Showing posts with label ಬ್ಲಾಗ್. Show all posts
Showing posts with label ಬ್ಲಾಗ್. Show all posts

Tuesday, July 7, 2009

ಎನ್ಕೌಂಟರ್ ವಿಥ್ ಎಲಿಪೆಂಟ್....!!


ನನ್ನೂರು ಶುದ್ಧ ಬಯಲು ಸೀಮೆ ಪ್ರದೇಶವಾದ್ದರಿಂದ ನಮ್ಮ ಕಡೆ ಅರಣ್ಯ ಪ್ರದೇಶಗಳು ಕಮ್ಮಿ, ನಮ್ಮ ಕಡೆ ಮಕ್ಕಳು ನೀಲಗಿರಿ ತೋಪುಗಳನ್ನೇ ಕಾಡು ಅಂತ ತಿಳದುಕೊಳ್ಳುವಂತಾ ಪರಿಸ್ಥಿತಿ ಇದೆ, ನಮ್ಮ ಕಡೆಯ ನೀಲಗಿರಿ ಕಾದಿಟ್ಟ ಅರಣ್ಯಗಳಲ್ಲಿ ಕಾಣಿಸೋ ಕಾಡಿನ ಪ್ರಾಣಿಗಳಲ್ಲಿ ಹೆಚ್ಚೆಂದರೆ ನರಿ, ಮೊಲ, ಮುಳ್ಳಂದಿ, ನವಿಲು ಮುಂತಾದವು ಮಾತ್ರ. ನನಗಂತೂ ಕಾಡಿನ ಪ್ರಾಣಿಗಳೆಂದರೆ ಸಿಕ್ಕಾಪಟ್ಟೆ ಕುತೂಹಲ, ತೇಜಸ್ವಿ ಅವರ ಕಾಡಿನ ಕಥಾನಕಗಳನ್ನು ಓದಿಕೊಂಡ ಮೇಲಂತೂ ಕಾಡೆಂದರೆ ಹುಚ್ಟು, ಅಲ್ಲಿ ಕಾಡಲ್ಲಿ ಏನೋ ಇಂಟರಸ್ಚಿಂಗ್ ಆಗಿದ್ದು ನಡೀತಾ ಇದೆ ಅದನೆಲ್ಲಾ ತೇಜಸ್ವಿ ಕೂತೂಹಲದಿಂದ ನೋಡ್ತಾ ಇದಾರೆ, ಅದನ್ನೆಲ್ಲಾ ಮಂದಿನ ಬುಕ್ಕಲ್ಲಿ ನಮಗಾಗಿ ಬರೀತಾರೆ ಅಂತ ಇವಾಗಲೂ ಅನ್ನಿಸ್ತಾ ಇರತ್ತೆ. ಅವರು ಈಗ ಇಲ್ಲ ಅಂತ ನನಗೆ ನೆನಪಾಗೋದೆ ಕಮ್ಮಿ.
ಹಾಸನದಲ್ಲಿ ಇದ್ದ ಕಾರಣಕ್ಕೆ ನನಗೂ ಕಾಡಿನ ಅನುಭವಗಳನ್ನು ಅವರಿವರ ಹತ್ತಿರ ಕೇಳಕ್ಕೆ, ಕೆಲವು ಪ್ರಕರಣಗಳನ್ನ ವರದಿ ಮಾಡಕ್ಕೆ ಅವಕಾಶ ಸಿಕ್ಕಿತ್ತು.
ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಾಡು ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚು, ಕಾಡಿನಲ್ಲಿನ ಆಹಾರ ಸಿಕ್ಕದೆ ಹಸಿದು ಹೋಗುವ ಆನೆಗಳು ರೈತರ ತೋಟಗಳಿಗೆ ನುಗ್ಗುತ್ತವೆ, ಆನೆಗಳ ಉಪಟಳದಿಂದ ರೋಸಿ ಹೋಗಿರುವ ಇಲ್ಲಿನ ಜನಕ್ಕೆ ಆನೆ ಅಂದರೆ ರಾಕ್ಷಸ ಇದ್ದ ಹಾಗೆ, ಊರಿನ ಪಕ್ಕದ ಬೆಟ್ಟಕ್ಕೆ ಆನೆ ಬಂದವೆ ಅಂದ್ರೆ ರೈತರಿಗೆ ನಿದ್ದೆ ಹಾರಿ ಹೋಗಿಬಿಡುತ್ತೆ, ಆದರೆ ಟಿವಿಯಲ್ಲಿ ಆನೆ ನೋಡಿರುವ ನಮಗೆ ಆನೆ ಅಂದರೆ ಗಣೇಶ ಇದ್ದಂಗೆ ಶುದ್ಧ ಅಮಾಯಕ ಅಷ್ಠೇ. ಆದರೆ ಆನೆ ಎಷ್ಠು ಪ್ರಳಯಕಾರಿ ಅಂದರೆ ಗುಂಪು ಗುಂಪಾಗಿ ನುಗ್ಗಿದವು ಅಂದರೆ ಬೆಳೆದ ಬೆಳೆಯ ಕೊರಡು, ಕೊನರೂ ಉಳಿಯಲ್ಲಾ ಬೆಳೆಯನ್ನೆ ತಿಂದು, ತುಳಿದು ನಾಶಮಾಡಿ ಹೋಗುತ್ತವೆ.

ಎಲ್ಲಾ ಆನೆಗಳಿಗಿಂತ ಕಾಡಿನಲ್ಲಿ ಪುಂಡೆದ್ದು ಹೋಗಿರುವ ಪುಂಡಾನೆಗಳಂತೂ ಬಾರಿ ಅಪಾಯಕಾರಿ ಅಕಸ್ಮಾತಾಗಿ ಅವುಗಳ ಕೈಗೆ ಮನುಷ್ಯರೇನಾದರೂ ಸಿಕ್ಕಿದರೆ, ಗಿರ ಗಿರ ಅಂತ ಸುತ್ತಿಸಿ ಅಪ್ಪಚ್ಚಿ ಮಾಡಿ ಹಾಕುತ್ತವೆ, ನನ್ನ ಅನುಭವಕ್ಕೆ ಬಂದಂತೆ, ಕೂಲಿಗೆ ಹೋಗುವ ಕಾರ್ಮಿಕರು ವಾಪಸ್ಸು ಬರುವಾಗಲೋ, ಕಾಡಿಗೆ ಅಂತ ಹೋದವರನ್ನೋ, ಶೌಚಕ್ಕೆ ಅಂತ ಬಯಲಿಗೆ ಹೋದವರು ಆನೆ ದಾಳಿಗೆ ಸಿಕ್ಕಿ ಜನ ಸತ್ತಿದ್ದಾರೆ.. ಆದರೆ ಯಾವ ಪ್ರಾಣಿಗೆ ಸಿಕ್ಕಿ ಬದುಕಬಹುದೇನೋ ಆದರೆ ಆನೆ ತುಳಿತಕ್ಕೆ ಸಿಕ್ಕರೆ ಬದುಕುವುದು ಉಂಟಾ.

