Showing posts with label ngo. Show all posts
Showing posts with label ngo. Show all posts

Wednesday, August 12, 2009

'ಡಾನ್ ಆಪ್ ಪಾವರ್ಟಿ’


ನೋಡಿ ಈ ಪತ್ರಕರ್ತರಿಂದಾಗಿ ಕಳೆದ ಹತ್ತು ದಿನಗಳಿಂದ ನನ್ನ ಶಾಂತಿ ಕಳೆದು ಹೋಗಿದೆ ಅಂದರು ದೀಪ್ ಜೋಶಿ. ನಾವೂ ಹೌದು ಬಿಡಿ ಸಾರ್ ಅದೆಲ್ಲಾ ಸಾಮಾನ್ಯ, ಪ್ರಶಸ್ತಿ ಬಂದಾಗ ಜನ ಜಾಸ್ತಿ ಮುತ್ತಿಕೊಳ್ತಾರೆ ಅಂತ ಹೇಳಿ ಅವರಿಗೆ ಸಾಥ್ ಆದೆವು. ಯಾಕ್ರೀ ಹಾಗಂತೀರಿ ನಿಮಗೆ ಪ್ರಚಾರ ಕೊಡೋಕೆ ನಾವು ಐವತ್ತು ಕಿಲೋ ಮೀಟರ್ ಸುತ್ತಿ ಬಂದೆವು. ಇಲ್ಲೆಲ್ಲೋ ಮೂಲೆಯಲ್ಲಿರುವ ನಿಮ್ಮ ಮನೆ ತಡಕಿ, ತಡಕಿ ಸಾಕಾಗಿ ಬಂದ್ದಿದ್ದೇವೆ ಅಂತ ಹೇಳೋ ಧೈರ್ಯ ಆಗಲಿ, ಮನಸಾಗಲಿ ಇರಲಿಲ್ಲ. ಬೇರೆ ಯಾರಾದರೂ ರಾಜಕಾರಣಿ ಆಗಿದ್ದಿದ್ದರೆ ಅನ್ನಬಹುದಿತ್ತೇನೋ..!

ಯಾಕಂದರೆ ದೀಪಕ್ ಜೋಶಿ ಮೊನ್ನೆ ಮೊನ್ನೆ ತಾನೆ ಏಷ್ಯಾದ ನೊಬೆಲ್ ಅಂತ ಕರೆಸಿಕೊಳ್ಳುವ ರೋಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಭಾಜನರಾದವರು. ಉತ್ತರ ಭಾರತದ 7 ರಾಜ್ಯಗಳಲ್ಲಿ ತಮ್ಮ ಪರಿಧಿಗೆ ಬಂದ ಬಡವರನ್ನೆಲ್ಲಾ ಆತ್ಮಗೌರವದಿಂದ, ಸ್ವಂತ ಶಕ್ತಿಯಿಂದ ಬದುಕುವುದು ಹೇಗೆ ಅಂತ ಕಲಿಸಿಕೊಟ್ಟವರು. ತಾವು ಕಟ್ಟಿದ ಸಂಸ್ಥೆ 'ಪ್ರದಾನ್' ಮೂಲಕ ಈಗಲೂ ಸರಿಸುಮಾರು 1 ಲಕ್ಷ ಎಪ್ಪತ್ತು ಸಾವಿರ ಕುಟುಂಬಗಳಿಗೆ ನೆರವಾದವರು. ಇಂತಹ ದೀಪ್ ಜೋಶಿ ಅವರನ್ನು ಭೇಟಿ ಮಾಡಬೇಕೆಂಬ ನನ್ನ ಹಂಬಲಕ್ಕೆ ಜೊತೆಯಾದ ನನ್ನ ಸಹೋದ್ಯೋಗಿ ದೀಪಕ್ ಪ್ರಯತ್ನದಿಂದ ಅವರ ಸಂದರ್ಶನ ಲಭ್ಯವಾಯಿತು. ಅವರ ಸಂದರ್ಶನವನ್ನ ಇಲ್ಲಿ ಹಾಕಿಲ್ಲ. ಆಸಕ್ತಿ ಹುಟ್ಟಿಸುವ ಮಾಹಿತಿ ಅಷ್ಟೇ ಬರೆದಿದ್ದೇನೆ.

