Showing posts with label chidambram. Show all posts
Showing posts with label chidambram. Show all posts

Thursday, July 16, 2009

ಧಿಮಾಕು... ಒಂದು ಟಿಪ್ಪಣಿ.

http://livingincourageonline.com/wp-content/uploads/2008/07/full.jpgಕೆಲವರು ಹಾಗೆ ಇರುತ್ತಾರೆ... ಜೀವನದ ಅಪ್ಸ್ ಅಂಡ್ ಡೌನ್ಸ್ ಗಳಿಗೆ ಕೇರೇ ಮಾಡುವುದಿಲ್ಲ. ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಗರ್ವ ಅನ್ನೊದು ಇರುವುದಿಲ್ಲ. "ನಾನು ನಿಮ್ಮಂತೆ ಮನುಷ್ಯ ಕಣಯ್ಯಾ" ಅನ್ನೊ ತರದವರು. ಸರಳವಾಗಿ ಎಲ್ಲರ ಜೊತೆಗೆ ಬೆರೆಯುವವರು, ನಮ್ಮ ನಿಮ್ಮಂತವರ ಕಷ್ಟ ಏನಂತ ತಿಳಿದವರು. ನನ್ನ ಅರಿವಿಗೆ ಬಂದಂತೆ ಯಾರಾದರೂ ನಿಜವಾದ ಅರ್ಥದಲ್ಲಿ ಬುದ್ದಿವಂತರೂ , ಜ್ಞಾನಿಗಳು, ಪಂಡಿತೋತ್ತಮರೂ ಆಗಿದ್ದರೆ ಅವರೆಲ್ಲರೂ ಸಿಕ್ಕಾಪಟ್ಟೆ ಸಿಂಪಲ್ಲಾಗಿರುತ್ತಾರೆ. ಸರಳವಾಗಿ ಮಾತಾಡ್ತಾರೆ. ಎಲ್ಲರೊಂದಿಗೆ ಬೆರೆಯಲು ಉತ್ಸುಕರಾಗಿರುತ್ತಾರೆ. ನಮ್ಮ ಅಬ್ದುಲ್ ಕಲಾಂ ಇದ್ದಾರಲ್ಲಾ ಹಾಗೆ..! ಮನುಷ್ಯನ ತಿಳಿವಳಿಕೆ ಹೆಚ್ಚು ಪಕ್ವವಾಗುತ್ತಿದ್ದಂತೆ ವಿನಯ ಹೆಚ್ಚಾಗುತ್ತದೆ ಅನ್ನೊಕೆ ಅವರೇ ಉದಾಹರಣೆ.
ಅದೇ ಅಲ್ಪ ಜ್ಞಾನಿಗಳು ಇಡೀ ಪ್ರಪಂಚಕ್ಕೆ ತಿಳಿಯದಿದ್ದದ್ದು ನನಗೆ ತಿಳಿದಿದೆ ಅನ್ನೋ ಗರ್ವದಿಂದ ಬೀಗ್ತಾ ಇರ್ತಾರೆ. ಯಾರಿಗೂ ಅರ್ಥವಾಗದ ಭಾಷೆಲಿ ಮಾತಾಡೋದು, ಜನರಿಂದ ದೂರ ಇರೋದು, ಮುಖ ಗಂಟಿಕ್ಕಿಕೊಂಡು ಮಾತೋಡೋದು - ಇಂಥವೇ ಹಲವು ಡಿಸ್ಆರ್ಡರ್ ಗಳು ಅಲ್ಪಮತಿಗಳಲ್ಲಿ ಕಾಣುತ್ತವೆ.
ನಮ್ಮ ರಾಜ್ಯದ ಕೆಲವು ರಾಜಕಾರಣಿಗಳು ಅಧಿಕಾರ ಇಲ್ಲದೇ ಇರೋವಾಗ ಅಣ್ಣಾ... ಅಪ್ಪಾ.. ಅಂತ ಮಾತಾಡಿಸ್ತಾ ಇರ್ತಾರೆ, ಬೆನ್ನುಬೀಳ್ತಾರೆ. ಅದೇ ಅಧಿಕಾರ ಬಂದಾಗ ಪರಿಚಯ ಇದ್ದರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಅಧಿಕಾರದ ಅಮಲು ನೆತ್ತಿಗೇರಿರುತ್ತದೆ. ಅಧಿಕಾರ ಇದ್ದಾಗ ಸಿಗೋ ತಾತ್ಕಾಲಿಕ ಗೌರವ, ಸಂಪಾದಿಸಬಹುದಾದ ಹಣ ಅವರ ತಲೆಯನ್ನ ಗಿರಗಿಟ್ಲೆ ಆಡಿಸ್ತಾ ಇರತ್ತೆ. ಎಲ್ಲಾ ಪಕ್ಷಗಳಲ್ಲೂ ಇಂಥವರು ಇದ್ದಾರೆ ಬಿಡಿ.

