆ. ಆಂಟನಿ. ಇವರ ಬಗ್ಗೆ ಇವರ ರಾಜಕೀಯ ಜೀವಮಾನದ ಉದ್ದಕ್ಕೂ ಯಾರೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಮಾಡೋದು ಕಷ್ಟ ಅಗಬಹುದೇನೋ. ಯಾಕೆಂದರೆ, ಆಂಟನಿ ರಾಜೀನಾಮೆ ಪತ್ರವನ್ನ ತನ್ನ ಕಿಸೆಯಲ್ಲೇ ಇಟ್ಟುಕೊಂಡು ತಿರುಗುತ್ತಾರಂತೆ ಅನ್ನೊ ಲಘುವಾದ ಜೋಕೊಂದು ಜಾಲ್ತಿಯಲ್ಲಿದೆ. ಇದು ನಿಜವೇ ಇರಬೇಕೇನೋ. ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೇರಳದಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳ ಖರ್ಚಿಗೆ ಅಂತ ಅಲ್ಲಿನ ನಾಯಕ ಆಂಟನಿಯವರಿಗೆ ತಮ್ಮ ನಂಬಿಂಕಸ್ಥ ಮಂತ್ರಿಯೊಬ್ಬರ ಕೈಯಲ್ಲಿ ಸಾಕಷ್ಠು ಹಣ ಕಳಿಸಿದ್ದರಂತೆ. ಆ ಹಣವನ್ನು ಸ್ವೀಕರಿಸಲು ಆಂಟನಿ ನಿರಾಕರಿಸಿ, ನಂಗೆ ಹಣ ಬೇಡ, ನೀವೇ ಕ್ಷೇತ್ರದಲ್ಲೆಲ್ಲಾ ತಿರುಗಿ ಹಂಚಿ ಬಿಡಿ ಅಂತ ಹೇಳಿ ಕಳಿಸಿದ್ದರಂತೆ. ಇದನ್ನ ನಂಗೆ ಕಾಂಗ್ರೆಸ್ ಲೀಡರ್ ಒಬ್ಬರು ಹೇಳಿದ್ದರು.
ಕೇರಳದ ಪತ್ರಕರ್ತ ಸ್ನೇಹಿತನೊಬ್ಬ ಎ.ಕೆ. ಆಂಟನಿ ಎರಡನೇ ಬಾರಿ ರಕ್ಷಣಾ ಸಚಿವನಾದಾಗ ಹೇಳಿದ್ದು ನೆನಪಿದೆ. 'ಶ್ರೀನಿವಾಸ್, ಈ ಮನುಷ್ಯ ಅಧಿಕಾರ ಬೇಡ ಅಂತ ದೂರ ಹೋದಾಗಲೆಲ್ಲ ಈತನಿಗೆ ಅಧಿಕಾರ ಹುಡುಕಿಕೊಂಡು ಬರುತ್ತೆ ನೋಡು, ಅಂದಿದ್ದ. ಈತನ ಸರಳತೆಯೇ ಅವರ ಶಕ್ತಿ ಅಂದಿದ್ದ'.

ಈಗ ಕೇಂದ್ರದಲ್ಲಿ ರೈಲ್ವೇ ಮಂತ್ರಿ ಆಗಿರೋ ಮಮತಾ ಬ್ಯಾನರ್ಜಿ ಕೂಡಾ ಟಿಪಿಕಲ್ ಬೆಂಗಾಲಿ. ಆಕೆ ಅತಿದೊಡ್ಡ ರೈಲ್ವೇ ಇಲಾಖೆ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮೇಲೂ ಆಕೆ ಹಾಕಿಕೊಳ್ಳೊದು ಹವಾಯಿ ಚಪ್ಪಲಿ.
ಮೊನ್ನೆ ರೈಲು ಬಜೆಟ್ ಮಂಡಿಸಲು ಆಕೆ ಬಂದಿದ್ದು ತನ್ನ ಹಳೇ ಮಾರುತಿ ಜೆನ್ ಕಾರಿನಲ್ಲಿ. ಸೆಕ್ಯುರಿಟಿ ಕೂಡಾ ಬಳಸೋಲ್ಲ. ಕೊಲ್ಕಾತ್ತಾದಲ್ಲಿ ಆಕೆಯದು ಈಗಲೂ ಸಿಂಗಲ್ ಬೆಡ್ ರೂಂ ಹೌಸ್. ಅದರಲ್ಲೇ ತಾನು, ತನ್ನ ತಾಯಿ, ಸಹೋದರ ಎಲ್ಲಾರು ವಾಸಮಾಡುತ್ತಾರಂತೆ.