ದೀಪಕ್ ಜೋಶಿ ಕೂಡ ನಮ್ಮಂತೆ ಹಳ್ಳಿಯಿಂದ ಬಂದವರೇ, ಹಿಮಾಲಯಕ್ಕೆ ಹೊಂದಿಕೊಂಡಂತಿರುವ ಜಾರ್ಖಂಡಿನ ಗಡಿತಿರ್ ಎಂಬ ಹಳ್ಳಿಯೊದರಿಂದ ಬಂದವರು. ಕಲಿತಿದ್ದು ಇಂಜಿನಿಯರಿಂಗ್, ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಮಾಡಿ ವಾಪಸ್ಸು ಬಂದಮೇಲೆ ಅಲ್ಲಿ ಇಲ್ಲಿ ಕೆಲಸಮಾಡಿ ಆದ ಮೇಲೆ, ಆಯ್ಕೆ ಮಾಡಿಕೊಂಡದ್ದು ಬಡ ಹಳ್ಳಿಗಳನ್ನು ಉದ್ದಾರ ಮಾಡುವ ಕೆಲಸ..! ಕೇಳಲಿಕ್ಕೆ ಅಷ್ಟೇನೂ ರುಚಿಸದ ಕಾರ್ಯಕ್ಕೆ ಕೈ ಹಾಕಿದ ದೀಪ್ ಅವರದು ಈಗ ದೊಡ್ಡ ಸಕ್ಸಸ್ಸು.. ಕಡಿಮೆ ಅಲ್ಲ ಕನಿಷ್ಠ 1 ಲಕ್ಷ ಕುಟುಂಬಗಳಿದೆ ಸ್ವಾವಲಂಭನೆ ಒದಗಿಸಿದ ಸಾರ್ಥಕ ಕೆಲಸ.

ನೀವು ಬಡವರಿಗೆ ಅದು ಹೇಗೆ ಕೊಟ್ಟರು ಸ್ವಾವಲಂಬನೆ ಅಂತ ಕೇಳಿದರೂ ಉತ್ತರಕೊಡುವುದು ಸುಲಭವಲ್ಲ ಬಿಡಿ. ಅದೂ ಕೂಡ ಬೇರೆಯದೇ ತರದ್ದು ಅನ್ನಬೇಕು. ಅದಕ್ಕೆ ದೀಪ್ ಅವರಿಗೆ ಸಂದ ಪ್ರಶಸ್ತಿಯ ಸೈಟೇಷನ್ನಿನಲ್ಲಿ ಹೀಗೆ ಹೇಳಲಾಗಿದೆ. ಅದು ಅವರ ಹೊಸ ತರದ ಐಡಿಯಾಗೆ, ನಾಯಕತ್ವಕ್ಕೆ ಸಿಕ್ಕದ್ದು. 'For his vision and leadership in bringing professionalism to the NGO movement in India, by effectively combining ‘head’ and ‘heart’ in the transformative development of rural communities.
' ಅಂತ.
ದೀಪ್ ಅವರ 'ಪ್ರದಾನ್ 'ನಲ್ಲಿ ಯಾರೂ ಸ್ವಯಂ ಸೇವಕರಲ್ಲ. ಅಲ್ಲಿ ಎಲ್ಲರೂ ನೌಕರರೇ... ಯೂನಿವರ್ಸಿಟಿಗಳಲ್ಲಿ ಕಲಿತ ಪ್ರತಿಭಾವಂತರನ್ನ ಪ್ರದಾನ್ ಕ್ಯಾಂಪಸ್ ಸೆಲಕ್ಷನ್ ಮಾಡಿಕೊಳ್ಳುತ್ತದೆ. ಐಐಎಂ ಮತ್ತು ಐಐಟಿಗಳಲ್ಲಿ ಕಲಿತ ಮಂದಿ ಹಳ್ಳಿಗರ ಬಡತನವನ್ನು ನಿರ್ಮೂಲನೆ ಮಾಡಲಿಕ್ಕೆ ಮತ್ತು ಅದಕ್ಕಾಗಿ ಹೊಸ ಹೊಸ ಐಡಿಯಾ ಕಂಡುಹಿಡಿಯಲು ನೇಮಿಸಿಕೊಳ್ಳುತ್ತದೆ. ಸದ್ಯಕ್ಕೆ ಒಂದು ಸಾವಿರ ಮಂದಿಯನ್ನು ಇಂತಹ ಕೆಲಸದಲ್ಲಿ ತೊಡಗಿಸಿದ್ದಾರೆ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡುತ್ತಾರೆ
ಅಂದರೆ ನಂಬಲಾಗುತ್ತಿದೆಯೇ...?