ಮೇಲಿನ ಟಿಪ್ಪಣಿಯೊಂದಿಗೆ ನಾನು ಹೇಳಬೇಕಾದ್ದನ್ನು ಈಗ ಹೇಳುತ್ತೆನೆ- ಈಗಿನ ಕೇಂದ್ರ ಸರ್ಕಾರದಲ್ಲಿ ತೀರಾ ಟಿಪಿಕಲ್ ಸ್ವಭಾವದ ಮಂತ್ರಿಗಳಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ಖುಷಿಯಾಗುತ್ತದೆ. ಇಂಥವರ ಕೈಯಲ್ಲಿ ದೇಶ ಇದ್ದರೆ, ದೇಶದ ಜನ ನಿರಾಳವಾಗಿರಬಹುದು ನೋಡಪ್ಪಾ ಅಂತ ಅನ್ನಿಸದೇ ಇರದು.
ಅಂಥವರಲ್ಲಿ ಮೊದಲಿಗ ಡಾ.ಮನಮೋಹನ್ ಸಿಂಗ್. ಹಿಂದೆ ಪ್ಲಾನಿಂಗ್ ಕಮಿಷನ್ನಿನ ಉಪಾಧ್ಯಕ್ಷರಾಗಿದ್ದಾಗ ದೇಶ ಸಂಕಷ್ಟದಲ್ಲಿದೆ ಅನ್ನೊ ಕಾರಣಕ್ಕೆ ಒಂದು ರೂಪಾಯಿ ಗೌರವಧನ ಪಡೆಯುತ್ತಿದ್ದರಂತೆ.
ನಿಜಕ್ಕೂ ವಿನಯವಂತರಾದ ಮನಮೋಹನ್ ಗಂಟಲು ಬಿಚ್ಚಿ ಮಾತಾಡಿದ್ದನ್ನು ಯಾರೂ ನೋಡಿರಲಾರರು. ಸಿಂಗ್ ರ ಇಂಟಗ್ರಿಟಿ, ದೂರದೃಷ್ಟಿಯನ್ನ ಪ್ರಶ್ನೆ ಮಾಡೋಕೆ ಸಾದ್ಯವಾಗೋಲ್ಲ. ಮನಮೋಹನ್ ಸ್ವಲ್ಪೇ ಸ್ವಲ್ಪ ಕೋಪದಿಂದ ಮಾತಾಡಿದ್ದನ್ನ ಜನ ನೋಡಿದ್ದು ಕಳೆದ ಚುನಾವಣೆಗಳ ಸಮಯದಲ್ಲಿ. ಅಡ್ವಾಣಿ ತನ್ನನ್ನ ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ ಅಂತ ದೂಷಿಸುತ್ತಾ ಇದ್ದರು. ಹೋದ ಕಡೆಯಲ್ಲಾ ಅದೇ ಭಾಷಣ ಮಾಡುತ್ತಿದ್ದರು. ಆಗ ಮನಮೋಹನ್ ಹೇಳಿದ್ದು, "ನಾನು ಅಡ್ವಾಣಿ ಅವರ ರಾಜಕೀಯ ಜೀವನ ಗಮನಿಸಿದ್ದೇನೆ, ರಾಮಮಂದಿರ ಕೆಡವಿದ್ದು, ದೇಶವ್ಯಾಪಿ ರಥಯಾತ್ರೆ ಮಾಡಿದ್ದೇ ಅವರ ಸಾಧನೆ; ಬೇರೇನಾದರು ಇದೆಯಾ..? ಅವರೇ ಹೇಳಲಿ " ಅಂದಿದ್ದರು. ಬಹುಶ ಮನಮೋಹನ್ ಮಾಡಿರಬಹುದಾದ ಉಗ್ರಾತಿಉಗ್ರ ರಾಜಕೀಯ ಭಾಷಣ ಇದೇ ಇರಬಹುದೇನೋ..! ಮನಮೊಹನ್ ಪ್ರಧಾನಮಂತ್ರಿಯಾದರೂ ತನ್ನ ನೆಂಟರಿಷ್ಟರನ್ನೆಲ್ಲಾ ಮನೆಯಲ್ಲಿ ತುಂಬಿಕೊಂಡಿಲ್ಲ. ಈಗಲೂ ಅವಕಾಶ ಸಿಕ್ಕ ಕಡೆಯೆಲ್ಲಾ ತಮ್ಮ ಹೆಂಡತಿ ಕಟ್ಟಿಕೊಟ್ಟ ಬುತ್ತಿಯನ್ನ ತೆಗೆದುಕೊಂಡು ಹೋಗ್ತಾರೆ ಪ್ರಧಾನಿ...