ತಮಿಳುನಾಡಿನ ಮತ್ತೊಬ್ಬ ಟಿಪಿಕಲ್ ತಮಿಳಣ್ಣನ್ ಚಿದಂಬರಂ. ಆತ ಚುನಾವಣೆಯಲ್ಲಿ ಗೆದ್ದ ರೀತಿಯ ಬಗ್ಗೆ ಈಗಲೂ ಅನುಮಾನಗಳಿವೆ. ಆದರೂ, ಮಂತ್ರಿಯಾಗಿ ಆತನ ಕಾರ್ಯವೈಖರಿ ಮೆಚ್ಚುವಂತದ್ದು. ದೇಶದ ಗೃಹ ಸಚಿವರಾಗಿ ಕೈಗೊಂದು ಕಾಲಿಗೊಂದ್ದು ಸೇವಕರನ್ನ ಇಟ್ಟುಕೊಳ್ಳಬಹುದು. ಆದರೆ ಚಿದಂಬರಂ ಮಾತ್ರ ತನ್ನೆಲ್ಲಾ ಫೈಲುಗಳನ್ನ ತಾನೇ ಕಂಕುಳಲ್ಲಿ ಹಿಡಕೊಂಡು ತಿರುಗೊದನ್ನ ನೀವು ನೋಡಿರಬಹುದು. ಅಷ್ಟೇ ಅಲ್ಲಾ ಚಿದಂಬರಂ ಓಡಾಡೋದು ಈಗಲೂ ಅವರ ಫೆೇವರಿಟ್ ಹಳೇ ಎಸ್ಟೀಮ್ ಕಾರಿನಲ್ಲಿ..! ದೆಹಲಿಯಲ್ಲಿ ಇದ್ದಾಗ ಯಾವುದೇ ಸೆಕ್ಯುರಿಟಿಯವರನ್ನ ಹಿಂದೆ ಮುಂದೆ ಇಟ್ಟುಕೊಳ್ಳೊದಿಲ್ಲ. ಟ್ರಾಪಿಕ್ ಸಿಗ್ನಲ್ಲುಗಳಲ್ಲಿ ಕಾರನ್ನು ನಿಲ್ಲಿಸುತ್ತಾ ಅಡ್ಡಾಡುವಸ್ಟು ಸರಳತೆ ಇದೆ. ಸೌತ್ ಬ್ಲಾಕ್ ನ ತಮ್ಮ ಕಚೇರಿಯ ನೌಕರೆಲ್ಲಾ ಮನೆಗೆ ಹೋದರೂ ಆಫೀಸಿನಲ್ಲೇ ಕುಳಿತು ಕೆಲಸ ಮಾಡುತ್ತಿರುತ್ತಾನೆ ಗೃಹಮಂತ್ರಿ.

ಹೀಗೆ, ಟಿಪಿಕಲ್ ತರದ ತುಂಬಾ ಮಂದಿ ಇದ್ದಾರೆ. ಎಲ್ಲಾರ ಬಗ್ಗೆ ಇಲ್ಲಿ ಬರೆಯೋಕೆ ಆಗಲ್ಲ. ಆದರೆ, ಇಂಥದೇ ಚುರುಕಿನ ಕನ್ನಡಿಗ ಒಬ್ಬ ಇದ್ದಾರೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಂತ್ರಿ ಜೈರಾಮ್ ರಮೇಶ್. ನೋಡಲಿಕ್ಕೆ ಒಳ್ಳೆ ಬ್ರಿಟೀಷರ ವಂಶದವನಂತೆ ಕಂಡರೂ ರಮೇಶ್ ಮೂಲತ ಚಿಕ್ಕಮಗಳೂರು ಕಡೆಯವರು. ವರ್ಕೋಹಾಲಿಕ್ ಅಂತಾರಲ್ಲ ಅಂಥವ. ತನ್ನ ಇಲಾಖೆಗೆ ಸಂಭಂದಿಸಿದ ಕೆಲಸ ಎಲ್ಲೇ ಇರಲಿ, ತಾನೇ ಖುದ್ದು ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಕೈಲೊಂದು ಚರ್ಮದ ಬ್ಯಾಗು ಹಿಡಕೊಂಡು ಕೆಲಸ ಆಗಬೇಕಾದ ಅಧಿಕಾರಿ ಹತ್ರ ತಾನೆ ತಿರುಗಿ ಸಹಿ ಹಾಕಿಸಿಕೊಂಡು ಬರುತ್ತಾರೆ. ಅರ್ಧ ವಯಸ್ಸು ಆಗಿದ್ದರು ಇಪ್ಪತ್ತರ ಯುವಕನಂತೆ ಚಂಗನೆ ಜಿಗಿಯುತ್ತಾ ಜೋಕ್ ಮಾಡುತ್ತಾ ಇರ್ತಾರೆ. ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಅನ್ನೋ ಬಿಗುಮಾನ, ಹಮ್ಮು ಆತನಿಗೆ ಇಲ್ಲ. 'ಈಗೋ' ಅಂತಾರಲ್ಲ ಅದು ನನಗಂತೂ ಕಂಡಿಲ್ಲ. ನಿಜಕ್ಕೂ ಲವಬಲ್ ಅಂತಾರಲ್ಲಾ ಅಂಥವನು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಆತ ಉತ್ತರಿಸೋ ವಿಧಾನ ನೋಡಿದರಂತೂ ಎಂಥಾ ತಲೆ ಈತನದು ಅನ್ನಿಸದೇ ಇರಲಾರದು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ವಾರ್ ರೂಮಿನ ಅಧ್ಯಕ್ಷ ಆಗಿದ್ದ ಜೈರಾಮ್ ಕಾಂಗ್ರೆಸ್ ನ ಪ್ರಮುಖ ಸ್ಟ್ರಾಟಜಿಸ್ಚ್ ಕೂಡ ಹೌದು.