ಆನೆಗಳಿಗೆ ಸೇಂದಿ ಅಂದರೆ ಇಷ್ಠ ಅಂತ ಕೂಡ ನನಗೆ ಕೆಲವರು ಹೇಳಿದ್ದರು ಸಕಲೇಶಪುರದ, ಮತ್ತು ಕೊಡಗಿನ ಕಾಡುಗಳಲ್ಲಿ ಕಳ್ಳ ಬಡ್ಡಿ ತಯಾರಿಸುವ ಅಡ್ಡಾಗಳಿಗೆ ನುಗ್ಗಿ ಸಮಾ ಕಳ್ಳಬಟ್ಟಿ ಕುಡಿದು, ನಶೆ ಏರಿಸಿಕೊಂಡು ಆನೆಗಳು ರಾಜಾರೋಷವಾಗಿ ಹಳ್ಳಿಗಳಿಗೆ ನುಗ್ಗುವುದು ಉಂಟು.. ಕಳ್ಳಬಟ್ಟಿ ತಯಾರಿಸುವ ಕಳ್ಳ ಅಡ್ಡಾಗಳ ವಾಸನೆಯನ್ನ ಐವತ್ತೂ ಅರವತ್ತೋ ಕಿಲೋಮೀಟರ್ ದೂರದಿಂದಲೇ ಆಘ್ರಾಣಿಸುವ ಶಕ್ತಿ ಆನೆಗಳಿಗಳಿಗೆ ಇದೆಯಂತೆ, ಒಂದು ಸಾರಿ ಅರಕಲಗೂಡಿನ ಹಳ್ಳಿಯೊಂದಕ್ಕೆ ಕಳ್ಳಬಟ್ಟಿ ಕುಡಿದ ಆನೆಯೊಂದು ನುಗ್ಗಿ ದಾಂದಲೇ ಮಾಡಿದ್ದನ್ನ ಅರಕಲಗೂಡಿನ ನನ್ನ ಸ್ನೇಹಿತ ಜಯಕುಮಾರ್ ವರ್ಣಿಸಿದ್ದು ನನಗಿನ್ನೂ ನೆನಪಿದೆ.

ಸೀರಿಯಸ್ಸಾದ ವಿಷಯ ಏನೆಂದರೆ ಆನೆಗಳು ಇರಬೇಕಾದ ಅರಣ್ಯವನ್ನೆಲ್ಲಾ ಜನ ನಾಶ ಮಾಡಿದ್ದಾರೆ, ಇಲ್ಲಾ ಆನೆ ಇರಬೇಕಾದ ಜಾಗಕ್ಕೆ ಜನ ಹೋಗಿದ್ದಾರೆ ಈಗೀಗಂತೂ ಆನೆಗಳು ಇರಲಿಕ್ಕೆ ಅರಣ್ಯಗಳೇ ಇಲ್ಲದಂತೆ ಆಗಿಬಿಟ್ಟಿದೆ ಬಿಡಿ. ರೈತರು ತಮ್ಮ ಬೆಳೆ ಉಳಿಸಿಕೊಳ್ಳೋಕೆ ಅಂತ ವಿದ್ಯುತ್ ಬೇಲಿ ಹಾಕಿ ಹೈ ವೋಲ್ಟೇಜ್ ಕಂರೆಟು ಕೊಡೋದರಿಂದ ವರ್ಷಕ್ಕೆ ಏನಿಲ್ಲಾ ಅಂದರೂ ಇಪ್ಪತ್ತು ಆನೆಗಳು ಸಾಯ್ತಾ ಇವೆ, ಕೆಲವು ಪುಂಡರು ಆನೆಗಳಿಗೆ ಬಂದೂಕಿನಲ್ಲಿ ಸಣ್ಣ ಸಣ್ಣ ಗುಂ
ಡು ಗಳನ್ನ ಹಾಕಿ ಹೊಡೆಯುತ್ತಾಂತೆ ಗುಂಡು ತಗುಲಿದ ಆನೆಗಳು ಅತ್ತ ಸಾಯಲೂ ಆಗದೆ ಇತ್ತ ಬದುಗಲೂ ಆಗದೆ ವಿಪರೀತ ನೋವಿನಿಂದ ರೊಚ್ಚೆ ಹಿಡಿದು ಗಲಾಟೆ ಎಬ್ಬಿಸಿ ನಿದಾನಕ್ಕೆ ಸಾಯುತ್ತವಂತೆ. ಅರಣ್ಯ ಇಲಾಖೆ?ವರು ರೈತರಿಂದ ಒದೆ ಬೀಳುವ ಭಯದಿಂದ ಸರ್ಕಾರಕ್ಕೆ ನಿಜವಾದ ವರದಿ ಸಲ್ಲಿಸದೇ ತಪ್ಪು ವರದಿ ಮಾಡಿ, ಆಹಾರ ವ್ಯಾತ್ಯಾಸದಿಂದ ಆನೆ ಸತ್ತಿದೆ ಅಂತ ಬರೆಯುತ್ತಾರೆ. ಜನ ಆನೆ ಸತ್ತಾಗ ವಿಪರೀತ ಭಕ್ತಿಯಿಂದ, ಆನೆಯನ್ನ ಥೇಟು ಗಣೇಶನಂತೆ ಸಿಂಗರಿಸಿ, ಆನೆ ಹಣೆಗೆ ವಿಭೂತಿ ಬಳಿದು ದಪನ್ ಮಾಡುತ್ತಾರೆ.