ಇನ್ನೊಬ್ಬ ಟಿಪಿಕಲ್ ಆಸಾಮಿ ರಕ್ಷಣಾ ಸಚಿವ ಎ.ಕೆ. ಆಂಟನಿ. ಇವರ ಬಗ್ಗೆ ಇವರ ರಾಜಕೀಯ ಜೀವಮಾನದ ಉದ್ದಕ್ಕೂ ಯಾರೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಮಾಡೋದು ಕಷ್ಟ ಅಗಬಹುದೇನೋ. ಯಾಕೆಂದರೆ, ಆಂಟನಿ ರಾಜೀನಾಮೆ ಪತ್ರವನ್ನ ತನ್ನ ಕಿಸೆಯಲ್ಲೇ ಇಟ್ಟುಕೊಂಡು ತಿರುಗುತ್ತಾರಂತೆ ಅನ್ನೊ ಲಘುವಾದ ಜೋಕೊಂದು ಜಾಲ್ತಿಯಲ್ಲಿದೆ. ಇದು ನಿಜವೇ ಇರಬೇಕೇನೋ. ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೇರಳದಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳ ಖರ್ಚಿಗೆ ಅಂತ ಅಲ್ಲಿನ ನಾಯಕ ಆಂಟನಿಯವರಿಗೆ ತಮ್ಮ ನಂಬಿಂಕಸ್ಥ ಮಂತ್ರಿಯೊಬ್ಬರ ಕೈಯಲ್ಲಿ ಸಾಕಷ್ಠು ಹಣ ಕಳಿಸಿದ್ದರಂತೆ. ಆ ಹಣವನ್ನು ಸ್ವೀಕರಿಸಲು ಆಂಟನಿ ನಿರಾಕರಿಸಿ, ನಂಗೆ ಹಣ ಬೇಡ, ನೀವೇ ಕ್ಷೇತ್ರದಲ್ಲೆಲ್ಲಾ ತಿರುಗಿ ಹಂಚಿ ಬಿಡಿ ಅಂತ ಹೇಳಿ ಕಳಿಸಿದ್ದರಂತೆ. ಇದನ್ನ ನಂಗೆ ಕಾಂಗ್ರೆಸ್ ಲೀಡರ್ ಒಬ್ಬರು ಹೇಳಿದ್ದರು.
ಕೇರಳದ ಪತ್ರಕರ್ತ ಸ್ನೇಹಿತನೊಬ್ಬ ಎ.ಕೆ. ಆಂಟನಿ ಎರಡನೇ ಬಾರಿ ರಕ್ಷಣಾ ಸಚಿವನಾದಾಗ ಹೇಳಿದ್ದು ನೆನಪಿದೆ. 'ಶ್ರೀನಿವಾಸ್, ಈ ಮನುಷ್ಯ ಅಧಿಕಾರ ಬೇಡ ಅಂತ ದೂರ ಹೋದಾಗಲೆಲ್ಲ ಈತನಿಗೆ ಅಧಿಕಾರ ಹುಡುಕಿಕೊಂಡು ಬರುತ್ತೆ ನೋಡು, ಅಂದಿದ್ದ. ಈತನ ಸರಳತೆಯೇ ಅವರ ಶಕ್ತಿ ಅಂದಿದ್ದ'.