ಸಂಪುಟದಲ್ಲಿ ಇರೋರೆಲ್ಲರೂ ಹಾಗೆ ಇದ್ದಾರೆ ಅನ್ನೊದು ನನ್ನ ವಾದ ಅಲ್ಲ. ಕಾಂಗ್ರೆಸ್ ನಲ್ಲಿ ಪ್ರಖಾಂಡ ಖದೀಮರೂ ಇದ್ದಾರೆ ಬಿಡಿ. ಆದರೆ ನಮ್ಮಲ್ಲಿನ ಕೆಲ ಮಂತ್ರಿಗಳು, ಎಂಎಲ್ಎ ಗಳು ಜನ ಅಧಿಕಾರ ಕೊಟ್ಟಾಗ ಐಶಾರಾಮದಿಂದ ಅಧಿಕಾರದ ಮದದಿಂದ ನಡಕೋತಾರೆ. ಅದೇ ರಾಜಕೀಯದಲ್ಲಿ ಒಳ್ಳೇ ಮಂದಿಯೂ ಇದ್ದಾರೆ. ಹೀಗಾಗಿ ಇಂಡಿಯಾದ ಡೆಮಾಕ್ರಸಿ ಬ್ಯಾಲೆನ್ಸ್ ಆಗ್ತಾ ಇರತ್ತೆ.
ಕೆಲವರು ಅಧಿಕಾರವನ್ನ ಹಣದಿಂದ, ದರ್ಪದಿಂದ ಪಡೆಯುತ್ತಾರೆ. ಕೆಲವರು ರಾಜಕೀಯ ಸಂಘರ್ಷದಿಂದ ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಗಳಿಸುತ್ತಾರೆ ಅಲ್ಲವಾ...?



Sunday, July 12, 2009

ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ....


ರಾಜಕೀಯ ಅನ್ನೋದು ನಿಜಕ್ಕೂ ರೋಚಕ ಸಂಗತಿಗಳ ಗಣಿ ಇದ್ದ ಹಾಗೆ, ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಅಂತ ರಾಜಕೀಯದ ಬಗ್ಗೆ ಜೋಕ್ ಮಾಡೋ ಮಂದಿಗೂ ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಇರತ್ತೆ, ಚಾನ್ಸ್ ಸಿಕ್ಕರೆ ನೋಡೇ ಬಿಡೋಣ ಅಂತ ಒಳಗೋಳಗೆ ಅಂದುಕೊಳ್ತಾ ಇರ್ತಾರೆ.
ಸಲೂನಿನಲ್ಲಿ ಕೆಲಸ ಮಾಡುವ ಕ್ಷೌರಿಕ ಕೂಡ ರಾಜಕೀಯ ವ್ಯಕ್ತಿಯೊಬ್ಬನಿಗೆ ಕ್ಷೌರ ಮಾಡುತ್ತಾ ತನ್ನ ಕುಳಿತ ಮನುಷ್ಯ ಎಂತಾ ದಡ್ಡನನ್ಮಗ ಇವನೂ ರಾಜಕಾರಣಿ ಆಗಿದ್ದಾನಲ್ಲಾ ಅಂತ ಮನಸೊಳಗೆ ಅಂದುಕೊಳ್ಳಲಿಕ್ಕೆ ಸಾಕು. ನನಗೂ ಮೂರ್ಖ ರಾಜಕಾರಣಿಗಳ ಜೊತೆ ಬೆರೆಯೋ ಅವಕಾಶ ಸಿಕ್ಕಾಗಲೆಲ್ಲ ಹಾಗೆ ಅನಿಸಿದೆ, ಯಾಕಂದರೆ ಇಂಡಿಯೂದ ಡೆಮಾಕ್ರಸಿಯಲ್ಲಿ ಎಂತೆಂತವರೋ ಪಾರ್ಲಿಮೆಂಟಿಗೆ ಬಂದು ಹೋಗಿದ್ದಾರೆ.