ನಂಬಬೇಕು, ಯಾಕಂದರೆ ದೀಪ್ ಅವರ ಪ್ರದಾನ್ ಸಂಸ್ಥೆ 1983 ರಿಂದ ಅದನ್ನೇ ಮಾಡಿಕೊಂಡು ಬಂದಿದೆ. ಉತ್ತರ ಭಾರತದ ಜಾರ್ಖಂಡ್,ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಇವರ ಕಾರ್ಯ ಚಟುವಟಿಕೆಗಳಿವೆ. ಇದೆಲ್ಲ ಹೇಳಿದ ಮೇಲೆ ಪ್ರದಾನ ಮಾಡೋ ಕೆಲಸ ಅಂತ ಹೇಳಿದರೆ ಸುಲಭವಾಗಬಹುದು. ಹಳ್ಳಿಗರು ಮಾಡುವ ಕೆಲಸವನ್ನೇ ಸೈಟಿಪಿಕ್ ಆಗಿ ಮಾಡಿಸುವುದು ಅದರ ಕೆಲಸ. ಕೋಳಿ ಸಾಕಣೆ ಇರಬಹುದು, ಕುರಿ ಸಾಕಣೆ, ಹೈನುಗಾರಿಕೆ,ರೇಷ್ಮೆ ಸಾಕಣೆ ಇರಬಹುದು, ಕಾಡಿನ ವಸ್ತುಗಳ ಸಂಗ್ರಹಣೆ ಇರಬಹುದು ಇಂತವೇ ಸಣ್ಣ ಸಣ್ಣ ಬಡವರ ಕೆಲಸಗಳಿಗೆ ದೀಪ್ ಕೈಜೋಡಿಸಿದ್ದಾರೆ. ಅವರಿಗೆ ಬೇಕಾದ ಮಾಹಿತಿ, ಮಾರುಕಟ್ಟೆ, ಹೊಸ ತಂತ್ರಜ್ಞಾನ. ಔಷಧಿ, ಸಣ್ಣ ಸಾಲ, ರೈತರು ಇಡಬೇಕಾದ ಲೆಕ್ಕ ಪತ್ರ, ಸಾಮೂಹಿಕ ಕೃಷಿ. ಸ್ವಸಹಾಯ ಗುಂಪುಗಳ ರಚನೆ ಎಲ್ಲಕ್ಕೂ ಪ್ರಧಾನ್ ನೇಮಿಸಿರುವ ಕಲಿತ ಯುವಕರು ಸಹಾಯ ಮಾಡುತ್ತಾರೆ. ಬಿಸಿನೆಸ್ ಸ್ಕೂಲ್ ಮತ್ತು ಲ್ಯಾಬೋರೇಟರಿಗಳಲ್ಲಿ ಕಲಿತದ್ದನ್ನು ವಾಸ್ತವಿಕವಾಗಿ ಉಪಯೋಗಿಸುತ್ತಾರೆ.

ಪ್ರದಾನ್ ಕೂಡ ಸ್ವಯಂ ಸೇವಾಸಂಸ್ಥೆ. ತನ್ನೆಲ್ಲಾ ಕಾರ್ಯಚಟುವಟಿಕೆಗಳಿಗೆ ಅವಲಂಭಿಸಿದ್ದು ದಾನಿಗಳನ್ನೆ, ಆದರೆ ಇಂಡಿಯಾದ ಬಡತನದ ಹೆಸರಲ್ಲಿ ವಿದೇಶಗಳಲ್ಲಿ ಭಿಕ್ಷೆ ಎತ್ತೊದನ್ನ ಜೋಶಿ ವಿರೋದಿಸುತ್ತಾರೆ. ನಿಜವಾದ ಸಹಾಯ ಮಾಡಲು ಬಯಸಿದವರಿಂದ ಹಣ ಸಂಗ್ರಹಿಸುತ್ತದೆ. ಪ್ರದಾನ್ ನ ಕೆಲಸವನ್ನು ಮೆಚ್ಚಿರುವ ಟಾಟಾ. ರತನ್ ಟಾಟ ಟ್ರಸ್ಟ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ. ಪೋರ್ಡ್, ಐಸಿಐಸಿಐ ಯಂತ ಅನೇಕ ಸಂಸ್ಥೆಗೆಳು ದಾರಾಳ ಹಣ ನೀಡುತ್ತಿವೆ ಪ್ರದಾನ್ ಸಂಸ್ಥೆ ಸೂಚಿಸಿದವರಿಗೆ ಸಾಲ ನೀಡುತ್ತಿವೆ. ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತದೆ. ದೀಪ್ ಹೇಳುವಂತೆ ಪ್ರದಾನ್ ಸದ್ಯ 100 ಕೋಟಿ ರೂಪಾಯಿಯ ಗ್ರಾಮೀಣ ವ್ಯವಹಾರ ನಡೆಸುತ್ತಿದೆ.