ಆನೆ ಬಗ್ಗೆ ನೋಡಿ ಕೇಳಿ ತಿಳಿದಿರುವ ನಮಗೂ ಆನೆಗೂ ಒಮ್ಮೆ ಎನ್ಕೌಂಟರ್ ಆಗಿತ್ತು, ನಾನು, ಈಶ, ಗೋವಿಂದ ಒಮ್ಮೆ ಬೇಜಾರು ಕಳೆಯೂಕೆ ಅಂತ ಕೊಡಗಿಗೆ ಹೋಗಿದ್ದವರು ನಾಗರಹೋಳೆ ಕಾಡಿನಿಂದ ಹೆಗ್ಗಡದೇವನಕೋಟೆಗೆ ಹೋಗೋದು ಅಂತ ತೀರ್ಮಾನ ಮಾಡಿದೆವು ನಾವು ಕೊಡಗಿನ ಕಡೆಯಿಂದ ಕಾಡಿನ ಹಾದಿ ಹಿಡಿಯಲಿಕ್ಕೆ ಸಂಜೆ ಆಗಿಬಿಟ್ಚಿತ್ತು, ಅರಣ್ಯ ಇಲಾಖೆ ಗಾರ್ಡ್ ಒಬ್ಬ ಒಳಗೆ ಬಿಡಲ್ಲಾ ಅಂದರೂ ಬಿಡದ ನಾವು ಅವನ ಕೈಬಿಸಿ ಮಾಡಿ ಕಾಡಿನ ರಸ್ತೆಯಲ್ಲಿ ನಿಧಾನವಾಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದೆವು, ನಮ್ಮ ಪುಣ್ಯಕ್ಕೆ ಅಲ್ಲಲ್ಲಿ ಜಿಂಕೆಗಳು, ನವಿಲುಗಳು, ಕಾಡೆಮ್ಮೆಗಳು ಕಂಡವು. ಕಾಡೆಂಮ್ಮೆಗಳಂತೂ ತಿಂದು ಕೊಬ್ಬಿ ಭಯ ಹುಟ್ಚಿಸುವ ಆಕಾರದಲ್ಲಿದ್ದವು ನಾವೂ ಭಯ ಮಿಶ್ರತ ಕೂತೂಹಲದಲ್ಲಿ ಮಂದುವರೆದೆವು.. ಬಹುಶ ಕಾಡಿನ ಹಾದಿ ಅರ್ಧ ಸವೆದಿರಬೇಕು ತಟ್ಟನೆ ಸಿಕ್ಕ ಎರಡು ದಾರಿಗಳಲ್ಲಿ ಯಾವಕಡೆ ಹೋಗಬೇಕೋ ತಿಳಿಯದೆ ದಾರಿ ತಪ್ಪಿದೆವು.

