Showing posts with label manasa gangothri. round canteen. Show all posts
Showing posts with label manasa gangothri. round canteen. Show all posts

Saturday, August 8, 2009

ಬಿಡಿ ಬಿಡಿ ಚಿತ್ರಗಳು.


ಮಹಾರಾಜ ಕಾಲೇಜು ಕ್ಯಾಂಟೀನಿನ ಟೆಂಡರನ್ನ ಆ ವರ್ಷ ಕನ್ನೇಗೌಡನ ಕೊಪ್ಪಲಿನ ಗಣೇಶ್ ಎಂಬುವವರೊಬ್ಬರು ಪಡೆದು ಆರಂಭಿಸಿದ್ದರು. ಕ್ಲಾಸಿಗಿಂತಲೂ ರೌಂಡ್ ಟೇಬಲ್ ಕ್ಯಾಂಟೀನಿನನ್ನೇ ಅಡ್ಡಾ ಮಾಡಿಕೊಂಡಿದ್ದ ನಾವು, ದಿನದ ಬಹುತೇಕ ಸಮಯ ಅಲ್ಲೇ ಇರುತ್ತಿದ್ದೆವು.ಕಾಲೇಜಿಗೆ ರಜಾ ಇದ್ದರೂ ಕ್ಯಾಂಟೀನಿನ ಕಡೆ ಹೋಗದೆ ಇದ್ದರೆ ಆ ದಿನ ಯಾಕೋ ಖಾಲಿ ಖಾಲಿ ಅನ್ನಿಸುತ್ತಿತ್ತು. ನಾವು ಅಲ್ಲೇ ಸಾಹಿತ್ಯದ ಚಟ ಹತ್ತಿಸಿಕೊಂಡಿದ್ದು, ಬೇರೆ ಬೇರೆ ಸಬ್ಜೆಕ್ಟ್ ಕಲಿಯುತ್ತಿದ್ದ ಸುನೀಲ್ ಬಾದ್ರಿ, ಸತೀಶ ಶಿಲೆ, ನಂದೀಶ್ ಅಂಚೆ, ವಿನಯ್ ಅವರೆಲ್ಲ ತಾವು ಓದಿಕೊಂಡು ಬಂದಿದ್ದನ್ನೆಲ್ಲಾ ನಾವೆಲ್ಲಾ ಬೆರಗಾಗುವಂತೆ ಹೇಳುತ್ತಿದ್ದರು. ನಾವು ಹುಬ್ಬೇರಿಸಿ ಕೇಳಿಸಿಕೊಳ್ಳುತ್ತಿದ್ದೆವು.

ನಾವಾದರೂ ಓದಿದ್ದಕಿಂತ ಅವರಿವರು ಹೇಳಿದ್ದನ್ನ ಕೇಳಿಯೇ ಪುಸ್ತಕ ಓದಿದ್ದೇವೆ ಅಂತ ತಿಳಿದುಕೊಳ್ಳುತ್ತಿದ್ದೆವು. ಅವರು ಕೋಟ್ ಮಾಡಿದ ವಿಶಯಗಳನ್ನೇ ಕಾಫಿ ಮಾಡಿ, ನಮಗಿಂತ ದಡ್ಡ ಶಿಕಾಮಣಿಗಳಾಗಿದ್ದ ಹಾಸ್ಟೆಲ್ ಹುಡುಗರಿಗೆ ಹೇಳಿ ಗಾಭರಿ ಹುಟ್ಟಿಸುತ್ತಿದ್ದೆವು. ನಾವು ಪ್ರಕಾಂಡ ಪಂಡಿತರೆಂಬಂತೆ ಬೀಗುತ್ತಿದ್ದೆವು.
ನಾನಂತೂ ಕ್ಯಾಂಟೀನ್ ನಡೆಸುತ್ತಿದ್ದ ಗಣೇಶ್ ಗೆ ನಮ್ಮ ಗ್ಯಾಂಗ್ ಕಾಲೇಜಿನಲ್ಲಿ ತುಂಬಾ ನಟೋರಿಯಸ್ ಜೊತೆಗೆ ನಮ್ಮ ಪ್ಯಾಮಿಲಿಯೇ ನಟೋರಿಯಸ್ ಅಂತ ನಂಬಿಸಿ, ಇಲ್ಲಸಲ್ಲದ ಕಥೆಗಳನ್ನೆಲ್ಲಾ ಹೇಳಿದ್ದೆ.. ಅವನು ನಮಗೆ ವಿಪರೀತ ಗೌರವಿಸುತ್ತಿದ್ದ . ದಿನಾಪೂರ್ತಿ ಅವನ ಕ್ಯಾಂಟೀನಿನಲ್ಲಿ ಬೇಕಾದ್ದನ್ನೆಲ್ಲಾ ತಿಂದು, ಕುಡಿದು ಇಪ್ಪತ್ತೋ ಮೂವತ್ತೊ ರೂಪಾಯಿ ಕೊಟ್ಟು ಯಾಮಾರಿಸುತ್ತಿದ್ದೆ.