ಪ್ರಶಸ್ತಿ ಬಂದ ನಿಮಿಶಕ್ಕೆ ಅದನ್ನು ಪಡೆದವರನ್ನು ಸಿಕ್ಕಾಪಟ್ಟೆ ಹೊಗಳುವುದು ನಮ್ಮ ಸಾಮಾನ್ಯ ಸ್ವಭಾವ. ಆದರೂ ಜೋಶಿ ಅವರ ಹತ್ತಿರ ಮಾತಾಡಿದಾಗ ಅವರ ಬಗ್ಗೆ ಜಾಹೀರು ಮಾಡೋದು ನಮ್ಮ ಜವಾಬ್ಧಾರಿ ಅಂತ ನನಗೂ ಅನ್ನಿಸಿತ್ತು. ಯಾಕಂದರೆ ಜೋಶಿ ಎಷ್ಟು ಪ್ರೊಫೆಷನಲ್ ಆಗಿ ಸಂಸ್ಥೆ ಬೆಳೆಸಿ ಈಗ ಕೈಬಿಟ್ಟಿದ್ದಾರೆ ಅಂದರೆ. ಅವರು ಪ್ರದಾನ್ ಸಂಸ್ಥೆಯಿಂದ ನಿವೃತ್ತಿಯಾಗಿ ಆಗಲೇ 2 ವರ್ಷ ಕಳೆದಿದೆ. ಯಾಕಂದರೆ ಎಲ್ಲರೂ ಸರಿಯಾದ ವಯಸ್ಸಿಗೆ ನಿವೃತ್ತಿ ಪಡೆದು ಹೊಸ ಮನಸುಗಳಿಗೆ, ಯುವಕರಿಗೆ ಅವಕಾಶಕೊಡಬೇಕೆನ್ನುವುದು ಅವರದೇ ನಿಯಮ ಅಂತೆ. ಈಗ ಪ್ರದಾನ್ ಸಂಸ್ಥೆಗೆ ಜೋಶಿ ಸಲಹೆಗಾರರು ಮಾತ್ರ.

ದೀಪ್ ಜೋಶಿ ಅವರ ಬಳಿ ಮಾತಾಡುವಾಗ ಅವರು ಹೇಳಿದ ಮಾತೊಂದು ಮೀಡಿಯಾಗೆ ಸಂಭಂದಿಸಿತ್ತು , ಒಂದೆರಡು ನಿಮಿಷ ಯೋಚನೆಗೂ ಈಡು ಮಾಡಬುಹುದು.
ನಮ್ಮ ಸಂದರ್ಶನ ಎಲ್ಲಾ ಮುಗಿದ ಮೇಲೆ ಅವರು ಹೇಳಿದರು
ನೋಡಿ ನಾವು ಮಾಡಿದ ಕೆಲಸವನ್ನ ಇಲ್ಲಿನ ಸರ್ಕಾರ ಆಗಲಿ, ಮೀಡಿಯಾದವರಾಗಲಿ ಗುರುತಿಸೋದೇ ಇಲ್ಲ ನನ್ನ ಪ್ರಕರಣದಲ್ಲೇ ನೋಡಿ, ನಾವು ಮಾಡಿದ ಕೆಲಸವನ್ನು ಬೇರೆ ದೇಶದ ಮಂದಿ ಇಲ್ಲಿಗೆ ಬಂದು ಅಭ್ಯಾಸ ಮಾಡಿ ಗುರುತಿಸುತ್ತಾರೆ. ಆದರೆ ನಮ್ಮ ಮೀಡಿಯಾದ ಮಂದಿ ಬೇರೆ ಬೇರೆ ಇಶ್ಯುಗಳ ನಡುವೆ ಸದಾ ಬ್ಯುಸಿ ಇರುತ್ತಾರೆ ಅಂತ ನಕ್ಕರು..ನನಗೆ ಅವರ ನಗುವಿನಲ್ಲಿ ಏನೇನೂ ಅರ್ಥಗಳು ಕಾಣಿಸಿದವು..