ಈಗ ಕೇಂದ್ರದಲ್ಲಿ ರೈಲ್ವೇ ಮಂತ್ರಿ ಆಗಿರೋ ಮಮತಾ ಬ್ಯಾನರ್ಜಿ ಕೂಡಾ ಟಿಪಿಕಲ್ ಬೆಂಗಾಲಿ. ಆಕೆ ಅತಿದೊಡ್ಡ ರೈಲ್ವೇ ಇಲಾಖೆ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮೇಲೂ ಆಕೆ ಹಾಕಿಕೊಳ್ಳೊದು ಹವಾಯಿ ಚಪ್ಪಲಿ.
ಮೊನ್ನೆ ರೈಲು ಬಜೆಟ್ ಮಂಡಿಸಲು ಆಕೆ ಬಂದಿದ್ದು ತನ್ನ ಹಳೇ ಮಾರುತಿ ಜೆನ್ ಕಾರಿನಲ್ಲಿ. ಸೆಕ್ಯುರಿಟಿ ಕೂಡಾ ಬಳಸೋಲ್ಲ. ಕೊಲ್ಕಾತ್ತಾದಲ್ಲಿ ಆಕೆಯದು ಈಗಲೂ ಸಿಂಗಲ್ ಬೆಡ್ ರೂಂ ಹೌಸ್. ಅದರಲ್ಲೇ ತಾನು, ತನ್ನ ತಾಯಿ, ಸಹೋದರ ಎಲ್ಲಾರು ವಾಸಮಾಡುತ್ತಾರಂತೆ.

ತಮಿಳುನಾಡಿನ ಮತ್ತೊಬ್ಬ ಟಿಪಿಕಲ್ ತಮಿಳಣ್ಣನ್ ಚಿದಂಬರಂ. ಆತ ಚುನಾವಣೆಯಲ್ಲಿ ಗೆದ್ದ ರೀತಿಯ ಬಗ್ಗೆ ಈಗಲೂ ಅನುಮಾನಗಳಿವೆ. ಆದರೂ, ಮಂತ್ರಿಯಾಗಿ ಆತನ ಕಾರ್ಯವೈಖರಿ ಮೆಚ್ಚುವಂತದ್ದು. ದೇಶದ ಗೃಹ ಸಚಿವರಾಗಿ ಕೈಗೊಂದು ಕಾಲಿಗೊಂದ್ದು ಸೇವಕರನ್ನ ಇಟ್ಟುಕೊಳ್ಳಬಹುದು. ಆದರೆ ಚಿದಂಬರಂ ಮಾತ್ರ ತನ್ನೆಲ್ಲಾ ಫೈಲುಗಳನ್ನ ತಾನೇ ಕಂಕುಳಲ್ಲಿ ಹಿಡಕೊಂಡು ತಿರುಗೊದನ್ನ ನೀವು ನೋಡಿರಬಹುದು. ಅಷ್ಟೇ ಅಲ್ಲಾ ಚಿದಂಬರಂ ಓಡಾಡೋದು ಈಗಲೂ ಅವರ ಫೆೇವರಿಟ್ ಹಳೇ ಎಸ್ಟೀಮ್ ಕಾರಿನಲ್ಲಿ..! ದೆಹಲಿಯಲ್ಲಿ ಇದ್ದಾಗ ಯಾವುದೇ ಸೆಕ್ಯುರಿಟಿಯವರನ್ನ ಹಿಂದೆ ಮುಂದೆ ಇಟ್ಟುಕೊಳ್ಳೊದಿಲ್ಲ. ಟ್ರಾಪಿಕ್ ಸಿಗ್ನಲ್ಲುಗಳಲ್ಲಿ ಕಾರನ್ನು ನಿಲ್ಲಿಸುತ್ತಾ ಅಡ್ಡಾಡುವಸ್ಟು ಸರಳತೆ ಇದೆ. ಸೌತ್ ಬ್ಲಾಕ್ ನ ತಮ್ಮ ಕಚೇರಿಯ ನೌಕರೆಲ್ಲಾ ಮನೆಗೆ ಹೋದರೂ ಆಫೀಸಿನಲ್ಲೇ ಕುಳಿತು ಕೆಲಸ ಮಾಡುತ್ತಿರುತ್ತಾನೆ ಗೃಹಮಂತ್ರಿ.