ರಾಜಕೀಯಕೀಯಕ್ಕೆ ಬರೋಕೆ ಇಂತದೇ ಕ್ವಾಲಿಪಿಕೇಶನ್ನು ಅಂತ ಇಲ್ಲವಲ್ಲಾ ಯಾರ್ಯಾರೋ ಇಲ್ಲಿ ಬಂದು ಹೋಗಿದ್ದಾರೆ. ಮೊನ್ನೆ ಕನ್ನಡಿಗ, ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಬರೆದಿರುವ 'what ails Indian parliament' ಅನ್ನೋ ಪುಸ್ತಕ ಓದ್ತಾ ಇದ್ದೆ, ಅದರಲ್ಲಿ 11 ನೇ ಲೋಕಸಬೆಯಲ್ಲಿ ಇದ್ದ ಕೆಲವು ಪೆಕ್ಯುಲಿಯರ್ ಎಂಪಿಗಳ ಬಗ್ಗೆ ಬರೆದಿದ್ದರು, ಅದರಲ್ಲಿ ಉತ್ತರಪ್ರದೇಶದ ಎಂಪಿ ಒಬ್ಬ ತನ್ನ ಒಲಿಸಿಕೊಳ್ಳೋಕ್ಕೆ ಹಿಡಿದಿದ್ದ ದಾರಿಯನ್ನ ವಿವರಿಸಿದ್ದರು, ಆ ಎಂಪಿಯ ಹೆಸರು ನನಗೆ ಮರೆತುಹೋಗಿದೆ, ಆ ಮಹಾಶಯನ ಪ್ರಮುಖ ಕೆಲಸ ಏನಪ್ಪಾ ಅಂದರೆ ತನ್ನ ಕ್ಷೇತ್ರದಲ್ಲಿ ಸತ್ತವರ ಬೂದಿಯನ್ನ ಪವಿತ್ರ ಗಂಗಾ ನದಿಯಲ್ಲಿ ಬಿಟ್ಟು ಬರೋದು. ಆತ ಈ ಕೆಲಸವನ್ನ ಎಷ್ಟು ಸಿರಿಯಸ್ಸಾಗಿ ಮಾಡುತ್ತಿದ್ದ ಅಂದರೆ ನಾನು ಡೆಲ್ಲಿಯಿಂದ ವಾಪಸ್ಸು ಬಂದಿದ್ದೆನೇ ಮುಂದಿನ ವಾರ ಕಾಶಿಗೆ ಹೋಗುತ್ತಿದ್ದೇನೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸತ್ತವರ ಮನೆಯವರು ಪಿಂಡದ ಮಡಿಕೆಯನ್ನ ಇಂತಾ ದಿನದ ಒಳಗೆ ನನಗೆ ತಲುಪಿಸಿ ಅಂತ ನ್ಯೂಸ್ ಪೇಪರಿನಲ್ಲಿ ಜಾಹಿರಾತು ಹೊರಡಿಸುತ್ತಿದ್ದನಂತೆ, ವಾಪಸ್ಸು ಬಂದಾಗ ಮತ್ತೆ ಜಾಹಿರಾತು ನೀಡಿ ಕಾಶಿಯಿಂದ ವಾಪ್ಪಸ್ಸು ಬಂದಿದ್ದೇನೆ ಗಂಗಾಜಲವನ್ನ ವಾಪಸ್ಸು ಒಯ್ಯಿರಿ ಅಂತ ಮಾಹಿತಿ ನೀಡುತ್ತಿದ್ದನಂತೆ.... ಆತನ ಈ ಪವಿತ್ರ ಕಾರ್ಯವನ್ನ ಮೆಚ್ಚಿ ಜನ ಅವನನ್ನ ಎರಡೆರಡು ಬಾರಿ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದರಂತೆ...

ಈಗ ನೆನಪಾಯಿತು ನೋಡಿ ಕಳೆದ ವರ್ಷ ಮೂಲೂರಿನ ಶಾಸಕ ಹಾಗು ಹಾಗಿನ ಮುಜರಾಯಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿಗೆಂದು ಗಂಗಾಜಲವನ್ನ ತರಿಸಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ನೀಡಿ ರಾಜ್ಯದ ಜನತೆಯ ಕೃಪೆಗೆ ಪಾತ್ರರಾಗಿದ್ದರಲ್ಲಾ. ಇದೆ ಶೆಟ್ಟಿ ಚುನಾವಣೆಗಳಲ್ಲಿ ಗೆಲ್ಲೂದು ಹೇಗಪ್ಪಾ ಅಂದರೆ ಕ್ಷೇತ್ರದ ಹಳ್ಳಿಯವರನ್ನ ತಂಡೋಪತಂಡವಾಗಿ ಪವಿತ್ರ ಕ್ಷೇತ್ರಗಳಿಗೆ ಪ್ರವಾಸಕ್ಕೆ ಸ್ವಂತ ಖರ್ಚಿನಲ್ಲಿ ಕಳೆಸುತ್ತಾರೆ. ಮತದಾರರಿಗೆ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿಸಿದ ಪುಣ್ಯಾತ್ಮನಿಗೆ ಪುಟಗೋಸಿ ಒಂದು ಓಟು ಕೊಡೋದು ಯಾವ ಲೆಕ್ಕದ ಮಾತು ಅಲ್ಲವಾ...
ಮನೆಗೆ ಬಂದವರಿಗೆಲ್ಲಾ ತಿರುಪತಿ ಲಾಡು ತಿನ್ನಿಸೋದೇ ಅಲ್ಲ ಆತನನ್ನ ಭೇಟಿ ಮಾಡೋಕೆ ಹೋದ ಪತ್ರಕರ್ತರಿಗೂ ತಿರುಪತಿ ಲಾಡು ತಿನ್ನಿಸುವುದನ್ನ ನಾನೇ ನೋಡಿದ್ದೇನೆ.