ನನಗೂ ಹಾಗೆ ಅನ್ನಿಸಿತು ಮೊನ್ನೆ ಆಗಸ್ಟ್ 3 ರಂದು ಅವರಿಗೆ ಪ್ರಶಸ್ತಿ ಬಂದಾಗ ಯಾವ ಪತ್ರಿಕೆಯಲ್ಲಾಗಲಿ ಟಿವಿಯಲ್ಲಾಗಲಿ ಅವರ ಬಗ್ಗೆ ಸಮಗ್ರ ಮಾಹಿತಿ ಉಳ್ಳ ಲೇಖನಗಳು ಬರದೇ ಹೋದವು. ಇಂಟರ್ನೆಟ್ ನಲ್ಲಿ ಹುಡುಕಾಡಿದೆ, ಅಲ್ಲೂ ಮಾಹಿತಿ ಇರಲಿಲ್ಲ. ಕೌಲಲಾಂಪುರದಿಂದ ಬಂದ ಒಂದೇ ಸುದ್ದಿಯನ್ನ ಎಲ್ಲಾ ಪತ್ರಿಕೆಗಳು ತಿರುಗಾಮುರುಗಾ ಬರೆದಿದ್ದವು.
ಕಡೆಗೆ ವೈಕೀಪೀಡಿಯೂದವರೂ ಅವರಿಗೆ ರೋಮನ್ ಮ್ಯಾಗ್ಸೆಸೆ ಬಂದ ಮೇಲೆ ಪತ್ರಿಕೆಗಳಲ್ಲಿ ಬಂದಿದ್ದ ಮಾಹಿತಿಯನ್ನೇ ಅಪ್ ಡೇಟ್ ಮಾಡಿದ್ದರು. ಎಲ್ಲೂ ಅವರ ಬಗ್ಗೆ ಪ್ರಚಾರ ಆದಂತೆ ಕಾಣಲಿಲ್ಲ. ಅಷ್ಟೇ ಏಕೆ ಅವರಿಗೆ ಪ್ರಶಸ್ತಿ ಬಂದ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಠ್ರಪತಿ ಪ್ರತಿಭಾ ಪಾಟೀಲ್ ಒಂದೆರಡು ಸರ್ಕಾರಿ ಹೇಳಿಕೆ ಕೊಟ್ಟರು ಶಹಬಾಶ್ ಅಂದರು ಅಷ್ಟೇ ಮತ್ತೇನಿಲ್ಲ.

ಕಟ್ಟ ಕಡೆಗೆ ನಾನು ಸಂದರ್ಶನದಲ್ಲಿ ಕೇಳಲು ಆಗದೇ ಹೋಗಿದ್ದ, ಮತ್ತು ನನ್ನನ್ನು ಯಾವತ್ತೂ ಕಾಡುತ್ತಿದ್ದ ಪ್ರಶ್ನೆಯೊಂದನ್ನ ಅವರಿಗೂ ಕೇಳಿದೆ. 'ಅಲ್ಲಾ ಸಾರ್ ಈ ರೋಮನ್ ಮ್ಯಾಗ್ಸಸೆ, ನೋಬಲ್,ಅಂತ ಪ್ರಶಸ್ತಿ ತಗೋಳೋ ಮಂದಿ ಎಲ್ಲಾ ನಿಮ್ಮದೇ ರೀತಿ ಬೆಳ್ಳಗೆ ಗಡ್ಡ ಬಿಟ್ಟಿರುತ್ತಾರಲ್ಲಾ ಯಾಕೆ...?' ಅಂದೆ. ಅಲ್ಲಾರಿ ನನ್ನ ಗಡ್ಡ ನೋಡಿದರೆ ಒಳ್ಳೆ ಚಂಬಲ್ ಕಣಿವೆ ಡಾನ್ ತರಾ ಕಾಣ್ತೀನಿ ಅಂದ್ರು. ನಾನು ತಕ್ಷಣ ಪ್ರತಿಕ್ರಿಯಿಸಿ, ಅಲ್ಲಾಲ್ಲಾ ನೀವು ' ಡಾನ್ ಆಪ್ ಪಾವರ್ಟಿ’ ಅಂದೆ. ಅವರು ನಕ್ಕರು.


ನಿಮಗೆ ಜೋಶಿ ಮತ್ತು ಪ್ರದಾನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅನಿಸಿದರೆ ಇಲ್ಲಿಗೆ ಭೇಟಿಕೊಡಿ. www.pradan.net ಮತ್ತು
http://www.rmaf.org.ph/pdf/2-2009-Magsaysay-Awardees.pdf