ಹಾಗೆ ಮುಂದುವರೆಯುತ್ತಿದ್ದಾ ಹತ್ತಿಪ್ಪತ್ತು ಆನೆಗಳು ಅವುಗಳ ಮರಿಗಳು ಹಿಂಡಾಗಿ ಮೇಯುತ್ತಿದ್ದವು ಅವನ್ನು ಕಂಡ ನಾವು ನೋಡುತ್ತಾ ಮುಂದುವರೆಯುತ್ತಿದ್ದಾಗ ಗುಂಪಿನಲ್ಲಿದ್ದ ಬಾರೀ ಆನೆಯೊಂದು ಓ ಅಂತ ಘೀಳಿಟ್ಟು ನಮ್ನನ್ನ ದಿಟ್ಟಿಸಿತು ನಮಗೆ ಭಯ ಆಯಿತಾದರೂ ಕಾರಿನಲ್ಲಿ ಕುಳಿತಿದ್ದರಿಂದ ದೈರ್ಯದಿಂದ ಇದ್ದೆವು. ಹಾಗೆ ಸ್ಪಲ್ಪ ಮುಂದಕ್ಕೆ ಹೋದ ನಮಗೆ ಎದುರಾದ ಅರಣ್ಯ ಇಲಾಖೆ ಜೀಪಿನ ಡ್ರೈವರ್ ಹತ್ತಿರ ದಾರಿ ವಿಚಾರಿಸಿಕೊಂಡು ಬಂದ ರಸ್ತೆಯಲ್ಲೇ ವಾಪ್ಪಸ್ಸಾಗಬೇಕಾಯಿತು.
ಮತ್ತೆ ಆನೆಗಳ ಹಿಂಡು ಇದ್ದ ಜಾಗಕ್ಕೆ ಬಂದಿದ್ದೆ ತಡ ಮಾರಾಯರೇ, ಹಿಂದೆ ನಮ್ಮನ್ನು ನೋಡಿ ಘೀಳಿಟ್ಟಿದ್ದ ಆನೆ ಮತ್ತೆ ಘೀಳಿಡುತ್ತಾ ನಮ್ಮತ್ತ ನುಗ್ಗಿತು ನನಗೆ ಏನು ಮಾಡಬೇಕೂ ತಿಳಿಯದೇ ಕಾರಿನ ಅಷ್ಠೂ ಆಕ್ಸಿಲೇಟರ್ ಒತ್ತಿ ವಿಪರೀತ ವೇಗದಲ್ಲಿ ಮುನ್ನುಗ್ಗಿದೆ, ಮತ್ತೆ ಹಿಂದಕ್ಕೆ ತಿರುಗಿದರೇ ಆನೆ ನಮ್ಮನ್ನೇ ಅಟ್ಟಾಡಿಸಿಕೊಂಡು ಬರ್ತಾ ಇತ್ತು, ನನ್ನ ಮತ್ತು ನನ್ನ ಗೆಳಯರಿಗೆ ಮೀಟರ್ ಅಪ್ ಅಂತಾರಲ್ಲಾ ಅದಾಗಿತ್ತು...!!
ನಾಸ್ತಿಕರಾಗಿದ್ದ ನಮಗೆ ನಾವು ನಂಬದ ದೇವರುಗಳೆಲ್ಲಾ ನೆನಪಾದರು, ಗಾಭರಿಯಾಗಿದ್ದ ನಾವು ನಾಗಾಲೋಟದಲ್ಲಿ ಹೆಗ್ಗಡದೇವನ ಕೋಟೆ ಕಡೆಗೆ ಪರಾರಿಯಾದೆವು, ಈಗ ನೆನೆಸಿಕೊಂಡರೂ ಮೈ ಜುಂ ಅನ್ನಿಸುತ್ತೆ, ಅವತ್ತೇನಾದರೂ ಆತುರದಲ್ಲಿ ನನ್ನ ಕಾರು ಆಪ್ ಆಗಿತ್ತೋ ಏನಾಗುತ್ತಿತ್ತೋ ಗೊತ್ತಿಲ್ಲಾ.. ಆ ಆನೆಗೆ ಯಾವ ರೀತಿ ರೊಚ್ಚಿಗೆದ್ದಿತ್ತೊ ಗೊತ್ತಿಲ್ಲ, ನಾವೇನಾದರೂ ಸಿಕ್ಕಿಕೊಂಡಿದ್ದರೆ ಕತೆ 'ಕಲಾಸ್' ಆಗುತ್ತಿತ್ತು ಅಂತ ಊಹಿಸಬೇಕಷ್ಟೆೇ.