ಮದ್ದೂರು ಕ್ಷೇತ್ರದಲ್ಲಿ ಶಾಸಕರಾಗಿ ಕಳೆದು ವರ್ಷ ತೀರಿಕೊಂಡರಲ್ಲಾ ಸಿದ್ದರಾಜು, ಅವರ ಚುನಾವಣಾ ಟ್ರೇಡ್ ಸೀಕ್ರೇಟ್ ಏನಪ್ಪಾ ಅಂದರೆ ಅವರ ಕ್ಷೇತ್ರದಲ್ಲಿ ಯಾರಾದರೂ ತೀರಿಕೊಂಡರೆ ಸಾಕು, ದಿಡೀರ್ ಅಂತ ಹೋಗಿ ಕಣ್ಣೀರಾಕಿಬಿಡೋದು ಜೊತೆಗೆ ಸತ್ತವನನ್ನ ಧಪನ್ ಮಾಡುವರೆಗೆ ಜೊತೆಗಿದ್ದು ಶವಯಾತ್ರೆಯಲ್ಲಿ ಹೆಗಲು ಕೊಟ್ಟು ಬಿಡೋದು. ಸತ್ತಮನೆಯ ನೋವಿಗೆ ಮಿಡಿವ ಶಾಸಕನಿಗಿಂತಾ ಜನಪ್ರತಿನಿದಿ ಬೇಕಾ ನೀವೆ ಹೇಳಿ.

ಅದೇ ಮೊನ್ನೆ ತಾನೆ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾದರಲ್ಲಾ ಸೋಮಣ್ಣ ಅವರು ಮಂತ್ರಿಯಾದ ತಕ್ಷಣ 20,000 ಸಾವಿರ ಜನಕ್ಕೆ ಬಾಡೂಟ ಹಾಕಿಸಿದರಂತೆ ಯಾಕ್ರಪ್ಪಾ ಅಂತ ಸೋಮಣ್ಣನ ಅನುಯಾಯಿಯೊಬ್ಬನನ್ನ ವಿಚಾರಿಸಿದೆ, ಅದಕ್ಕೆ ಅವ ಹೇಳಿದ್ದೇನು ಗೊತ್ತೇ ನೋಡಿ ಸಾರ್ ಗೋವಿಂದರಾಜನಗರದಲ್ಲಿ ಇರೋದೆ ಕುರುಬ್ರೂ, ವಕ್ಕಲಿಗ್ರೂ ಅವರಿಗೆ ಬಾಡೂಟ ಹಾಕಿಸಿದ್ರೆ ಖುಷ್ ಆಗ್ತಾರೆ ಓಟೂ ಕೊಡ್ತಾರೆ, ನಂ ಸೋಮಣ್ಣನಿಗೆ ಜನನಾ ಹೆಂಗೆ ಇಟ್ಕಬೇಕು ಅಂತ ಗೊತ್ತೂ ಸಾರ್ ಮತ್ತೆ ಗೆಲ್ಲೇ ಗೆಲ್ತಿವಿ ಸಾರ್ ಅಂದ, ನಾನು ಬೆರಗಾದೆ...
ರಾಜಕಾರಣಿಗಳ ಗಿಮ್ಮಿಕ್ಕುಗಳೇ ಇಂತವು ಯಾರು ಮದುಗೆ ಕರೆದರೂ ಹೋಗೋದು, ನಾಮಕರಣ, ಹುಟ್ಟುಹಬ್ಬ, ತಿಥಿ, ಸಾವು, ಕಡೆಗೆ ಸೀಮಂತ, ಒಸಕೆ ಗಳಿಗೆಲ್ಲಾ ಹೋದರೆ ಜನ ಓಟ್ ಹಾಕ್ತಾರಂತೆ ಇಲ್ಲಾ ಅಂದರೆ ಜನ ಕೋಪಿಸಿಕೊಳ್ತಾರಂತೆ.. ಸದ್ಯ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ ದೊಡ್ಡ ಇಲಾಖೆಯ ಮಂತ್ರಿ ಯೊಬ್ಬರು ಬೇಕಾದರೆ ಪಾರ್ಲಿಮೆಂಟ್ ಸೆಷನ್ ಬೇಕಾದರೂ ತಪ್ಪಿಸಿಕೊಂಡಾರು, ಯಾರದಾದರೂ ಮದುವೆಗೆ ಕರೆದಿದ್ದರೆ ಬಿಲ್ ಕುಲ್ ತಪ್ಪಿಸಿಕೊಳ್ಳುವುದಿಲ್ಲ ಅಸ್ಟರ ಮಟ್ಟಿಗೆ ಅವರು ಕ್ಷೇತ್ರದ ಜನತೆಯೊಂದಿಗೆ ಬೆರೆತುಹೋಗಿದ್ದಾರೆ.