ಮಹಾರಾಜ ಹಾಸ್ಟೆಲ್ ನಲ್ಲಿ ಕಿಟ್ಟಿ ಎಂಬ ಪೈಲ್ವಾನ್ ಒಬ್ಬ ಮೆಸ್ ನಡೆಸುತ್ತಿದ್ದ. ಹಾಸ್ಟೆಲ್ ನಲ್ಲಿರುತ್ತಿದ್ದ 450 ಹೆಚ್ಚು ಮಂದಿ ಹುಡುಗರನ್ನು ಸಂಬಾಳಿಸೋದು ತೀರಾ ಪ್ರಯಾಸದ ಕೆಲಸವಾಗಿತ್ತು. ಆಗಿನ ಕಾಲಕ್ಕೆ 650 ರೂಪಾಯಿ ಮೆಸ್ ಹಣ ಕಟ್ಚಬೇಕಿತ್ತು ನಾನು ಸೇರಿದಂತೆ ಬಹುತೇಕರು 300 ಅಥವಾ 350 ರೂಪಾಯಿ ಕೊಡುತ್ತಿದ್ದೆವು. ನಮ್ಮ ನಮ್ಮ ಮದ್ಯೆ ಅಗ್ರಿಮೆಂಟ್ ಏನೆಂದರೆ ಊಟ ಚೆನ್ನಾಗಿಲ್ಲಾ ಅಂತ ಗಲಾಟೆ ಎಬ್ಬಿಸಬಾರದು. ಅನ್ನ, ಸಾರು, ಪಲ್ಯಗಳನ್ನ ಚೆಲ್ಲಬಾರದು ಅನ್ನೊದು.
ಆತನ ಊಟ ಎಷ್ಟು ಭಯಾನಕ ಆಗಿರುತ್ತಿತ್ತು ಅಂದರೆ ಅನ್ನ, ಸಾರು, ಪಲ್ಯ ಉಪ್ಪಿನಕಾಯಿ, ಮಜ್ಜಿಗೆ, ಉಪ್ಪು ಎಲ್ಲವನ್ನ ಮಿಕ್ಸ್ ಮಾಡಿಕೊಂಡರೂ ಒಂಚೂರು ರುಚಿ ಇರುತ್ತಿರಲಿಲ್ಲ. ಆಕಸ್ಮಿಕವಾಗಿ ಯಾವತ್ತಾದರೂ ರುಚಿಯಾಗಿ ಸಾಂಬಾರ್ ಮಾಡಿದ್ದರೆ ಅಡಿಗೆ ಇನ್ ಚಾರ್ಜ್ ಹನುಮಂತನಿಗೆ ಕಿಟ್ಟಿ ಸಿಕ್ಕಾಪಟ್ಟೆ ಭೈಯುತ್ತಿದ್ದ. ಯಾಕಂದರೆ ಅವತ್ತು ಅಕ್ಕಿ ಸಿಕ್ಕಾಪಟ್ಟೆ ಖರ್ಚಾಗಿರುತ್ತಿತ್ತು.