ಹೀಗೆ, ಟಿಪಿಕಲ್ ತರದ ತುಂಬಾ ಮಂದಿ ಇದ್ದಾರೆ. ಎಲ್ಲಾರ ಬಗ್ಗೆ ಇಲ್ಲಿ ಬರೆಯೋಕೆ ಆಗಲ್ಲ. ಆದರೆ, ಇಂಥದೇ ಚುರುಕಿನ ಕನ್ನಡಿಗ ಒಬ್ಬ ಇದ್ದಾರೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಂತ್ರಿ ಜೈರಾಮ್ ರಮೇಶ್. ನೋಡಲಿಕ್ಕೆ ಒಳ್ಳೆ ಬ್ರಿಟೀಷರ ವಂಶದವನಂತೆ ಕಂಡರೂ ರಮೇಶ್ ಮೂಲತ ಚಿಕ್ಕಮಗಳೂರು ಕಡೆಯವರು. ವರ್ಕೋಹಾಲಿಕ್ ಅಂತಾರಲ್ಲ ಅಂಥವ. ತನ್ನ ಇಲಾಖೆಗೆ ಸಂಭಂದಿಸಿದ ಕೆಲಸ ಎಲ್ಲೇ ಇರಲಿ, ತಾನೇ ಖುದ್ದು ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಕೈಲೊಂದು ಚರ್ಮದ ಬ್ಯಾಗು ಹಿಡಕೊಂಡು ಕೆಲಸ ಆಗಬೇಕಾದ ಅಧಿಕಾರಿ ಹತ್ರ ತಾನೆ ತಿರುಗಿ ಸಹಿ ಹಾಕಿಸಿಕೊಂಡು ಬರುತ್ತಾರೆ. ಅರ್ಧ ವಯಸ್ಸು ಆಗಿದ್ದರು ಇಪ್ಪತ್ತರ ಯುವಕನಂತೆ ಚಂಗನೆ ಜಿಗಿಯುತ್ತಾ ಜೋಕ್ ಮಾಡುತ್ತಾ ಇರ್ತಾರೆ. ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಅನ್ನೋ ಬಿಗುಮಾನ, ಹಮ್ಮು ಆತನಿಗೆ ಇಲ್ಲ. 'ಈಗೋ' ಅಂತಾರಲ್ಲ ಅದು ನನಗಂತೂ ಕಂಡಿಲ್ಲ. ನಿಜಕ್ಕೂ ಲವಬಲ್ ಅಂತಾರಲ್ಲಾ ಅಂಥವನು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಆತ ಉತ್ತರಿಸೋ ವಿಧಾನ ನೋಡಿದರಂತೂ ಎಂಥಾ ತಲೆ ಈತನದು ಅನ್ನಿಸದೇ ಇರಲಾರದು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ವಾರ್ ರೂಮಿನ ಅಧ್ಯಕ್ಷ ಆಗಿದ್ದ ಜೈರಾಮ್ ಕಾಂಗ್ರೆಸ್ ನ ಪ್ರಮುಖ ಸ್ಟ್ರಾಟಜಿಸ್ಚ್ ಕೂಡ ಹೌದು.

ಸಂಪುಟದಲ್ಲಿ ಇರೋರೆಲ್ಲರೂ ಹಾಗೆ ಇದ್ದಾರೆ ಅನ್ನೊದು ನನ್ನ ವಾದ ಅಲ್ಲ. ಕಾಂಗ್ರೆಸ್ ನಲ್ಲಿ ಪ್ರಖಾಂಡ ಖದೀಮರೂ ಇದ್ದಾರೆ ಬಿಡಿ. ಆದರೆ ನಮ್ಮಲ್ಲಿನ ಕೆಲ ಮಂತ್ರಿಗಳು, ಎಂಎಲ್ಎ ಗಳು ಜನ ಅಧಿಕಾರ ಕೊಟ್ಟಾಗ ಐಶಾರಾಮದಿಂದ ಅಧಿಕಾರದ ಮದದಿಂದ ನಡಕೋತಾರೆ. ಅದೇ ರಾಜಕೀಯದಲ್ಲಿ ಒಳ್ಳೇ ಮಂದಿಯೂ ಇದ್ದಾರೆ. ಹೀಗಾಗಿ ಇಂಡಿಯಾದ ಡೆಮಾಕ್ರಸಿ ಬ್ಯಾಲೆನ್ಸ್ ಆಗ್ತಾ ಇರತ್ತೆ.
ಕೆಲವರು ಅಧಿಕಾರವನ್ನ ಹಣದಿಂದ, ದರ್ಪದಿಂದ ಪಡೆಯುತ್ತಾರೆ. ಕೆಲವರು ರಾಜಕೀಯ ಸಂಘರ್ಷದಿಂದ ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಗಳಿಸುತ್ತಾರೆ ಅಲ್ಲವಾ...?