ಮೊನ್ನೆ ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಿರೋ ವರ್ತೂರು ಪ್ರಕಾಶ್ ದೆಹಲಿಗೆ ಬಂದಿದ್ದರು ಆ ಮನುಷ್ಯ ವಿಚಿತ್ರ ಅಂತ ಎಲ್ಲಾರಿಗೂ ಗೊತ್ತು, ಸುಮ್ಮನೆ ಕುತೂಹಲಕ್ಕೆ ಅಂತ ಮಾತಿಗೆ ಎಳೆದೆ . ದೆಹಲಿಯ ಕರ್ನಾಟಕ ಭವನದ ಕ್ಯಾಂಟೀನಿನಲ್ಲಿ ಭರ್ಜರಿ ಕುರಿಗಳ ತಲೆ ಮಾಂಸ ತಾನೇ ಆರ್ಡರ್ ಮಾಡಿಸಿಕೊಂಡು ಸಮಾ ತಿನ್ನುತ್ತಾ ಕುಳಿತಿದ್ದ , ನಮಸ್ಕಾರ ಸಾರ್ ಅಂತ ಪರಿಚಯ ಮಾಡಿಕೊಂಡೆ, ಏನ್ ಗುರು ನೀನು ಓದಿದ್ದು ಅಂತ ಕೇಳಿದ, ನಾನು ಮಾಸ್ಟರ್ ಡಿಗ್ರಿ ಮಾಡಿದ್ದೀನಿ ಸಾರ್, ಮಾಸ್ ಕಮ್ಯುನಿಕೇಷನ್ ಜರ್ನಲಿಸಂ ಸಾರ್ ಅಂದೆ. ಆತ ಹೌದಾ... ಅಂತ ಸುಮ್ಮನಿರದೇ 'ಬಿಎ ಗಿಯೇ' ಮಾಡಿಲ್ವಾ ಅಂದ. ನಂಗೆ ನಗು ಬಂದರೂ ತೋರಿಸಿಕೊಳ್ಳದೇ ಅದನ್ನೂ ಮಾಡಿದ್ದೀನಿ ಸಾರ್ ಅಂದೆ......ಹಾಗೆ ಮುಂದುವರೆದು ಕೆಆರ್ ಪುರಂ ಕಾಲೇಜಿನಲ್ಲಿ ನಿಮ್ಮಂತಾ ಜರ್ನಲಿಸ್ಟುಗಳನ್ನೆಲ್ಲಾ ಓದಿಸ್ತಾ ಇದ್ದೀನಿ, ಅದಕ್ಕೆ ಅಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನೆ, ಮುಂದಿನ ವರ್ಷದಿಂದ ಅವರೆಲ್ಲಾ ಟಿವಿ, ಪೇಪರಿನಲ್ಲಿ ಕೆಲಸಕ್ಕೆ ಸೇರ್ತಾರೆ ನನನ್ನ ಪುಲ್ ಟಿವಿಯಲ್ಲಿ ತೋರಿಸ್ತಾರೆ ಅಂದ.
ನಾನು ಯಾರಪ್ಪಾ ಅವರು ಜರ್ನಲಿಂಸಂ ವಿದ್ಯಾರ್ಥಿಗಳು ಇವರಿಂದ ಬೆಳಿಸ್ಕೋಳ್ತಿರೋದು ಅಂದುಕೊಂಡೆ.....

ನಮ್ಮ ರಾಜಕಾರಣಿಗಳೇ ಹಾಗೆ ವಿಚಿತ್ರವಾಗಿರ್ತಾರೆ ಅವರ ಹತ್ರ ಮಾತಾಡುತ್ತಿದ್ದರೆ ಇಂತವರನ್ನೆಲ್ಲಾ ಹೇಗೆ ಆಯ್ಕೆ ಮಾಡಿದರಪ್ಪಾ ಅಂತಾ ಅನ್ನಿಸುತ್ತಿರುತ್ತೆ, ಅವರ ಎಲೆಕ್ಷನ್ ಟೆಕ್ನಿಕ್ಕುಗಳೂ ಹಾಗೆ ವಿಚಿತ್ರ ಮತ್ತು ವೈಶಿಷ್ಠ್ಯ ಪೂರ್ಣ...