ನಮಗೆ ಪರಿಚಯವಿದ್ದ ಗೆಳೆಯರ ಒತ್ತಾಯ ಮತ್ತು ಆಮಿಶಕ್ಕೆ ಬಿದ್ದು ಮೈಸೂರಿನ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ದೃವನಾರಾಯಣ್ ಎಂಬುವರ ಪರ ಪ್ರಾಕ್ಸಿ ಓಟ್ ಹಾಕಲು ಹೋಗಿದ್ದೆವು. ರಾತ್ರಿಯೆಲ್ಲಾ ಪಾರ್ಟಿ ಮಾಡಿದ್ದ ನಮಗೆ ಬೆಳಿಗ್ಗೆ ಕಳ್ಳ ಓಟು ಹಾಕಲು ಸಿಕ್ಕಾಪಟ್ಟೆ ದಿಗಿಲಾಗಿತ್ತು. ಕರೆದುಕೊಂಡು ಹೋಗಿದ್ದ ನಾನೇ ದೈರ್ಯ ಮಾಡಿ ಯಾರೋ ನಾರಾಯಣ ಶಾಸ್ತ್ರಿ ಎಂಬುವರ ಹೆಸರಿನಲ್ಲಿ ಓಟು ಹಾಕಲು ಹೋಗಿದ್ದೆ. ನನ್ನ ಬೆರಳಿಗೆ ಇಂಕು ಹಾಕುವಾಗ ನನ್ನ ಅವರಿಗೆ ಕಾಣುವಂತೆ ಕೈಗಳು ಗಡ ಗಡ ಅಂತ ನಡುಗುತ್ತಿದ್ದವು.ಆದರೂ ಅವರು ಏನೂ ಕೇಳಲಿಲ್ಲ. ನನ್ನ ಗೆಳಯರಿಗೆಲ್ಲಾ ವಾಪಸ್ಸು ಬಂದು ಹೇಳಿದೆ 'ಯಾರೂ ಕೇಳಲ್ಲಾ, ಏನೂ ಆಗಲ್ಲಾ ತುಂಬಾ ಈಸಿ ಕಣ್ರೋ, ನೀವು ಹೋಗ್ರಿ' ಅಂತ. ಎಲ್ಲಾರು ಓಟು ಮಾಡಿ ಬಂದರು. ಅವತ್ತಿನ ಗಡಿಬಿಡಿ ಮತ್ತು ಆತಂಕದಲ್ಲಿ ಸ್ಪಲ್ಪ ದುಡ್ಡು ಕಳೆದುಕೊಂಡಿದ್ದೆ.

ಡಿಗ್ರಿಯ ಮೊದಲ
ವರ್ಷ ನಾನಿದ್ದ ರೂಂ ನಂಬರ್ 105 ರ ಪಕ್ಕ ಮಣಿಪುರದಿಂದ ಬಂದ ನಾಲ್ಕೈದು ಮಂದಿ ಸ್ನೇಹಿತರಿದ್ದರು, ಅವರ ಆಹಾರ ಪದ್ದತಿಯೇ ವಿಚಿತ್ರವಾಗಿತ್ತು, ದಿನದ ಮುಕ್ಕಾಲು ಬಾಗ ಅಡಿಗೆ ಸಿದ್ದಮಾಡಿ ತಿನ್ನೊದರಲ್ಲಿಯೇ ಕಳೆಯುತ್ತಿದ್ದರು. ಮಾಂಸಹಾರ ಅವರಿಗೆ ಸಿಕ್ಕಾಪಟ್ಟೆ ಪ್ರಿಯವಾಗಿತ್ತು. ಮಣಿಪುರಕ್ಕೆ ಹೊಗಿ ಬಂದವರು ಅದೇನೇನೂ ಹುಳಿ ಹುಳಿ ಚೀಪುವ ಕಡ್ಡಿಗಳನ್ನು ತರುತ್ತಿದ್ದರು. ನನಗೂ ಆಗಾಗ ಕೊಡುತ್ತಿದ್ದರು. ನಮ್ಮ ಹಾಸ್ಟೆಲ್ ನಲ್ಲಿರುತ್ತಿದ್ದ ಹತ್ತಾರು ನಾಯಿಮರಿಗಳಲ್ಲಿ ಕೆಲವು ಆಗಾಗ ಕಾಣೆಯಾಗುತ್ತಿದ್ದವು. ಅವು ರಾತ್ರೋರಾತ್ರಿ ಇವರ ಹೊಟ್ಟೆ ಸೇರಿದ್ದವು ಅನ್ನೊ ಗುಸು ಗುಸು ಹಬ್ಬಿತ್ತು.