Thursday, June 18, 2009


ಅಸ್ಟ್ರೋ ಯೋಗಿ ಫಾರ್ ಮಕರ

ನಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುವುದೆಂದರೆ ಇದೇ ಇರಬಹುದು ನೋಡಿ ಮಾರಾಯರೆ, ಮಾಡಕ್ಕೆ ಏನೂ ಕೆಲಸ ಇಲ್ಲದಾಗ ಇಂಟರ್ ನೆಟ್ ಮುಂದೆ ಕುಳಿತು ಮಾಡವ ಸಾಮಾನ್ಯ ತಪ್ಪನ್ನ ನಾನೂ ಮಾಡಿದ್ದೇನೆ ಸುಮ್ಮ ನೇ ಇರಲಾರದೆ
ಇಂಟರ್ ನೆಟ್ ನಲ್ಲಿ ಮಕರ ರಾಶಿಯವನಾದ ನಾನು ನಿತ್ಯ ಭವಿಷ್ಯ ಏನೆಂದು ತಿಳಿದುಕೊಳ್ಳಲು ಆರಂಭ ಮಾಡಿ ಎರಡು ತಿಂಗಳಾಗುತ್ತಾ ಬರುತ್ತಿದೆ, ಸಾಮಾನ್ಯವಾಗಿ ವಾರ,ದಿನ, ತಿಥಿ, ನಕ್ಷತ್ರ, ಭವಿಷ್ಯ ದಲ್ಲಿ ನಂಬಿಕೆ ಇಡದ ನಾನು ಕಾಲಾತೀತ, ಸಮಯಾತೀತ, ದೇಶಾತೀತ
ಗಿರಲಿಕ್ಕೆ ಇಷ್ಟಪಡುತ್ತೇನೆ, ಯಾವ ಇಕ್ಕಳಕ್ಕೂ ಸಿಕ್ಕಿಕೊಳ್ಳದೆ ಸ್ವಚ್ಚಂದವಾಗಿ ಇರಲಿಕ್ಕೆ ಪ್ರಯತ್ನ ಮಾಡುತ್ತೇನೆ, ಆಗಿದ್ದೆಲ್ಲಾ ಒಳ್ಳೇದಕ್ಕೆ ಆಗಿದೆ, ಆಗಲಿರುವುದು ಒಳ್ಳೇದೆ ಆಗಲಿದೆ ಎಂಬೊ ಕೃಷ್ಣ ಪರಮಾತ್ಮನ ತತ್ವದಲ್ಲಿ ನಂಬಿಕೆ ಹೆಚ್ಚು....
ಆದರೆ ಈಗ ಆಗಿರುವುದೇ ಬೇರೆ ನೋಡಿ. ದಿನ ಭವಿಷ್ಯ ಅನ್ನೊ ವಿಚಿತ್ರ ಭ್ರಮೆಗೆ ಸಿಕ್ಕಿಕೊಂಡಿದ್ದೇನೆ. ಉಚಿತ ದಿನ ಭವಿಷ್ಯ ಹೆಸರಿನ ಅಸ್ಟ್ರೋ ಯೋಗಿ ಎಂಬ ಸೇವೆ ದಿನಾ ಬೆಳಿಗ್ಗೆ ನನ್ನ ಮೊಬೈಲಿಗೆ ಬರುತ್ತಾ ಇವೆ.... ನಿರೀಕ್ಷೆ ಮಾಡದೆ ಇದ್ದರೂ ಸಂದೇಶ ಮಾತ್ರ ಬಂದೆ ಬರುತ್ತದೆ ಮುಂಜಾನೆ ಎದ್ದರೆ ಮೊದಲು ತೆರೆದುಕೊಳ್ಳುವ ಸಂದೇಶವೇ ಅದು... ಆರಂಭದಲ್ಲಿ ಕುತೂಹಲಕ್ಕೆ ಅಂತ ತಿಳಿದುಕೊಳ್ಳಲು ಸಂದೇಶಗಳನ್ನ ಗಮನಿಸುತ್ತಿದ್ದೆ, ಅಸ್ಟ್ರೋ ಯೋಗಿಯ ಸೈಕಾಲಜಿ ಏನು ಅನ್ನೋದನ್ನು ತಿಳಕೊಳ್ಳೊದು ನನಗಿದ್ದ ಚಟ.
ಈ ದಿನ ನೀವು ನೀಲಿ ಬಣ್ಣದ ಬಟ್ಟೆ ಹಾಕಿಕೊಳ್ಳಿ ಇವತ್ತು ನಿಮ್ಮ ದಿನ ಸಂತೋಷದಿಂದ ಕೂಡಿರುತ್ತೆ, ಇವತ್ತು ಕೆಲಸ ಮಾಡುವ ದಿಕ್ಕು ಉತ್ತರಕ್ಕೆ ಇರಲಿ ಬೇರೆ ದಿಕ್ಕು ಅಶುಭ, ಇವತ್ತು ಕಚೇರಿಯಲ್ಲಿ ನಿಮ್ಮ ಬಾಸಿನ ಮನಸ್ಥಿತಿ ಸರಿಯಿಲ್ಲ ಎಚ್ಚರದಿಂದ ಇರಿ ಟ್ರೈ ಟು ಅವಾಯ್ಡ್ ಹಿಮ್...ನಿಮ್ಮ ಕುಟುಂಬದಿಂದ ಇವತ್ತು ನಿಮಗೆ ಶುಭ ಸಂದೇಶ ಬರಲಿದೆ...ಕೀಪ್ ಎ ಎಲ್ಲೋ ರೋಸ್ ಇನ್ ಯುವರ್ ಪಾಕೆಟ್....