ಹಾಸ್ಟೆಲ್ಲಿನ ರೂಮುಗಳಲ್ಲಿ ಸೋಪು, ಪೌಡರು, ಪೆನ್ನು, ನೋಟ್ ಬುಕ್ಕು, ಪೇಸ್ಟು ಇಂತಹ ವಸ್ತುಗಳ ಯಾವಾಗಲೂ ಕಾಣೆಯಾಗುತ್ತಿದ್ದವು. ಅವರ ಬಗ್ಗೆ ಇವರು ಇವರ ಬಗ್ಗೆ ಅವರಿಗೆ ಡೌಟು ಬರುವಂತಾಗಿತ್ತು. ರೂಮಿನ ಸಹಬಾಗಿಗಳೇ ಅನುಮಾನ ಪಡುವಂತಾಗಿತ್ತು. ಕಡೆಗೆ ಸೈಕಾಲಜಿ, ಕ್ರಿಮಿನಾಲಜಿ ಓದುತ್ತಿದ್ದ ಸುದಾಕರ್ ಎಂಬ ಹುಡುಗನ ಸೂಟ್ ಕೇಸ್ ನಲ್ಲಿ ಎಲ್ಲಾ ವಸ್ತುಗಳು ಪತ್ತೆಯಾದವು. ಆತ ಅವನ್ನೆಲ್ಲಾ ಊರಿಗೆ ಹೋದಾಗ ತೆಗೆದುಕೊಂಡು ಹೊಗುತ್ತಿದ್ದನಂತೆ. ಒಂದು ಬಾರಿ ಸಿಕ್ಕಿಕೊಂಡಮೇಲೂ ಸುಮ್ಮನಾಗದ ಅವನು ಮತ್ತೊಮ್ಮೆ ಹಾಗೆ ಕದ್ದು ಸಿಕ್ಕಿಕೊಂಡಿದ್ದ.

ಮಹಾರಾಜ ಕಾಲೇಜಿನಲ್ಲಿ ಹುಡುಗಿಯರ ಸಂಖ್ಯೆ ತುಂಬಾ ಕಮ್ಮಿ ಇತ್ತು 3000 ಹುಡುಗರು 20 ಹುಡುಗಿಯರು ಇರಬೇಕೇನೋ ಕೆಲವೇ ಕೆಲವು ವಿಶಯಗಳಿಗೆ ಮಾತ್ರ ಅಡ್ಮೀಷನ್ ಕೊಡುತ್ತಿದ್ದರು. ಪಾಪ ಆ ಹುಡುಗಿಯರ ಮೇಲೆ ಕಾಲೇಜಿನ ಹುಡುಗರು ಸಿಕ್ಕಾಪಚಟ್ಟೆ ರೂಮರುಗಳನ್ನು ಹಬ್ಬಿಸೋರು, ಗೋಡೆಗಳ ಮೇಲೆ ಏನೇನೋ ಬರೆಯುತ್ತಿದ್ದರು. ಒಬ್ಬೆ ಒಬ್ಬ ಹುಡುಗಿಯನ್ನ ನೂರಾರು ಜನ ಪ್ರೀತಿಸೋರು, ಒನ್ ಸೈಡ್. ಆ ಹುಡುಗಿಯರೆಲ್ಲ ಕಾಲೇಜು ಬಿಡುವಹೊತ್ತಿಗೆ ಮಾನಸಿಕವಾಗಿ ಸಿಕ್ಕಾಪಟ್ಟೆ ಗಟ್ಟಿ ಆಗಿರುತ್ತಿದ್ದರು ಅಂತ ನಂಗೆ ಈಗಲೂ ಅನಿಸುತ್ತೆ.

ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದ ರಘು ಎಂಬ ಗೆಳೆಯನೊಬ್ಬ ಗಣಿತ ಮತ್ತು ಕೆಮಿಸ್ಟ್ರಿಯಲ್ಲಿ ಯಾವಾಗಲೂ 90 ಕ್ಕೂ ಕಡಿಮೆ ಅಂಕ ಪಡೆಯುತ್ತಿರಲಿಲ್ಲ. ಆದ ದಿನಪೂರ್ತಿ ಓದುತ್ತಲೇ ಇರುತ್ತಿದ್ದ. ಆ ವರ್ಷದ ಬೇಸಿಗೆ ರಜಕ್ಕೆ ಆತ ಊರಿಗೇ ಹೋಗಿರಲ್ಲ. ನಾನು ವಾಪಸ್ಸು ಬಂದ ಮೇಲೆ ಆತನನ್ನ ಊಟಕ್ಕೆ ಏನು ಮಾಡ್ತಾ ಇದ್ದೆಯೋ ಅಂತ
ಕೇಳಿದೆ, ಅದಕ್ಕೆ ಅವನು ಹೆಚ್ಚು ಮಾತನಾಡದೇ ಅವನ ಮಂಚದ ಕೆಳಗೆ ನೋಡು ಅಂತ ಸನ್ನೆ ಮಾಡಿದ. ಬಗ್ಗಿ ನೋಡಿದಾಗ ಅಲ್ಲಿ ತಾಂಬೂಲಕ್ಕೆ ಕೊಡುವ ತೆಂಗಿನಕಾಯಿಗಳಿದ್ದವು. ನನಗೆ ಅರ್ಥ ಆಗಲಿಲ್ಲ. ಕಡೆಗೆ ಗೊತ್ತಾಯಿತು, ಅತ ಹುಡುಕಿ ಹುಡುಕಿ ಮದುವೇ ಛತ್ರಗಳಿಗೆ ಹೋಗ್ತಾ ಇದ್ದನಂತೆ... 'ಯಾರಿಗೂ ಸಿಕ್ಕಕೊಳ್ಳಲಿಲ್ಲವೇನೋ. ಅಂದೆ ಅದಕ್ಕೆ ಅವನು 'ಇಲ್ಲ ಕಣಮ್ಮಾ ಗಂಡಿನ ಕಡೆಯವನೂ ಅಂಥ ಹೆಣ್ಣಿನ ಕಡೆಯವರು. ಹೆಣ್ಣಿನ ಕಡೆಯವರು ಗಂಡಿನಕಡೆಯವರೂ ಅಂಥ ಸುಮ್ಮನೇ ಇರ್ತಾರೆ ಯಾರನ್ನೂ ಕೇಳಲ್ಲಾ' ಅಂದ. ನಾನು 'ಯಲಾ ಇವನಾ' ಅಂದು ಕೊಂಡೆ.
ಹೀಗೆ ಮಹಾರಾಜ ಕಾಲೇಜೆಂಬುದು ನನ್ನ ನೆನಪಿನ ಪುಟಗಳಲ್ಲಿ ಹಲವು ಬಿಡಿ ಬಿಡಿ ದಾಖಲಾಗಿ ಹೋಗಿವೆ. ಅವನ್ನ ಆಗಾಗ ಬರೆಯೋಣ ಅಂತ.