ವ್ಯಾಪಾರದಲ್ಲಿ ಲಾಸ್ ಆಗೋ ಸಂಭವ ಇದೆ....ಈ ಧಾಟಿಯ ಸಂದೇಶಗಳು ವ್ಯಾಪಾರ, ಗೀಪಾರ ಮಾಡದ ನಾನು ಅಂತ ಸಂದೇಶಗಳನ್ನು ತಕ್ಷಣ ಡಿಲಿಟ್ ಮಾಡಿಬಿಡುತ್ತೇನೆ, ಇನ್ನು ಕೆಂಪು ಗುಲಾಬಿ ಇಟ್ಚುಕೊಂಡು ಕೆಲಸಕ್ಕೆ ಹೋಗೋಕೆ ಸಾಧ್ಯವಾಗೋ ವಿಷಯ ಅಲ್ಲ ಬಿಡಿ... ನಾನೇನು ಚಾಚಾ ನೆಹರೂನಾ..! ಆದರೆ ನಿಮ್ಮ ಬಾಸಿನ ತಲೆ ಕೆಟ್ಟಿದೆ ಹುಶಾರ್ ಅಂದರೆ ಸುಮ್ಮನೆ ಇರಕ್ಕಾಗುತ್ತಾ...ನೀವು ಇವತ್ತು ಫೇಮಸ್ ಆಗ್ತೀರಾ ಅನ್ನೋ ಸಂದೇಶಗಳನ್ ನೋಡಿದಾಗ ಒಂಥಾರ ತಲೆ ಬಿಸಿ ಆಗೋದಕ್ಕೆ ಶುರುವಾಯಿತು. ಅದೇ ದಿನ ಸಂಜೆ ನಾನು ಎಷ್ಟು ಫೇಮಸ್ ಆದೆ ಅಂತ ಯೋಚಿಸಿದೆ...ಆ ದಿನದ ಘಟನೆಗಳನ್ನ ,ಸಂದೇಶ ದೊಂದಿಗೆ ರಿಲೇಟ್ ಮಾಡಿಕೊಂಡು ತಾಳೆ ಹಾಕಿದೆ. ದರಿದ್ರದ್ದು ಕೆಲವು ಬಾರಿ ಸರಿಯಾಗೆ ಇದೆಯಲ್ಲ ಅನ್ನಿಸಲಿಕ್ಕೆ ಶುರುವಾಯಿತು...
ತಗಳಪ್ಪ ಎರಡೇ ತಿಂಗಳಲ್ಲಿ ಯಾವ ಸ್ಥಿತಿಗೆ ಬಂತು ಎಂದರೆ, ದಿನ ಭವಿಷ್ಯ ನಾನೆ ಹುಡುಕಿ ನೋಡಲು ಶುರುಮಾಡಿದ್ದೇನೆ.
ಇವತ್ತು ಬಂದ ಸಂದೇಶ ಏನಪ್ಪಾ ಅಂದರೆ ನಿಮಗೆ ಸಂಬಂಧಿಸಿದ ವಸ್ತುವೊಂದು ಕಳುವಾಗುವ ಸಾಧ್ಯತೆ ಇದೆ ನಿಮ್ಮ ವಸ್ತುಗಳ ಬಗ್ಗೆ ಕಾಳಜಿಯಿಂದಿರಿ, ಮನೆ, ಕಾರು,ಬೈಕ್ ಲಾಕ್ ಮಾಡಿದ್ದೀರಾ ಚಕ್ ಮಾಡಿಕೊಳ್ಳಿ ಬಿ ಕೇರ್ ಫುಲ್.... ಅನ್ನೋ ತರದ್ದು
ದಿನ ಏನೋ ಮುಗಿದು ಹೋಗಿದೆ. ಆದರೆ ಇಡೀ ದಿನ ಏನಾದರೂ ಕಳಕೊಳ್ಳೋ ಭಯ ಹಚ್ಚಿಕೊಂಡಿದ್ದೇ ಮಾರಾಯರೆ... ಪದೇ ಪದೆ ಎದ್ದು ಹೋಗಿ ಕಾರ್ ಲಾಕ್ ಮಾಡೋದು... ಮನೆ ಕೀ ಹಾಕಿದ್ದೇನಾ ಇಲ್ಲಾವಾ ಅಂತ ಸುಖಾಸುಮ್ಮನೆ ಕನ್ಫ್ಯೂಸ್ ಆಗ್ತಿದ್ದೆ.
ಸುಮ್ಮನೇ ಇರಕ್ಕೆ ಆಗದೆ ಕೆರಕೊಂಡು ಗಾಯ ಮಾಡಿಕೊಂಡರಂತಲ್ಲಾ ಹಾಗೆ...
ಈ "ದಿನ ಭವಿಷ್ಯ"ದ ಸುಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳುವ ಯೋಚನೆ ಈಗ ಶುರುವಾಗಿದೆ...